ಕುಲಾಂತರಿಯಿಂದ ಮನುಕುಲಕ್ಕೆ ಕ್ಯಾನ್ಸರ್‌

| Published : Sep 30 2024, 01:17 AM IST

ಸಾರಾಂಶ

ತುಮಕೂರು: ಕ್ಯಾನ್ಸರ್‌ಗೆ ಮೂಲ ಕಾರಣ ಕುಲಾಂತರಿ ತಳಿ ಎಂಬುದು ಹಲವಾರು ಸಂಶೋಧನೆಗಳಿಂದ ದೃಡಪಟ್ಟಿದೆ. ಹಾಗಾಗಿ ರೈತರು ಕುಲಾಂತರಿ ತಳಿ ಬೀಜಗಳನ್ನು ಬಳಸುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ತುಮಕೂರು: ಕ್ಯಾನ್ಸರ್‌ಗೆ ಮೂಲ ಕಾರಣ ಕುಲಾಂತರಿ ತಳಿ ಎಂಬುದು ಹಲವಾರು ಸಂಶೋಧನೆಗಳಿಂದ ದೃಡಪಟ್ಟಿದೆ. ಹಾಗಾಗಿ ರೈತರು ಕುಲಾಂತರಿ ತಳಿ ಬೀಜಗಳನ್ನು ಬಳಸುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ತಾಲೂಕಿನ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮದಲ್ಲಿ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.

ಕುಲಾಂತರಿ ಬೀಜಗಳಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಹೇಳತೀರದು. ಇದು ಇಡೀ ರಾಜ್ಯವಲ್ಲ, ದೇಶವನ್ನು ವ್ಯಾಪ್ತಿಸಬೇಕಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಿಟ್ಟು ಹೋಗಬೇಕಿದೆ. ಇದೇ ಈ ಸತ್ಯಾಗ್ರಹದ ಮೂಲ ಆಶಯವಾಗಿದೆ. ವಿಜ್ಞಾನಿಗಳು, ರೈತರು, ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಾಡಿಗೆ ಒಳ್ಳೆಯ ಸಂದೇಶ ನೀಡುತ್ತಿದೆ ಎಂದರು.

ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ, ರಾಜಕಾರಣಿಗಳಲ್ಲಿ ಭಿನ್ನಾಭಿಪ್ರಾಯ ಸಹಜ, ಆದರೆ ಕುಲಾಂತರಿ ತಳಿ ಬೀಜಗಳ ಬಗ್ಗೆ ಕೃಷಿ ವಿಜ್ಞಾನಿಗಳಲ್ಲಿಯೂ ಭಿನ್ನಾಭಿಪ್ರಾಯವಿರುವುದು ದುರಂತವೇ ಸರಿ. ಇಲ್ಲಿನ ಕೂಗು ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚೆಯಾಗಬೇಕು. ಆ ಮೂಲಕ ಒಂದು ಪ್ರಭಲವಾದ ವಿರೋಧ ಸರಕಾರಕ್ಕೆ ಮುಟ್ಟಬೇಕು. ವಿಷಮುಕ್ತ ಆಹಾರ, ಸಾಲ ಮುಕ್ತ ರೈತ ನಮ್ಮ ಉದ್ದೇಶವಾಗಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿ, ಯಾವುದೇ ಹೋರಾಟಕ್ಕೆ ಬೆಲೆ ಬರಬೇಕೆಂದರೆ ಒಗ್ಗಟ್ಟು ಮುಖ್ಯ. ಮನುಷ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಕುಲಾಂತರಿ ತಳಿ ಬೀಜಗಳ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರೆ ಮಾತ್ರ ಪ್ರಭಲವಾಗಿ ಬಹುರಾಷ್ಟ್ರೀಯ ಬೀಜ ಉತ್ಪಾಧನಾ ಕಂಪನಿಗಳ ಈ ಹುನ್ನಾರ ತಡೆಯಲು ಸಾಧ್ಯ ಎಂದರು.

ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, ಆಹಾರ, ನೀರು, ಬೀಜ, ಗೊಬ್ಬರ ಇವುಗಳು ನ್ಯಾಯಾಲಯದಲ್ಲಿ ತೀರ್ಮಾನವಾಗುವಂತಹ ವಿಷಯಗಳಲ್ಲ. ಭಾರತ ಶೇ೯೮ರಷ್ಟು ಸಣ್ಣ ಹಿಡುವಳಿದಾರರನ್ನು ಹೊಂದಿರುವ ದೇಶ. ಇಲ್ಲಿ ಶೇ೧೦೦ರಷ್ಟು ಯಾತ್ರಿಕ ಕೃಷಿ ಸಾಧ್ಯವಿಲ್ಲ. ಕೇಂದ್ರ ಸರಕಾರ ರೈತರ ಬೇಡಿಕೆಗಳಿಂದ ನುಣುಚಿಕೊಳ್ಳುವ ಸಲುವಾಗಿ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದೆ ಎಂದರು.ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಬಿಟಿ ಹತ್ತಿಯಿಂದ ನಮ್ಮ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳೇ ಮಾತನಾಡುತ್ತಿದ್ದಾರೆ. ಕುಲಾಂತರಿ ತಳಿಯ ಬಗ್ಗೆ ಸೂಕ್ತ ವಿರೋಧ ವ್ಯಕ್ತವಾಗದಿದ್ದರೆ ಕಾರ್ಪೋರೇಟ್ ಕೃಷಿ ದೇಶದ ರೈತರನ್ನು ಬಲಿ ಪಡೆಯಲಿದೆ. ನೀತಿ ರೂಪಗೊಂಡ ನಂತರ ಹೋರಾಡುವ ಬದಲು, ನೀತಿಯೇ ಬಾರದಂತೆ ತಡೆಯುವುದು ಅತ್ಯಂತ ಸೂಕ್ತ. ಹಾಗಾಗಿ ಇಂದಿನ ದೊಡ್ಡ ಹೊಸೂರು ಸತ್ಯಾಗ್ರಹ ಈ ಆಂದೋಲನದ ಆರಂಭವಷ್ಟೇ, ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.ವೇದಿಕೆಯಲ್ಲಿ ಕೃಷಿ ವಿಜ್ಞಾನಿಗಳಾದ ಡಾ.ಸಿದ್ದರಾಮೇಗೌಡ, ಡಾ.ನಾರಾಯಣಗೌಡ,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಡಾ.ಎಸ್.ನಾರಾಯಣ್, ವೆಂಕಟರಾಜು,ರವೀಶ್, ಜೆಡಿಯುನ ಕೆ.ಜಿ.ಎಲ್.ರವಿ, ರೈತ ಮುಖಂಡರು, ಯುವಜನರು ಪಾಲ್ಗೊಂಡಿದ್ದರು. ಸಾವಯವ ಕೃಷಿ, ಸಹಜ ಕೃಷಿ ಹಾಗೂ ಕೃಷಿಯಲ್ಲಿ ನೀರು, ಗೊಬ್ಬರ,ಮಣ್ಣಿನ ಫಲವತ್ತೆ ಕುರಿತಂತೆ ೧೨ಕ್ಕು ಹೆಚ್ಚು ಜನ ಸ್ವಯಂ ಸೇವಕರು ತೋಟದಲ್ಲಿ ಪ್ರಾತಕ್ಷಿಕೆಗಳ ಮೂಲಕ ಸತ್ಯಾಗ್ರಹಕ್ಕೆ ಬಂದ ರೈತರು, ರೈತ ಮಹಿಳೆಯರಿಗೆ ಮಾಹಿತಿ ನೀಡಿದರು.ರಾಸಾಯನಿಕ ಕೃಷಿಯ ಮೂಲಕ ಒಂದು ಎಕರೆಯಲ್ಲಿ ಐವತ್ತು ಕ್ವಿಂಟಾಲ್ ಭತ್ತ ಬೆಳೆದವ ಪ್ರಗತಿಪರ ರೈತನಲ್ಲ. ಸ್ವಾಭಾವಿಕ ಗೊಬ್ಬರಗಳನ್ನು ಬಳಸಿ, ಜನರಿಗೆ ವಿಷ ಮುಕ್ತ ಆಹಾರ ನೀಡುವವನೇ ನಿಜವಾದ ರೈತ. ಈ ನಿಟ್ಟಿನಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮ ಒಂದು ದೊಡ್ಡ ಪವಾಡವನ್ನೇ ಮಾಡಿದೆ

- ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ದಗಂಗಾ ಮಠಾಧ್ಯಕ್ಷರು.

ಗ್ಯಾಟ್ ಒಪ್ಪಂದ ಫಲವಾಗಿ ಒಂದೊಂದೇ ಆತಂಕಕಾರಿ ಬೆಳವಣಿಗೆಗಳು ಕೃಷಿವಲಯದಲ್ಲಿ ಕಾಣುತ್ತಿವೆ. ಬಿಟಿ ಹತ್ತಿಯನ್ನು ಎಷ್ಟೇ ತಡೆದರು ಕಳ್ಳಮಾರ್ಗದ ಮೂಲಕ ದೇಶ ಪ್ರವೇಶಿಸಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಹಾಗಾಗಿ ಬಿ.ಟಿ.ಬದನೆಯನ್ನು ತಡೆಯಲು ಸಾಧ್ಯವಾಯಿತು. ಅದೇ ರೀತಿ ಕುಲಾಂತರಿ ಬೀಜ ನೀತಿಯನ್ನು ತಡೆಯುವ ಹೋರಾಟ ನಡೆಯಲಿದೆ.

- ಅನಿಲ್‌ಹೆಗಡೆ, ಮಾಜಿ ಸದಸ್ಯರು ರಾಜ್ಯಸಭೆ.

ಸುಪ್ರಿಂಕೋರ್ಟ್‌ ನಿರ್ದೇಶನದಂತೆ ಕುಲಾಂತರಿ ತಳಿ ಬೀಜ ನೀತಿ ರೂಪಿಸಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಇದನ್ನು ಬಳಸಬೇಕಾದ ರೈತರು, ರೈತ ಮುಖಂಡರ ಗಣನೆಗೆ ತೆಗೆದುಕೊಂಡಿಲ್ಲ. ಸಾಧಕ, ಭಾಧಕಗಳ ಕುರಿತು ಚರ್ಚೆಯನ್ನೇ ನಡೆಸದೆ, ನೀತಿ ರೂಪಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.

- ಸಿ.ಯತಿರಾತು ಪರಿಸರವಾದಿ