ಸಾರಾಂಶ
₹10 ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಜೆಸ್ಕಾಂ ನೊಟೀಸ್ ನೀಡಿದೆ.
ಬಳ್ಳಾರಿ : ₹10 ಸಾವಿರಕ್ಕೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 100ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿಗೆ ಜೆಸ್ಕಾಂ ನೊಟೀಸ್ ನೀಡಿದ್ದು, ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡರೆ ವಿದ್ಯುತ್ ಕಳ್ಳತನದ ಅಡಿಯಲ್ಲಿ ಪ್ರಕರಣ ದಾಖಲಿವುಸುದಾಗಿ ಎಚ್ಚರಿಕೆ ನೀಡಿದೆ.
ಬಳ್ಳಾರಿ ನಗರದ 33, ವಿವಿಧ ತಾಲೂಕುಗಳ ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಶಾಲೆಗಳಿಗೆ ಇಂಥ ನೊಟೀಸ್ ಜಾರಿಯಾಗಿದೆಆಗಿರುವುದೇನು?:
ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಾರ್ಷಿಕ ಇಂತಿಷ್ಟೆಂದು ಶಾಲಾ ಅನುದಾನ ನೀಡುತ್ತದೆ. (ವಿದ್ಯುತ್ ಬಿಲ್, ಪೊರಕೆ, ಚಾಕ್ಪೀಸ್ ಮತ್ತಿತರ ಖರೀದಿಗೆ) ಆದರೆ, ಕಳೆದ ಐದಾರು ತಿಂಗಳಿನಿಂದ ಕೆಲ ಶಾಲೆಗಳಿಗೆ ಅನುದಾನ ನೀಡಿಲ್ಲ. ಅನೇಕ ಶಾಲೆಗಳಿಗೆ ಅನುದಾನ ಬಂದಿದ್ದರೂ ಬೇರೆ ಕಾರ್ಯಗಳಿಗೆ ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ ವಿದ್ಯುತ್ ಬಿಲ್ ಏರಿಕೆಯ ಕ್ರಮಾಂಕ ಕಂಡಿದೆ.
ಕೆಲ ಶಾಲೆಗಳ ವಿದ್ಯುತ್ ಬಿಲ್ ಬಾಕಿ ಮೊತ್ತ ₹15 ರಿಂದ 20 ಸಾವಿರದವರೆಗೆ ದಾಟಿದೆ. ಈ ಹಿನ್ನೆಲೆ ಜೆಸ್ಕಾಂ ವಿದ್ಯುತ್ ಬಾಕಿ ಉಳಿಸಿಕೊಂಡಿರುವ ಶಾಲೆಗಳಿಗೆ ನೊಟೀಸ್ ನೀಡಿದೆಯಲ್ಲದೆ, ವಾರದೊಳಗೆ ಬಿಲ್ ಪಾವತಿ ಮಾಡುವಂತೆ ಸೂಚಿಸಿದೆ.ರಾಜ್ಯದಲ್ಲಿನ ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿಯೊಂದು ಮನೆಗೆ ೨೦೦ಯುನಿಟ್ ಉಚಿತ ವಿದ್ಯುತ್ ಸೌಲಭ್ಯವನ್ನು ರಾಜ್ಯ ಸರ್ಕಾರ ಒದಗಿಸಿದೆ. ಇದರೊಂದಿಗೆ ಸರ್ಕಾರಿ ಶಾಲೆಗಳಿಗೆ, ಅಂಗನವಾಡಿಗಳಿಗೆ ಸಹ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದೆ.
ಆದರೆ, ಸರ್ಕಾರಿ ಆದೇಶ ಮುನ್ನದ ಬಾಕಿ ಹಣ ಕಟ್ಟಲೇಬೇಕು ಎಂದು ಜೆಸ್ಕಾಂ ಸೂಚನೆ ನೀಡಿರುವುದು ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸರ್ಕಾರಿ ಶಾಲೆಗಳಲ್ಲಿ ಉಚಿತ ವಿದ್ಯುತ್ ಸಂಪರ್ಕಕ್ಕಾಗಿ ಅನೇಕ ದಿನಗಳಿಂದ ಅರ್ಜಿ ಸಲ್ಲಿಸಿದರೂ ಈವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಬಾಕಿಯಿರುವ ವಿದ್ಯುತ್ ಬಿಲ್ ಪಾವತಿಗೆ ಅನುದಾನವಿಲ್ಲದ ಹಿನ್ನೆಲೆ ಸಾವಿರಾರು ರೂ. ಬಾಕಿ ಉಳಿದಿದೆ ಎಂದು ಶಾಲೆಗಳ ಮುಖ್ಯಗುರುಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸರ್ಕಾರಿ ಶಾಲೆಗಳಿಗೆ ಅನುದಾನ ಬಿಡುಗಡೆಯಾಗಿರುತ್ತದೆ. ಆದರೆ, ನಮ್ಮ ಮುಖ್ಯಗುರುಗಳು ಶಾಲೆಯ ಬೇರೆ ಕೆಲಸಗಳಿಗೆ ಬಳಸಿಕೊಂಡಿರುತ್ತಾರೆ. ಹೀಗಾಗಿಯೇ ಸಮಸ್ಯೆಯಾಗಿರಬಹುದು. ಆದರೆ, ಜಿಲ್ಲೆಯಲ್ಲಿ ಎಷ್ಟು ಶಾಲೆಗಳಿಗೆ ನೊಟೀಸ್ ನೀಡಲಾಗಿದೆ ಎಂಬ ಮಾಹಿತಿ ನನ್ನ ಬಳಿಯಿಲ್ಲ ಎಂದು ಡಿಡಿಪಿಐ ಬಿ.ಉಮಾ ತಿಳಿಸಿದ್ದಾರೆ.