ಸಾರಾಂಶ
ಚಾಮರಾಜನಗರ: ಅನುಭವಿಗಳು, ಹಿರಿಯರು, ಅಭಿವೃದ್ಧಿ ಚಿಂತಕರು ಆದ ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ರಾಹುಲ್ ಗಾಂಧಿ ವಿಚಾರ ಮಂಚ್ ಸಂಘಟನೆಯ ರಾಜ್ಯಾಧ್ಯಕ್ಷ ರಾಜಶೇಖರ ಕಾಂಗ್ರೆಸ್ ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಎ.ಆರ್.ಕೃಷ್ಣಮೂರ್ತಿ ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕು ಎಂದರು. ಈಗಾಗಲೇ ಕಳೆದ ಎರಡು ವರ್ಷದ ಅವಧಿಯಲ್ಲಿ ಕ್ಷೇತ್ರಕ್ಕೆ 600 ರಿಂದ 700 ಕೋಟಿ ರು.ಅನುದಾನ ತಂದು ಕ್ಷೇತ್ರದಲ್ಲ ಹಲವಾರು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ, ಸದನದಲ್ಲಿ ಬಿ ಖಾತಾ ವಿಷಯವನ್ನು ಧ್ವನಿ ಎತ್ತಿದ ಮೊದಲ ಶಾಸಕರಾಗಿದ್ದಾರೆ ಎಂದರು.ಕ್ಷೇತ್ರಕ್ಕೆ ಮೂರು ಪಬ್ಲಿಕ್ ಶಾಲೆ, ಕೊಳ್ಳೇಗಾಲಕ್ಕೆ ಜಿಲ್ಲಾಸ್ಪತ್ರೆ, ಯಳಂದರೂ ಅಸ್ವತ್ರೆ ಮೇಲ್ದರ್ಜೆಗೆ, ಸಂತೇಮರಹಳ್ಳಿ ಮತ್ತು ಬಿಳಿರಂಗನಬೆಟ್ಟದಲ್ಲಿ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಕ್ರಮಕೈಗೊಂಡಿದ್ದಾರೆ, 24x7 ರೀತಿಯಲ್ಲಿ ಕ್ಷೇತ್ರದ ಜನರ ಸಮಸೈಗಳನ್ನು ಆಲಿಸುತ್ತಿದ್ದಾರೆ ಎಂದರು.ಬಸವಲಿಂಗಪ್ಪ, ಬಿ.ರಾಚಯ್ಯ ಅವರ ನಂತರ ಈ ಭಾಗದಲ್ಲಿ ಯಾವ ದಲಿತರು ಸಚಿವರಾಗಿಲ್ಲ, ಎಚ್.ಎಸ್.ಮಹದೇವಪ್ರಸಾದ್, ಆರ್.ಧ್ರುವನಾರಾಯಣರ ಸ್ಥಾನ ತುಂಬುವಂತಹ ಸಮರ್ಥ ನಾಯಕ ಯಾರಾದರೂ ಇದ್ದರೆ ಅವರು ಎ.ಆರ್.ಕೃಷ್ಣಮೂರ್ತಿ ಎಂದರು. ಎರಡು ಬಾರಿ ಶಾಸಕರಾಗಿ ಸಮರ್ಥವಾಗಿ ಕೆಲಸ ನಿರ್ವಹಿಸಿದ್ದಾರೆ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ಕಾಂಗ್ರೆಸ್ ಹೈಕಮಾಂಡ್ ಕ್ರಮವಹಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ, ಚಿಕ್ಕರಾಜು, ವೀರಣ್ಣ, ರೂಪೇಶ್ ಇದ್ದರು.