ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಕ್ಕಳಿಗೆ ಪರೀಕ್ಷೆ ಎಂಬ ಭಯವೇ ಅರ್ಧ ಖಿನ್ನತೆಗೆ ಜಾರಿಸಿ ಆರೋಗ್ಯ ಏರುಪೇರು ಮಾಡಲಿದೆ ಎಂದು ಅಂತಾರಾಷ್ಟ್ರೀಯ ಸುಗಮ ಸಂಗೀತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಎಚ್ಚರಿಸಿದರು.ಕೃಷ್ಣಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸ್ಪಂದನಾ ಪೌಂಢೇಶನ್ ನಾಡಗೀತೆ, ಸುಗಮ ಸಂಗೀತ ಶತಮಾನೋತ್ಸವ ನಾಡಗೀತೆ ಸಂಭ್ರಮದ ನೆನಪಿನಲ್ಲಿ ಆಯೋಜಿಸಿದ್ದ ಪರೀಕ್ಷಾ ಭಯ ಬಿಡಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾರ್ಚ್ ಎಂದರೆ ವಿದ್ಯಾರ್ಥಿಗಳಲ್ಲಿ ಆರೋಗ್ಯ ತಪ್ಪುವುದು, ಚಡಿಪಡಿಸುವುದಾಗಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರೀಕ್ಷಾ ಮಿತ್ರ, ಸ್ನೇಹಿಯಾಗಿದೆ. ಭಯ ಪಡದೆ ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.ಶಾಲೆಯಲ್ಲಿ ಸಿಂಧೋಳ್, ಸಿಳ್ಳೆಕ್ಯಾತ್ ವರ್ಗದ ಮಕ್ಕಳಿದ್ದು, ಈ ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮವಾಗಲಿ ಎಂಬ ಆಶಯ ತನ್ನದು. ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಟ್ರಸ್ಟಿನಿಂದ ಆಕರ್ಷಕವಾದ ವಾಚು ನೀಡಲಾಗುವುದು. ಸರ್ಕಾರಿ ಶಾಲೆ ಉಳಿಯಬೇಕು. ಹಳ್ಳಿಗಾಡಿನ ಮಕ್ಕಳು ನಗರ ಪ್ರದೇಶದ ಮಕ್ಕಳಿಗಿಂತ ಕಡಿಮೆಇಲ್ಲ ಎಂಬುದನ್ನು ಸಾಬೀತು ಪಡಿಸಬೇಕು ಎಂದು ಹುರಿದುಂಬಿಸಿದರು.
ಪೋಷಕರು, ವಿದ್ಯಾರ್ಥಿಗಳು ಮೊಬೈಲ್, ಟಿವಿಗಳಿಂದ ದೂರವಿರಿ. ವಿಶೇಷವಾಗಿ ಮಕ್ಕಳ ಆರೋಗ್ಯದ ಕಾಳಜಿ ವಹಿಸಬೇಕು. ಆಯಾಸವನ್ನು ನಿಯಂತ್ರಿಸಿಕೊಳ್ಳಲು ಮರಗಿಡಗಳ ಕೆಳಗಡೆ ಕೂತು ಓದಿದರೆ ಜ್ಞಾಪಕ ಶಕ್ತಿ ವೃದ್ಧಿಸಲಿದೆ. ಬೇಸರಕ್ಕೆ ಸಣ್ಣದಾಗಿ ಸುಗಮ ಸಂಗೀತ ಗಾಯನ ಹೇಳಿಕೊಳ್ಳಿ ಎಂದು ಸಲಹೆ ನೀಡಿದರು.
ಪರಿಸರ ಪ್ರೇಮಿ ಊಗಿನಹಳ್ಳಿ ವೆಂಕಟೇಶ್ ವಿವೇಕಾನಂದರ ಕುರಿತು ಪುಸ್ತಕ ವಿತರಿಸಿದರು. ಮುಖ್ಯಶಿಕ್ಷಕ ಎಂ.ಎನ್. ರಮೇಶ್, ಕಲಾವಿದ ಅಭಿಷೇಕ್ ರಾಂ ಪ್ರಸಾದ್, ಶಿಕ್ಷಕ ಎಸ್. ಗೋವರ್ಧನ, ಆರ್.ಪಿ.ರಾಘವೇಂದ್ರ, ಜಿ.ಜಿ. ಪುಷ್ಪಾವತಿ, ಪ್ರಮೀಳಾ, ಅಂಜು.ಸಿ.ಗೌಡ. ಅಸ್ಮಿಯಾ ತಮಸುಮ್ ಇದ್ದರು.