ಗೀತಕ್ಕ ಸೋತರೂ ಜನರ ಮನಸ್ಸು ಗೆದ್ದಿದ್ದಾರೆ: ಸಚಿವ ಮಧು ಬಂಗಾರಪ್ಪ

| Published : Jun 11 2024, 01:32 AM IST

ಗೀತಕ್ಕ ಸೋತರೂ ಜನರ ಮನಸ್ಸು ಗೆದ್ದಿದ್ದಾರೆ: ಸಚಿವ ಮಧು ಬಂಗಾರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ಆಂತರಿಕವಾಗಿ ಸೋತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಆಯ್ಕೆಗೆ ಬೆಲೆ ಕೊಡಬೇಕು. ಅವರ ಅಭಿಪ್ರಾಯವನ್ನು ಗೌರವಿಸಬೇಕು. ಆದ್ದರಿಂದ, ಈ ಸೋಲು ಮುಂದಿನ ಬದಲಾವಣೆಗೆ ಸ್ಫೂರ್ತಿ ಆಗಲಿದೆ. ಚುನಾವಣೆಯಲ್ಲಿ 5.30 ಲಕ್ಷ ಮತ ಪಡೆಯುವ ಮೂಲಕ ಕ್ಷೇತ್ರದ ಮತದಾರರ ಹೃದಯ ಗೆ‍ದ್ದಿದ್ದೇವೆ. ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬಿ ಬಡವರ ಹಸಿವು ನೀಗಿಸುತ್ತಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಗೀತಕ್ಕ ಸೋತಿರಬಹುದು. ಆದರೆ, ಜನರ ಮನಸ್ಸು ಗೆದ್ದಿದ್ದಾರೆ ಎಂದು ಹೇಳಿದರು.

ನಗರದ ಆರ್ಯ ಈಡಿಗ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ''''''''ಕೃತಜ್ಞತಾ ಸಭೆ''''''''ಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಗೆದ್ದಿರಬಹುದು. ಆದರೆ, ಆಂತರಿಕವಾಗಿ ಸೋತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಆಯ್ಕೆಗೆ ಬೆಲೆ ಕೊಡಬೇಕು. ಅವರ ಅಭಿಪ್ರಾಯವನ್ನು ಗೌರವಿಸಬೇಕು. ಆದ್ದರಿಂದ, ಈ ಸೋಲು ಮುಂದಿನ ಬದಲಾವಣೆಗೆ ಸ್ಫೂರ್ತಿ ಆಗಲಿದೆ ಎಂದರು.

ಚುನಾವಣೆಯಲ್ಲಿ 5.30 ಲಕ್ಷ ಮತ ಪಡೆಯುವ ಮೂಲಕ ಕ್ಷೇತ್ರದ ಮತದಾರರ ಹೃದಯ ಗೆ‍ದ್ದಿದ್ದೇವೆ. ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬಿ ಬಡವರ ಹಸಿವು ನೀಗಿಸುತ್ತಿದೆ. ಆದರೆ, ಜನರು ಗೀತಕ್ಕ ಕೈ ಹಿಡಿಯಲಿಲ್ಲ. ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ. ಬಿಜೆಪಿ ವಾಮಮಾರ್ಗ ಅನುಸರಿಸಿ ಅಧಿಕಾರಕ್ಕೆ ಬಂದಿದ್ದು ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.ಸಂಪರ್ಕಕ್ಕೆ ಸಿಕ್ಕ ಅವಕಾಶ:

ಲೋಕಸಭಾ ಚುನಾವಣೆ ಶಿವಮೊಗ್ಗ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಾತನಾಡಿ, ಚುನಾವಣೆ ಪೂರ್ವ ಕ್ಷೇತ್ರದ ಎಲ್ಲಾ ಭಾಗದಲ್ಲಿ ಸಂಚರಿಸಿ, ಜನರಿಗೆ ಹತ್ತಿರ ಆಗಿದ್ದೇವೆ. ಇದು ದಣಿವಲ್ಲ. ಕ್ಷೇತ್ರದ ಜನರನ್ನು ಸಂಪರ್ಕಿಸಲು ಸಿಕ್ಕ ಅವಕಾಶ. ಇದರಿಂದ ಜನ 5.30 ಲಕ್ಷಗಳ ಮತ ನೀಡಿ, ಆಶೀರ್ವದಿಸಿದ್ದಾರೆ‌. ಇದಕ್ಕೆ ಸಹಕರಿಸಿದ ಎಲ್ಲಾ ಮತದಾರರು ಹಾಗೂ ಕಾರ್ಯಕರ್ತರಿಗೆ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಬಿಜೆಪಿ ಸಿದ್ಧಾಂತಗಳಿಂದ ಭವಿಷ್ಯ ಇಲ್ಲ:

ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡಿ, ಸಾರ್ವಜನಿಕ ಜೀವನದಲ್ಲಿ ಸೋಲು-ಗೆಲುವು ಸಮನವಾಗಿ ಸ್ವೀಕರಿಸಬೇಕು. ಇಲ್ಲಿ ಸೋಲಿಗೆ ಎದೆಗುಂದಕೂಡದು. ಇದು ನನ್ನ ಅನುಭವದ ಮಾತು. ಆದ್ದರಿಂದ ಸೋಲಿಗೆ ಕಾರಣಗಳ ಕಂಡುಕೊಂಡು, ಜನ ಸಾಮಾನ್ಯರಿಗೆ ಹತ್ತಿರವಾಗಿ ಸೇವೆ ಸಲ್ಲಿಸಬೇಕು ಎಂದರು. ಈ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಿರುವುದು ಕುರ್ಚಿ ಮಾತ್ರ, ಕುರ್ಚಿಯ ಕಾಲು ಬೇರೆಯವರ ಬಳಿ ಇದೆ. ಕಾಂಗ್ರೆಸ್ ಸೈದ್ಧಾಂತಿಕ ನಿಲುವು ತೆಗೆದುಕೊಂಡಿದೆ. ಇಲ್ಲಿ ಬಿಜೆಪಿ ಸಿದ್ಧಾಂತಗಳಿಂದ ದೇಶಕ್ಕೆ ಭವಿಷ್ಯ ಇಲ್ಲ. ನರೇಂದ್ರ ಮೋದಿಯವರು ಸಂವಿಧಾನಕ್ಕೆ ನಮಸ್ಕರಿಸುವುದು ನಾಟಕ ಮಾತ್ರ. ಆದ್ದರಿಂದ, ದೇಶದ ಜನರು ಎಚ್ಚರಗೊಳ್ಳಬೇಕು. ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯಲ್ಲಿ ಸ್ಥಾನ ಪಡೆಯಬೇಕಿದೆ. ಇಲ್ಲವಾದರೆ, ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಲಿದೆ. ಆದ್ದರಿಂದ, ಕಾರ್ಯಕರ್ತರು ಸಜ್ಜಾಗಬೇಕು ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಗೌರವಯುತ ಸೋಲಾಗಿದೆ. ಈ ಸೋಲು ರಾಜಕೀಯದ ಅಂತ್ಯ ಖಂಡಿತ ಅಲ್ಲ. ದೇಶದಲ್ಲಿ 400 ಸ್ಥಾನ ಪಡೆಯುತ್ತೇನೆ ಎನ್ನುತ್ತಿದ್ದ ಬಿಜೆಪಿ ಬಹುಮತ ಕೂಡ ಗಳಿಸಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದರು.‌ ಆದರೆ, ಆ ಕ್ಷೇತ್ರದಲ್ಲಿ ಶ್ರೀ ರಾಮನೇ ಬಿಜೆಪಿಯ ಸೋಲಿಸಿದನು. ಆದ್ದರಿಂದ, ಬಿಜೆಪಿಯ ಅಂತ್ಯಕ್ಕೆ ಆರಂಭಗೊಂಡಿದೆ ಎಂದರು. ದೇಶದಲ್ಲಿ ಆದಷ್ಟು ಬೇಗ ಬಿಜೆಪಿ ಸರ್ಕಾರ ಕುಸಿದು ಬೀಳಲಿದೆ. ಮುಂದಿನ ಎರಡು ವರ್ಷದಲ್ಲಿ ಮತ್ತೊಂದು ಚುನಾವಣೆ ಎದುರಿಸಲಿದ್ದೇವೆ. ಅದ್ದರಿಂದ, ಇದಕ್ಕೆ ಸಿದ್ಧತೆ ಅಗತ್ಯ. ಲೋಕಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರನನ್ನು ದ್ವೇಷಿಸುವುದಿಲ್ಲ. ಈ ಸೋಲನ್ನು ಪ್ರೀತಿಯಿಂದ ಸ್ವೀಕರಿಸುತ್ತೇವೆ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್,ಎಸ್.ರವಿಕುಮಾರ್, ಬಲ್ಕೀಸ್ ಭಾನು, ಆರ್.ಎಂ.ಮಂಜುನಾಥ ಗೌಡ, ಎಚ್.ಸಿ.ಯೋಗೀಶ್, ನಾಗರಾಜ್ ಗೌಡ, ಎಂ.ಶ್ರೀಕಾಂತ್, ಬಿ.ಕೆ.ಮೋಹನ್, ಜಿ.ಪಲ್ಲವಿ, ಎನ್.ರಮೇಶ್,ಜಿ.ಡಿ.ಮಂಜುನಾಥ, ಎಸ್‌.ಕೆ.ಮರಿಯಪ್ಪ, ಚಂದ್ರಭೂಪಾಲ್, ಅನಿತಾ ಕುಮಾರಿ, ಮುಡುಬ ರಾಘವೇಂದ್ರ ಸೇರಿ ಕಾರ್ಯಕರ್ತರು ಇದ್ದರು.

--

ಶಕ್ತಿಧಾಮ ನಿರ್ಮಿಸುವೆ

ಶಿವಮೊಗ್ಗದಲ್ಲಿ ಶಕ್ತಿಧಾಮ ನಿರ್ಮಿಸುತ್ತೇವೆ, ಶೋಷಿತ ವರ್ಗಗಳಿಗೆ ನೆರಳಾಗಿರುತ್ತೇವೆ. ಅದೇ ರೀತಿ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ‌. ಜಿಲ್ಲೆಯಲ್ಲಿ ಮನೆ ಇಲ್ಲ ಎನ್ನುವ ಆರೋಪ ನಮ್ಮ ಮೇಲಿದೆ‌. ಇದಕ್ಕೆ ಉತ್ತರವಾಗಿ ಖಂಡಿತ ಮನೆ ನಿರ್ಮಾಣ ಮಾಡುತ್ತೇವೆ. ಕ್ಷೇತ್ರಕ್ಕೆ ಸಾಮಾಜಿಕ ಕೊಡುಗೆ ನೀಡಲು ಹೆಚ್ಚಿನ ಶ್ರಮ ಹಾಕುತ್ತೇವೆ.

-ಗೀತಾ, ಲೋಕಸಭೆ ಚುನಾವಣೆ ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ

-------------ಕೃತಜ್ಞತಾ ಸಭೆಯಲ್ಲಿ ಭುಗಿಲೆದ್ದ ಅಸಮಾಧಾನ

ನಗರದ ಈಡಿಗರ ಸಮುದಾಯ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಲೋಕಸಭಾ ಚುನಾವಣೆಗೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕೃತಜ್ಞತಾ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದಿದೆ. ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಅವರ ಎದುರೇ ಕಾರ್ಯಕರ್ತರು ಆಕ್ಷೇಪಿಸಿದ್ದಾರೆ. ಬೈಂದೂರಿನಲ್ಲಿ 56 ಸಾವಿರ ಮತ ಲೀಡ್ ಬರುತ್ತದೆ. ಸಾಗರದಲ್ಲಿ 26 ಸಾವಿರ ಲೀಡ್ ಬರುತ್ತದೆ. ನಗರದಲ್ಲಿ 35 ಸಾವಿರಕ್ಕೂ ಹೆಚ್ಚು ಮತಗಳು ಬರುತ್ತದೆ ಎಂದು ಇಷ್ಟು ದೊಡ್ಡ ದೊಡ್ಡ ಭಾಷಣ ಮಾಡುತ್ತೀರಿ, ಹಾಗಾದರೆ ಮತಗಳು ಯಾಕೆ ಬೀಳಲಿಲ್ಲ ಎಂದು ಸಭೆಯಲ್ಲಿ ಕಾರ್ಯಕರ್ತ ಸಿದ್ದಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಇತರೆ ಕಾರ್ಯಕರ್ತರು ಸಮಾಧಾನಗೊಳಿಸಿದರು.

--------------------------

ಪೋಟೋ: 10ಎಸ್‌ಎಂಜಿಕೆಪಿ01

ಶಿವಮೊಗ್ಗ ನಗರದ ಆರ್ಯ ಈಡಿಗ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯಲ್ಲಿ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ''''''''ಕೃತಜ್ಞತಾ ಸಭೆ''''''''ಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.