ಶುಂಠಿ ಬೆಲೆ ಕುಸಿತ, ಕ್ವಿಂಟಲ್‌ಗೆ ₹ 7 ಸಾವಿರ ನಿಗದಿಗೆ ಆಗ್ರಹ

| Published : Jan 31 2025, 12:45 AM IST

ಸಾರಾಂಶ

ಶುಂಠಿಯ ದರ ಪಾತಾಳಕ್ಕೆ ಕುಸಿದಿದ್ದು, ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಕ್ವಿಂಟಲ್‌ಗೆ ಕನಿಷ್ಠ ₹7 ಸಾವಿರ ಬೆಲೆ ನಿಗದಿ ಮಾಡಿ 15 ದಿನಗಳಲ್ಲಿ ಶುಂಠಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಹಾವೇರಿ: ಶುಂಠಿಯ ದರ ಪಾತಾಳಕ್ಕೆ ಕುಸಿದಿದ್ದು, ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಕ್ವಿಂಟಲ್‌ಗೆ ಕನಿಷ್ಠ ₹7 ಸಾವಿರ ಬೆಲೆ ನಿಗದಿ ಮಾಡಿ 15 ದಿನಗಳಲ್ಲಿ ಶುಂಠಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದ ರೈತರು, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಶುಂಠಿ ಬೆಲೆ ಕುಸಿತದಿಂದ ಶುಂಠಿ ಬೆಳೆಗಾರರು ಬೀದಿಗೆ ಬರುವಂತಾಗಿದೆ. ಸದ್ಯಕ್ಕೆ ಒಂದು ಕ್ವಿಂಟಲ್ ಶುಂಠಿ ದರ ₹1500ರಿಂದ ₹2000 ವರೆಗೆ ಇದ್ದು, ರೈತರು ಹಾಕಿದ ಬಂಡವಾಳ ಕೈ ಸೇರದ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ. 2012 ಮತ್ತು 2023ರಲ್ಲಿ ಅರಿಶಿಣದ ಬೆಲೆ ಕುಸಿತವಾದಾಗ ಬೆಂಬಲ ಬೆಲೆ ಯೋಜನೆ ಜಾರಿ ಮಾಡಿ ಕರ್ನಾಟಕ ಹಾಗೂ ಅರುಣಾಚಲ ಪ್ರದೇಶದಲ್ಲಿ ಅರಿಶಿಣ ಖರೀದಿ ಮಾಡಲಾಗಿತ್ತು. ಅದರಂತೆ ರಾಜ್ಯದಲ್ಲಿ ಈ ಬಾರಿ ಶುಂಠಿ ಖರೀದಿ ಕೇಂದ್ರ ಸ್ಥಾಪನೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ರೈತರು ಶುಂಠಿ ನಾಟಿ ಮಾಡಿದ್ದು, ಬಿತ್ತನೆ ಖರ್ಚು, ತುಂತುರು ನೀರಾವರಿ ಸೆಟ್ ಅಳವಡಿಕೆ, ಕೀಟನಾಶಕ ಸಿಂಪಡಣೆ, ಕೂಲಿ ಆಳುಗಳ ವೆಚ್ಚ ಹೀಗೆ ಪ್ರತಿ ಎಕರೆಗೆ ₹2-3 ಲಕ್ಷ ಖರ್ಚಿದೆ. ದರ ಕುಸಿತದಿಂದ ಶುಂಠಿಗೆ ಹಾಕಿದ ಬಂಡವಾಳ ಕೂಡ ಕೈಸೇರುತ್ತಿಲ್ಲ. ಕೂಡಲೇ ಜಿಲ್ಲೆಯ ರೈತರನ್ನು ರಕ್ಷಿಸಲು ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ (ಎಂಐಎಸ್) ಕ್ವಿಂಟಲ್‌ಗೆ ಕನಿಷ್ಠ ₹7000 ನಿಗದಿ ಮಾಡಿ 15 ದಿನಗಳಲ್ಲಿ ಶುಂಠಿ ಖರೀದಿ ಕೇಂದ್ರ ಆರಂಭಿಸಿ, ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಶಿವಯೋಗಿ ಹೊಸಗೌಡ್ರ, ಮರಿಗೌಡ ಪಾಟೀಲ, ಅಶೋಕ ಬಣಕಾರ, ರುದ್ರಪ್ಪ ಅಣ್ಣಿ, ಸಂಗಪ್ಪ ಗುಂಡೂರ, ವರುಣ ಮಲ್ಲಿಗಾರ, ಸೋಮಣ್ಣ ಜಡೆಗೊಂಡ, ಷಣ್ಮುಖ ಅಂದಲಗಿ. ವಿ.ಎಸ್. ಗುಡಗೂರ, ಸುಭಾಸ್ ಬನ್ನಿಹಟ್ಟಿ ಪಾಲ್ಗೊಂಡಿದ್ದರು.