ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಂ ಜಯಂತಿ ಜ್ಞಾನದ ಹಬ್ಬವಾಗಿವೆ.

ಕನ್ನಡಪ್ರಭ ವಾರ್ತೆ ಹಳಿಯಾಳ

ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಂ ಜಯಂತಿ ಜ್ಞಾನದ ಹಬ್ಬವಾಗಿವೆ. ಈ ಮಹಾನ ನಾಯಕರ ಆದರ್ಶಗಳು ಸಮಾಜದ ಎರಡು ಕಣ್ಣುಗಳಂತಿವೆ. ಒಂದು ಸಂವಿಧಾನ ಮತ್ತು ನ್ಯಾಯ, ಇನ್ನೊಂದು ರೈತರ ಏಳಿಗೆ ಮತ್ತು ಸಾಮಾನ್ಯ ಜನರ ಸುಖ. ಇವರಿಬ್ಬರೂ ತೋರಿದ ಮಾರ್ಗವನ್ನು ಅನುಸರಿಸುವುದರಿಂದ ಸಮಾಜವು ವೈಚಾರಿಕವಾಗಿ ಬೆಳೆಯುತ್ತದೆ ಎಂದು ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ಹೇಳಿದರು.

ಮಂಗಳವಾರ ಪಟ್ಟಣದ ಪುರಭವನದಲ್ಲಿ ತಾಲೂಕಾಡಳಿತ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ಆಚರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರ ಆದರ್ಶಗಳ ಕನಸು ನನಸಾಗಬೇಕಾದರೇ ನಾವುಗಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು, ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ವಿದ್ಯೆಯನ್ನು ನೀಡಿ ಸಮಾಜದಲ್ಲಿ ಉನ್ನತ ಹುದ್ದೆ ಪಡೆಯುವ ಹಾಗೇ ಅವರನ್ನು ಬಾಲ್ಯದಿಂದಲೇ ಸಜ್ಜುಗೊಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆ.ಎಲ್.ಎಸ್ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಶಾಂತಾರಾಮ ಚಿಬುಲಕರ ಹಾಗೂ ದಲಿತ ಮುಖಂಡ ಪೋಮಣ್ಣ ದಾನಪ್ಪನವರ ಉಪನ್ಯಾಸ ನೀಡಿದರು.

ರೈತ ಮುಖಂಡ ನಾಗೇಂದ್ರ ಜಿವೋಜಿ ಹಾಗೂ ಪುರಸಭಾ ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ ಮಾತನಾಡಿದರು. ಸಾಧಕರಿಗೆ ಸನ್ಮಾನ: ಶಿಕ್ಷಣ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಾಧಕರನ್ನು ಸನ್ಮಾನಿಸಲಾಯಿತು.ಕುಸ್ತಿ: ಛತ್ತಿಸಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ಖೆಲೋ ಇಂಡಿಯಾ ಬುಡಕಟ್ಟು ಸಮುದಾಯದ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದ ತಾಲೂಕಿನ ಕ್ರೀಡಾ ವಸತಿ ಶಾಲೆಯ ಕುಸ್ತಿಪಟುಗಳಾದ ಮನಿಷಾ ಜೋನ್ ಸಿದ್ದಿ, ಶಾಲಿನಿ ಸಾವೇರ್ ಸಿದ್ದಿ, ರೋಹನ್ ಮೊತೇಸ್ ದೊಡ್ಮನಿ ಹಾಗೂ ಪ್ರಿನ್ಸಿಟಾ ಪೆದ್ರು ಫರ್ನಾಂಡೀಸ್ ಸಿದ್ದಿ ಅವರನ್ನು ಸನ್ಮಾನಿಸಲಾಯಿತು.ಎಸ್.ಎಸ್.ಎಲ್.ಸಿ ಪರೀಕ್ಷೆ 2024-25ನೇ ಸಾಲಿನಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ.ಜಾ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಶ್ರೇಯಾ ದಾಮೋದರ್ ಹೊಟ್ಕರ್, ಆದಿತ್ಯಾ ನಿಜಲಿಂಗಪ್ಪ ಬಡಿಗೇರ್ ಹಾಗೂ ಬ್ಲೇಸಿ ಚಂದ್ರಕಾಂತ್ ಚವ್ಹಾಣ ಅವರನ್ನು ಸನ್ಮಾನಿಸಲಾಯಿತು.ಪ್ರಬಂಧ ಸ್ಪರ್ಧೆ:

ಪ್ರೌಡಶಾಲಾ ಮಕ್ಕಳಿಗಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕುರಿತು ಆಯೋಜಿಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಜ್ಞಾನೇಶ್ವರಿ ಸಂಜಯ ಅಜ್ರೇಕರ, ಸ್ನೇಹಾ ಮಹೇಶ ಮಿರಾಶಿ, ಅನನ್ಯ ನಾಗೇಂದ್ರ ಸಾಮ್ರೇಕರ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಪಂ ಇಒ ವಿಲಾಸರಾಜ್ ಪ್ರಸನ್ನ, ಸಿಪಿಐ ಜಯಪಾಲ್ ಪಾಟೀಲ, ಸಮಾಜ ಕಲ್ಯಾಣಾಧಿಕಾರಿ ಅಶೋಕ ಪವಾರ, ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ದಲಿತ ಪ್ರಮುಖರಾದ ಹನುಮಂತ ಮೇತ್ರಿ, ಹನುಮಂತ ಚಲವಾದಿ, ಬಿ.ವಿ. ರಾಮಚಂದ್ರ, ಜಯಲಕ್ಷ್ಮೀ ಚವ್ಹಾಣ ಇದ್ದರು. ಕಾರ್ಯಕ್ರಮದಲ್ಲಿ ವಿವಿಧ ದಲಿತ ಸಂಘಟನೆಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಯಲ್ಲಾಪುರ ನಾಕಾದಿಂದ ಪಟ್ಟಣದ ಮುಖ್ಯ ಮಾರ್ಗವಾಗಿ ಮೆರವಣಿಗೆ ನಡೆಸಲಾಯಿತು.