ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಲಿಂಗತ್ವ ಅಲ್ಪ-ಸಂಖ್ಯಾತರೂ ಕೂಡ ಸಮಾಜದ ಮುಖ್ಯ ಭಾಗವಾಗಿರುವುದರಿಂದ ಸಹಾನುಭೂತಿಗಿಂತ ಸಮಾನ ಅವಕಾಶ ನೀಡುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಅಕ್ಕೈ ಪದ್ಮಶಾಲಿ ಅಭಿಪ್ರಾಯಪಟ್ಟರು.

ನಗರ ಹೊರವಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ಚಕೋರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾರತಮ್ಯ ಸಮಾಜದ ಉದ್ದೇಶ ಅರಿತು ನಮ್ಮ ಗುರಿಯನ್ನು ಸಾಧಿಸಲು ಜಾಗರೂಕತೆಯಿಂದ ಮುಂದಾಗಬೇಕು. ಪಲ್ಲಟಗೊಂಡಿರುವ ಸಮಾಜದಲ್ಲಿ ಜೀವಿಸುತ್ತಿರುವ ನಮಗೆ ನಮ್ಮ ಆದ್ಯತೆಗಳು ಏನಾಗಿರಬೇಕು ಎಂಬ ಬಗ್ಗೆ ಸ್ಪಷ್ಟತೆಯಿರಬೇಕು. ಇಂದು ನಮ್ಮದಲ್ಲದ ಜಗತ್ತನ್ನು ನಮಗೆ ಕಾಣಿಸುತ್ತಿರುವುದು ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಎಂದರು.

ಯುವಶಕ್ತಿಯ ಬದುಕಿನ ಹಕ್ಕಾದ ಉದ್ಯೋಗದ ಸಮಸ್ಯೆ ನಿವಾರಣೆಗೆ ಮುಂದಾಗದ ಪ್ರಭುತ್ವಗಳು, ವರ್ತಮಾನಕ್ಕೆ ಕುರುಡಾಗಿರುವ ಸಂದರ್ಭವನ್ನು ನಾವಿಂದು ಕಾಣುತ್ತಿದ್ದೇವೆ. ಯುವ ಶಕ್ತಿ ಜಾಗೃತರಾಗಿ ತಮ್ಮ ಪಾಲಿನ ಹಕ್ಕುಗಳನ್ನು ಪಡೆಯಲು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು. ಆಗ ಮಾತ್ರವೇ ಸಾಂವಿಧಾನಿಕ ಹಕ್ಕುಗಳನ್ನು ಉಳಿಸಿಕೊಳ್ಳಲು ಸಾಧ್ಯ ಎಂದರು.

ಪ್ರಾಂಶುಪಾಲ ಜಿ.ಡಿ. ಚಂದ್ರಯ್ಯ ಮಾತನಾಡಿ, ಹೆಣ್ಣು ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಅಂಕ ಗಳಿಸುವುದಷ್ಟೇ ಓದಿನ ಉದ್ದೇಶವಾಗಬಾರದು. ಅಂಕಗಳನ್ನು ಮೀರಿದ ಆರೋಗ್ಯಕರ ಸಮಾಜ ಕಟ್ಟುವುದು ನಮ್ಮ ಜವಾಬ್ದಾರಿಯಾಗಬೇಕಿದೆ. ಈ ದಿಸೆಯಲ್ಲಿ ಕಾಲೇಜಿನಲ್ಲಿ ಹತ್ತು ಹಲವು ಕಾರ್ಯಕ್ರಮಗಳಿಗೆ ಅವಕಾಶ ಒದಗಿಸಲಾಗುತ್ತಿದೆ ಎಂದರು.


ನಂದಿ ಪ್ರೌಢಶಾಲೆಯ ಶಿಕ್ಷಕ ತತ್ತೂರು ಲೋಕೇಶಪ್ಪ ಕಾಯಕಯೋಗಿ ಬಸವಣ್ಣನವರ ಚಿಂತನೆಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ ನಡೆ ಮತ್ತು ನುಡಿಯ ಸಾದೃಶ್ಯದ ಬಗ್ಗೆ ವಚನಕಾರರು ಹೇಳಿದಂತೆ ಬೇರಾರೂ ಹೇಳಿರಲು ಸಾಧ್ಯವಿಲ್ಲ. ಮನುಷ್ಯರಾಡುವ ಮಾತಿಗೆ ಮುತ್ತು, ಮಾಣಿಕ್ಯ, ಸ್ಪಟಿಕದ ಗುಣವಿದೆ ಎಂಬುದನ್ನು ತೋರಿಸಿ ಕೊಟ್ಟ ಬಹು ದೊಡ್ಡ ದಾರ್ಶನಿಕ ಬಸವಣ್ಣ ಎಂದರು.ಹತ್ತು ಹಲವು ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲ್ಯಾಣದ ಕ್ರಾಂತಿ, ವಚನ ಚಳವಳಿ, ಅನುಭವ ಮಂಟಪ, ದಾಸೋಹದ ಮಹತ್ವ, ಸಾಮರಸ್ಯದ ಜಗತ್ತಿನ ಹೆಚ್ಚುಗಾರಿಕೆಯ ಬಗ್ಗೆ ತಿಳಿಸಿಕೊಟ್ಟರು.

ಚಕೋರ ಜಿಲ್ಲಾ ಸಂಚಾಲಕರಾದ ಪಾತಮುತ್ತುಕದಹಳ್ಳಿ ಚಲಪತಿಗೌಡ, ಈಧರೆ ಪ್ರಕಾಶ್ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯ ಕ್ರಮದ ಮೂಲಕ ಸಾಮಾನ್ಯ ಜ್ಞಾನದ ಪರಿಚಯ ಮಾಡಿಕೊಡಲಾಯಿತು.ಈ ವೇಳೆ ಮಹಿಳಾ ಹೋರಾಟಗಾರ್ತಿ ಸೌಮ್ಯ, ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೋಣ್ಣೇಗೌಡ, ಉಪನ್ಯಾಸಕರಾದ ಹಾಲಪ್ಪ, ಹೆಚ್. ಹರೀಶ್‌ಬಾಬು, ನರಸಿಂಹ ಮೂರ್ತಿ, ವೆಂಕಟೇಶಪ್ಪ, ವಿದ್ಯಾರ್ಥಿಗಳು ಮತ್ತಿತರರು ಇದ್ದರು. ಸಿಕೆಬಿ-2 ನಗರ ಹೊರವಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಚಕೋರ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಅಕ್ಕೈ ಪದ್ಮಶಾಲಿ ಮಾತನಾಡಿದರು.