ಸಾರಾಂಶ
ಆಧುನಿಕ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದ್ದು ಎಲ್ಲರೂ ಶಿಕ್ಷಣವಂತರಾದರೆ ಸಹಜವಾಗಿ ಸಮಾಜದ ಬೆಳವಣಿಗೆ ಸಾಧ್ಯವಾಗಲಿದೆ. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿರುವ ಉಪ್ಪಾರ ಸಮುದಾಯ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದೆ.
ಕುಷ್ಟಗಿ:
ಪ್ರಸ್ತುತ ದಿನಗಳಲ್ಲಿ ಜ್ಞಾನ ಜಗತ್ತನ್ನು ಆಳುತ್ತದೆ. ಆದ್ದರಿಂದ ಉಪ್ಪಾರ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣ ಕೊಡಿಸಬೇಕೆಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.ಪಟ್ಟಣದ ಎನ್ಸಿಎಚ್ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ ಹಾಗೂ ತಾಲೂಕು ಭಗೀರಥ ಉಪ್ಪಾರ ಸಮಾಜದ ವತಿಯಿಂದ ನಡೆದ ರಾಜಋಷಿ ಶ್ರೀಭಗೀರಥ ಮಹರ್ಷಿ ಜಯಂತಿ ಅಂಗವಾಗಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಸರ್ಕಾರಿ ನೌಕರರು, ನಿವೃತ್ತ ನೌಕರರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಆಧುನಿಕ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವವಿದ್ದು ಎಲ್ಲರೂ ಶಿಕ್ಷಣವಂತರಾದರೆ ಸಹಜವಾಗಿ ಸಮಾಜದ ಬೆಳವಣಿಗೆ ಸಾಧ್ಯವಾಗಲಿದೆ. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿರುವ ಉಪ್ಪಾರ ಸಮುದಾಯ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.ಉಪ್ಪಾರ ಸಮುದಾಯಕ್ಕೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲಾಗುತ್ತದೆ. ನಿವೇಶನ ಒದಗಿಸಿದರೆ ಪಟ್ಟಣದಲ್ಲಿ ಭಗೀರಥ ಸಮುದಾಯ ಭವನಕ್ಕೆ ಸರ್ಕಾರದಿಂದ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. ಈಗಾಗಲೇ ನಿಡಶೇಸಿ, ಚಳಗೇರಿಯಲ್ಲಿ ತಲಾ ₹ 25 ಲಕ್ಷ ವೆಚ್ಚದಲ್ಲಿ ಭಗೀರಥ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿವೆ ಎಂದು ತಿಳಿಸಿದರು.
ಭಗೀರಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವನಗೌಡ ಪಾಟೀಲ ಮಾತನಾಡಿದರು. ಶಿಕ್ಷಕ ರವಿನಾರಾಯಣ ಉಪ್ಪಾರ ವಿಶೇಷ ಉಪನ್ಯಾಸ ನೀಡಿದರು. ಉಪ್ಪಾರ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ವೇಳೆ ರಾಂಪೂರಹಳ್ಳಿ ಭಗೀರಥ ಆನಂದ ಪುರಿ ಸ್ವಾಮೀಜಿ, ಮಹದೇವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಅಧ್ಯಕ್ಷ ಸಂಗಪ್ಪ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಕೆ. ಶರಣಪ್ಪ ವಕೀಲರು, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ತಹಸೀಲ್ದಾರ್ ಅಶೋಕ ಶಿಗ್ಗಾವಿ, ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಭಯ್ಯಾಪುರ, ನೇಮಣ್ಣ ಮೇಲಸಕ್ರಿ, ವೆಂಕಟೇಶ ಸಿಂಧನೂರು, ಮಲ್ಲಣ್ಣ ಪಲ್ಲೇದ, ಸಂಗನಗೌಡ ಜಾಲಿಹಾಳ, ಪರಸಪ್ಪ ಗುಜಮಾಗಡಿ ಸೇರಿದಂತೆ ಅನೇಕ ಪ್ರಮುಖರು, ವಿವಿಧ ಸಮುದಾಯಗಳ ಹಿರಿಯರು, ಯುವಕರು ಮತ್ತು ಮಹಿಳೆಯರು ಇದ್ದರು.ಇದಕ್ಕೂ ಮೊದಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಗೀರಥ ಮಹರ್ಷಿ ಅವರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು. ಕುಂಭ-ಕಳಸ ಹೊತ್ತ ಮಹಿಳೆಯರು, ಡೊಳ್ಳು ಇತರೆ ಕಲಾ ತಂಡಗಳು ಗಮನ ಸೆಳೆದವು.