ಸಾರಾಂಶ
ಪ್ರಸ್ತುತ ಮಕ್ಕಳು ಮೊಬೈಲ್ ಪೀಡಿತರಾಗುತ್ತಿದ್ದು, ಇದರಿಂದ ಕಣ್ಣಿನ ದೃಷ್ಠಿ ಸಮಸ್ಯೆ ಜೊತೆಗೆ ತನ್ನ ಭವಿಷ್ಯವನ್ನೇ ಹಾಳು ಮಾಡುವ ಪರಿಸ್ಥಿತಿಗೆ ಬರುತ್ತಿದೆ. ಅದನ್ನು ತಪ್ಪಿಸಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಪದ್ಮಶ್ರೀ ಪುರಸ್ಕೃತೆ ಡಾ. ಜೋಗತಿ ಮಂಜಮ್ಮ ಸಲಹೆ ನೀಡಿದರು. ವಿದ್ಯೆ ಎಂಬ ಸಂಸ್ಕಾರ ಕೊಟ್ಟಾಗ ಮಾತ್ರ ಮಕ್ಕಳು ಸುಸಂಸ್ಕೃತರಾಗಲು ಸಾಧ್ಯ. ಶಾಲೆಯ ಶಿಕ್ಷಕರ ಜೊತೆಗೆ ಮನೆಯಲ್ಲೂ ಕೂಡ ಗುರು ಹಿರಿಯರನ್ನ ಗೌರವಿಸುವ ಉತ್ತಮ ಸಂಸ್ಕಾರವನ್ನು ನೀಡಬೇಕೆಂದರು.
ಕನ್ನಡಪ್ರಭ ವಾರ್ತೆ ಹಾಸನ
ಪ್ರಸ್ತುತ ಮಕ್ಕಳು ಮೊಬೈಲ್ ಪೀಡಿತರಾಗುತ್ತಿದ್ದು, ಇದರಿಂದ ಕಣ್ಣಿನ ದೃಷ್ಠಿ ಸಮಸ್ಯೆ ಜೊತೆಗೆ ತನ್ನ ಭವಿಷ್ಯವನ್ನೇ ಹಾಳು ಮಾಡುವ ಪರಿಸ್ಥಿತಿಗೆ ಬರುತ್ತಿದೆ. ಅದನ್ನು ತಪ್ಪಿಸಿ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದು ಪದ್ಮಶ್ರೀ ಪುರಸ್ಕೃತೆ ಡಾ. ಜೋಗತಿ ಮಂಜಮ್ಮ ಸಲಹೆ ನೀಡಿದರು.ನಗರದ ಸಾಲಗಾಮೆ ರಸ್ತೆ ಬಳಿ ಇರುವ ಪ್ರತಿಷ್ಠಿತ ವಿದ್ಯಾಸಂಸ್ಥೆ ಸ್ಕಾಲರ್ಸ್ ಶಾಲೆಯಲ್ಲಿ ೧೩ನೇ ವರ್ಷದ ಸ್ಕಾಲರ್ಸ್ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಹಾಲಿನಿಂದ ಬೆಣ್ಣೆಯ ತನಕ ಬೆಂಕಿ ಎಂಬ ಸಂಸ್ಕಾರ ಕೊಟ್ಟಾಗ ಮಾತ್ರ ಅದು ತುಪ್ಪವಾಗಲು ಸಾಧ್ಯ. ಹಾಗೆಯೇ ವಿದ್ಯೆ ಎಂಬ ಸಂಸ್ಕಾರ ಕೊಟ್ಟಾಗ ಮಾತ್ರ ಮಕ್ಕಳು ಸುಸಂಸ್ಕೃತರಾಗಲು ಸಾಧ್ಯ. ಶಾಲೆಯ ಶಿಕ್ಷಕರ ಜೊತೆಗೆ ಮನೆಯಲ್ಲೂ ಕೂಡ ಗುರು ಹಿರಿಯರನ್ನ ಗೌರವಿಸುವ ಉತ್ತಮ ಸಂಸ್ಕಾರವನ್ನು ನೀಡಬೇಕು. ಮಕ್ಕಳು ಮೊಬೈಲ್ ಪೀಡಿತರಾಗುತ್ತಿದ್ದಾರೆ. ಅದನ್ನು ತಪ್ಪಿಸಿ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿಸುವ ವೇದಿಕೆಯೇ ಶಾಲಾ ವಾರ್ಷಿಕೋತ್ಸವವಾಗಿದೆ ಎಂದರು. ಮಕ್ಕಳು ರಂಗುರಂಗಿನ ಉಡುಗೆ ತೊಟ್ಟು ಸುಮಧುರವಾದ ಗೀತೆಗಳಿಗೆ ಹೆಜ್ಜೆ ಹಾಕುವುದರ ಮೂಲಕ ಪ್ರೇಕ್ಷಕರ ಕಣ್ಮನ ತಣಿಸಿದರು. ಮಕ್ಕಳು ವೀರ ಯೋಧರಾಗಿ ದೇಶಕ್ಕೆ ಸೈನಿಕರ ಕೊಡುಗೆಯ ಬಗ್ಗೆ ಹಾಗೂ ರೈತರಾಗಿ ನೇಗಿಲ ಯೋಗಿಯ ಜೀವನದ ಸಾರವನ್ನು ಪ್ರತಿಬಿಂಬಿಸಿದರು. ಪರಶಿವನ ಪತ್ನಿಯಾದ ಸತಿಯ ಅಗ್ನಿ ಪ್ರವೇಶ, ಕೃಷ್ಣ ಲೀಲೆ, ಪ್ರಹ್ಲಾದನ ಭಕ್ತಿಯ ನೃತ್ಯವು ಅಮೋಘವಾಗಿತ್ತು. ಅಯ್ಯಪ್ಪನ ನೃತ್ಯವು ಪ್ರೇಕ್ಷಕರನ್ನು ಶಬರಿಮಲೆಗೆ ಕರೆದೊಯ್ದಂತಿತ್ತು. ದಸರಾ ನೃತ್ಯವು ನಮ್ಮ ನಾಡಿನ ವೈಭವವನ್ನು ನೆನಪಿಸುವಂತಿತ್ತು. ಹೀಗೆ ಹಲವಾರು ನೃತ್ಯಗಳು ನೋಡುಗರ ಮನಸ್ಸನ್ನು ಮುದಗೊಳಿಸಿದವು. ಶಾಸಕರಾದ ಎಚ್.ಪಿ. ಸ್ವರೂಪ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಚ್.ಎಲ್. ಮಲ್ಲೇಶಗೌಡ, ನಗರಸಭಾ ಅಧ್ಯಕ್ಷರಾದ ಎಂ. ಚಂದ್ರೇಗೌಡ, ಶಾಲೆಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ನಾಗರಾಜ್, ಶಾಲೆಯ ಆಡಳಿತಾಧಿಕಾರಿಗಳಾದ ಡಾ. ಎಚ್ .ಎನ್ ಚಂದ್ರಶೇಖರ್, ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಚಂದ್ರಶೇಖರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸ್ಕಾಲರ್ಸ್ ಸಂಭ್ರಮಕ್ಕೆ ಮೆರುಗು ತಂದುಕೊಟ್ಟರು.