ಸಾರಾಂಶ
ವನವಾಸಿ ಕಲ್ಯಾಣ ಕರ್ನಾಟಕ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಸ್ನೇಹ ಸಮ್ಮೇಳನ
ಕನ್ನಡಪ್ರಭ ವಾರ್ತೆ ಯಲ್ಲಾಪುರನಮ್ಮ ವಿದ್ಯಾರ್ಥಿ ನಿಲಯದಲ್ಲಿ ಕಲಿತ ಮಕ್ಕಳು ಸಂಸ್ಕಾರದ ಜೊತೆ ಶಿಕ್ಷಣ ಪಡೆದು ಜೀವನದಲ್ಲಿ ಸಾಧಕರಾಗಿದ್ದಾರೆ. ಶಿಕ್ಷಣ, ಆರ್ಥಿಕವಾಗಿ ತೀರ ಹಿಂದಿದ್ದ ಸಿದ್ದಿ, ವಾಲ್ಮೀಕಿ, ಕುಂಬ್ರಿ ಮರಾಠಿ, ಕುಣಬಿ ಮುಂತಾದ ಜನಾಂಗಗಳ ಮಧ್ಯೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಷ್ಟಸಾಧ್ಯವಾದುದು ಎಂದು ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮದ ಪೂರ್ವೋತ್ತರ ಕ್ಷೇತ್ರದ ನಿಲಯಗಳ ಪ್ರಮುಖ ಕೃಷ್ಣಮೂರ್ತಿ ಹೇಳಿದರು.
ವನವಾಸಿ ಕಲ್ಯಾಣ ಸಂಸ್ಥೆಯು ಪಟ್ಟಣದ ವೆಂಕಟ್ರಮಣ ಮಠದಲ್ಲಿ ಪೂರ್ವ ವಿದ್ಯಾರ್ಥಿಗಳ ಒಂದು ದಿನದ ರಾಜ್ಯಮಟ್ಟದ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು.ಅಭಿಯಾನದ ಮೂಲಕ ಗ್ರಾಮಗಳಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಮಕ್ಕಳನ್ನು ವನವಾಸಿ ಬಂಧುಗಳು ಸಂಸ್ಥೆಯ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಲು ಪ್ರಾರಂಭಿಸಿದರು. ಇಂದು ಅನೇಕ ವನವಾಸಿ ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆದು ಸೈನ್ಯದಲ್ಲಿ, ಸಮಾಜ ಸೇವೆಯಲ್ಲಿ, ಯೋಗ ಸಾಧನೆಯಲ್ಲಿ, ಸರಕಾರದ ವಿವಿಧ ಹುದ್ದೆಗಳಲ್ಲಿ ಅಲಂಕೃತರಾಗಲು ಸಾಧ್ಯವಾಯಿತು. ನಾವು ನಮ್ಮ ವ್ಯಕ್ತಿಗತ ಜೀವನದ ಜೊತೆಗೆ ಸಮಾಜದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದ್ದು ನಮ್ಮ ಕರ್ತವ್ಯ ಎಂದರು.
ಕ್ಷೇತ್ರ ಮಹಿಳಾ ಪ್ರಮುಖರಾದ ಕೌಸಲ್ಯ ರವೀಂದ್ರ ಭಾರತ ಮಾತೆ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿ ಸಮ್ಮೇಳನಕ್ಕೆ ಚಾಲನೆ ನೀಡಿದರು.ಅಖಿಲ ಭಾರತೀಯ ಕೇಂದ್ರ ಕಾರ್ಯಾಲಯ ಯಶ್ಪುರದ ಮುಖ್ಯಸ್ಥ ಶ್ರೀಪಾದ್ ಮಾತನಾಡಿ, ಅಖಿಲ ಭಾರತೀಯ ವನವಾಸಿ ಕಲ್ಯಾಣ ಸಂಸ್ಥೆಯ ಸಂಸ್ಥಾಪಕರಾದ ದಿ. ಬಾಳಾ ಸಾಹೇಬ್ ದೇಶಪಾಂಡೆರವರ ಸ್ಮಾರಕ ಭವನ ಕೇಂದ್ರ ಕಾರ್ಯಾಲಯ ಜಸ್ಪುರದಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಿದಂತೆ ಪೂರ್ವ ವಿದ್ಯಾರ್ಥಿಗಳು, ಕಾರ್ಯಕರ್ತರು, ಎಲ್ಲರೂ ಸಹಕರಿಸಬೇಕು ಎಂದರು.
ಧನಗರ ಗೌಳಿ ಜನಾಂಗದ ಯೋಗ ಸಾಧಕ ಲಕ್ಷ್ಮಣ್ ಬೋಡ್ಕೆ, ಪಶುವೈದ್ಯ ಕೊಂಡು ಕೋಕ್ರೆ, ಪ್ರಮುಖರಾದ ಅನಿತಾ ಸಂಜಯ್ ಜಂಗ್ಲೆ, ಗೋಪಾಲ ಮರಾಠಿ, ಭಾಸ್ಕರ್ ಸಿದ್ದಿ ಸಾಮಾಜಿಕ ಕಾರ್ಯ ಗುರುತಿಸಿ, ಸನ್ಮಾನಿಸಲಾಯಿತು.ತಮ್ಮನ್ನು ತಿದ್ದಿ ತೀಡಿ ಸಂಸ್ಕಾರವಂತರನ್ನಾಗಿ ಮಾಡಿದ ಗುರುಗಳಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಪೂರ್ವ ವಿದ್ಯಾರ್ಥಿಗಳು ತಕ್ಷಣವೇ ನಿರ್ಧರಿಸಿ ಕೃಷ್ಣಮೂರ್ತಿ, ಶ್ರೀಪಾದ್, ರವೀಂದ್ರ, ಕೌಸಲ್ಯ ಹಾಗೂ ಸುಮಂಗಲ, ವಿಜಯ ಅವರನ್ನು ಸನ್ಮಾನಿಸಿದ್ದು ಅತ್ಯಂತ ಭಾವುಕ ಕ್ಷಣವಾಗಿತ್ತು.
ಧನಗರ ಗೌಳಿ ಜನಾಂಗದ ಪ್ರಮುಖ ದೊಂಡು ಪಾಟೀಲ್, ಸೋನು ಬಾಯಿ ಪಂಗಡೆ, ರಾಜ್ಯದ ಸಹ ಸಂಘಟನಾ ಕಾರ್ಯದರ್ಶಿ ರವೀಂದ್ರ, ಸಂಘಟನಾ ಕಾರ್ಯದರ್ಶಿ ಮಣಿವಣ್ಣಾ, ಪೂರ್ವ ವಿದ್ಯಾರ್ಥಿನಿ ಪುಷ್ಪ ಮರಾಠಿ, ಪ್ರಾಂತ ಸಹ ಮಹಿಳಾ ಪ್ರಮುಖಿ ಗೌರಿ ಭಟ್ಟ, ಯುವಕಾರ್ಯ ಪ್ರಮುಖರಾದ ಕೇಶವ ಮರಾಠಿ ಉಪಸ್ಥಿತರಿದ್ದರು.ಮಂಜುಳಾ ಸಿದ್ದಿ ಹಾಡಿದರು. ಸಾವಕ್ಕ ಹಾಗೂ ಸುನಿತಾ ಪ್ರಾರ್ಥಿಸಿದರು. ವಿಠಲ್ ತಾಟೆ ಸ್ವಾಗತಿಸಿ, ಪರಿಚಯಿಸಿದರು. ರಾಜ್ಯ ನಿಲಯಗಳ ಪ್ರಮುಖ ಬೊಮ್ಮು ಪಾಟೀಲ್, ರಾಜ್ಯ ಶಿಕ್ಷಣ ಪ್ರಮುಖರಾದ ರಾಮಚಂದ್ರ ನಿರ್ವಹಿಸಿದರು.
;Resize=(128,128))
;Resize=(128,128))
;Resize=(128,128))