ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ನೀಡಿ: ಶ್ರೀಗಳು

| Published : Aug 21 2025, 02:00 AM IST

ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ನೀಡಿ: ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಸಂಸ್ಕೃತಿ, ಶರಣ ಸಂಸ್ಕೃತಿ, ಕಾಯಕ ಸಂಸ್ಕೃತಿ, ಸಮಸಮಾಜ ಕಟ್ಟುವ ಸಂಸ್ಕೃತಿ ಎಷ್ಟೆ ವಿದ್ಯಾವಂತರಾಗಿ ಉತ್ತಮ ನೌಕರಿಯಲ್ಲಿ ಇದ್ದರೂ ವಿದೇಶದಲ್ಲಿದ್ದರೂ, ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳಿಸದೇ ಚೆನ್ನಾಗಿ ನೋಡಿಕೊಳ್ಳುವುದು ನಿಜವಾದ ಸಂಸ್ಕೃತಿ

ಗದಗ: ನಮ್ಮ ಸಂಸ್ಕೃತಿ ಭವ್ಯವಾಗಿದೆ. ಪ್ರತಿಯೊಬ್ಬರಿಗೂ ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಮುಖ್ಯ. ಮಕ್ಕಳಿಗೆ ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ನೀಡಬೇಕು. ಜಾತಿ ಮತ್ತು ಬೇಧವಿಲ್ಲದ ಸಂಸ್ಕೃತಿಯನ್ನು ಬಸವಾದಿ ಶಿವಶರಣರು ನೀಡಿದ್ದಾರೆ ಎಂದು ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

ನಗರದ ತೋಂಟದಾರ್ಯ ಮಠದಲ್ಲಿ ನಡೆದ ಲಿಂಗಾಯತ ಪ್ರಗತಿಶೀಲ ಸಂಘದ 2758ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸ್ಕೃತಿ ನಮ್ಮ ಆಚರಣೆಯಲ್ಲಿದೆ. ಹೆಣ್ಣುಮಕ್ಕಳಿಗೂ ಕೂಡ ಆಧ್ಯಾತ್ಮಿಕ ಸಂಸ್ಕೃತಿ ಕಲ್ಪಿಸಿದವರು ಶರಣರು. ಕಾಯಕ, ದಾಸೋಹ, ಸಮಾನತೆಯ ಮಹತ್ವ ವಿಶ್ವಕ್ಕೆ ಸಾರಿದರು. ವಚನ ಸಾಹಿತ್ಯ ಎಲ್ಲರಿಗೂ ಆವಶ್ಯ.ಶರಣ ಸಂಸ್ಕೃತಿಯ ಮೂಲ ಕನ್ನಡ ಭಾಷೆ ಎಂದರು.

ಧಾರವಾಡದ ಶಶಿ ಸಾಲಿ ಮಾತನಾಡಿ, ಭಾರತದ ಸಂಸ್ಕೃತಿ, ಶರಣ ಸಂಸ್ಕೃತಿ, ಕಾಯಕ ಸಂಸ್ಕೃತಿ, ಸಮಸಮಾಜ ಕಟ್ಟುವ ಸಂಸ್ಕೃತಿ ಎಷ್ಟೆ ವಿದ್ಯಾವಂತರಾಗಿ ಉತ್ತಮ ನೌಕರಿಯಲ್ಲಿ ಇದ್ದರೂ ವಿದೇಶದಲ್ಲಿದ್ದರೂ, ತಂದೆ ತಾಯಿಗಳನ್ನು ವೃದ್ಧಾಶ್ರಮಗಳಿಗೆ ಕಳಿಸದೇ ಚೆನ್ನಾಗಿ ನೋಡಿಕೊಳ್ಳುವುದು ನಿಜವಾದ ಸಂಸ್ಕೃತಿ ಎಂದರು.

ಈ ವೇಳೆ ಧಾರವಾಡದ ಸಂಗೀತ ಕಲಾವಿದೆ ಸುಜಾತಾ ಗುರವ ಅವರು ಅಕ್ಕ ಕೇಳವ್ವ ನಾನೊಂದು ಕನಸು ಕಂಡೆ ವಚನ ಹಾಡಿದರು. ಪ್ರತಿಷ್ಠಿತ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ ಅವರಿಂದ ವಾಣಿಜ್ಯ ರತ್ನ ಪ್ರಶಸ್ತಿ ಪಡೆದ ಗಣ್ಯ ಉದ್ಯಮಿ ಶರಣಬಸಪ್ಪ ಗುಡಿಮನಿ ಹಾಗೂ ಧರ್ಮಪತ್ನಿ ಸುಜಾತಾ ಅವರನ್ನು ಸನ್ಮಾನಿಸಲಾಯಿತು.

ವಚನಸಂಗೀತ ಸೇವೆಯನ್ನು ಗುರುನಾಥ್ ಸುತಾರ ಹಾಗೂ ರೇವಣಸಿದ್ದಯ್ಯ ಮರಿದೇವರಮಠ ನಡೆಸಿಕೊಟ್ಟರು. ಧರ್ಮಗ್ರಂಥ ಪಠಣವನ್ನು ನಿಶಾಂತ್ ವಿ.ಕಾಲವಾಡ ಹಾಗೂ ದೀಕ್ಷಾ ಎಂ.ಬುಳ್ಳಾ ನಡೆಸಿದರು. ದಾಸೋಹ ಸೇವೆಯನ್ನು ಮಾಜಿ ಸಚಿವ ಎಸ್.ಎಸ್.ಪಾಟೀಲ ಮತ್ತು ಕುಟುಂಬ ವರ್ಗದವರು ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕ ಸಿ.ಎಂ.ಪಾಟೀಲ, ಲಲಿತಾ ಕಾ. ಪಾಟೀಲ ಹಾಗೂ ಕುಟುಂಬ ವರ್ಗದವರು ವಹಿಸಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ.ಉಮೇಶ ಪುರದ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಮಹೇಶ್ ಗಾಣಿಗೇರ, ಬಸವರಾಜ ಕಾಡಪ್ಪನವರ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಇದ್ದರು. ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ನಿರೂಪಿಸಿದರು.