ಸಾರಾಂಶ
ಕುಮಟಾ: ಜೀವನದಲ್ಲಿ ಮಾರ್ಕ್ಸ್ಗಿಂತ ರಿಮಾರ್ಕ್ಸ್ ಅತಿ ಮುಖ್ಯ. ಗಳಿಸಿದ ಮಾರ್ಕ್ಸ್ ಒಮ್ಮೆ ಹೆಮ್ಮೆಪಡಲು ಬೇಕಾದರೆ ನಮ್ಮ ಬಗ್ಗೆ ಇತರರು ಕೊಡುವ ರಿಮಾರ್ಕ್ಸ್ ಜೀವನದ ಉದ್ದಕ್ಕೂ ಬೇಕಾಗುತ್ತದೆ. ಉತ್ತಮ ರಿಮಾರ್ಕ್ಸ್ ಪಡೆಯುವ ಜನರು ನಾವಾಗಬೇಕು. ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ನಿವೃತ್ತ ಶಿಕ್ಷಕ ರಾಜ್ಯ ಸಂಪನ್ಮೂಲ ವ್ಯಕ್ತಿ ಎಚ್.ಎನ್. ಪೈ ಅಭಿಪ್ರಾಯಪಟ್ಟರು.
ಅವರು ಎಚ್.ಎನ್. ಪೈ ಗುರುವಂದನಾ ಸಮಿತಿಯವರು ತಾಲೂಕಿನ ಗೋಗ್ರಿನ್ ಸಭಾಭವನದಲ್ಲಿ ಹಮ್ಮಿಕೊಂಡ ಎಸ್ಎಸ್ಎಲ್ಸಿ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಿ, ಮಾತನಾಡಿದರು.ಜೀವನದಲ್ಲಿ ಅಂಕಗಳು ಬೇಕು; ಆದರೆ ಅಂಕಗಳು ಕಡಿಮೆ ಬಂತೆಂದು ಜೀವನವನ್ನೇ ಹಾಳು ಮಾಡಿಕೊಳ್ಳಲು ಎಂದು ಮುಂದಾಗಬೇಡಿ. ಈಗ ನೀವು ಮಾಡಿರುವ ಸಾಧನೆ ಹೌದಾದರೂ ನಿರಂತರವಾಗಿ ಸಾಧನೆಯನ್ನು ಮಾಡುತ್ತಾ ಸಾಗಬೇಕು. ನಾನು ಸಾಧನೆ ಮಾಡಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾ, ಗರ್ವ ನಿಮ್ಮಲ್ಲಿ ಬಂದರೆ ಮುಂದೆ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.
ವಿದ್ಯಾರ್ಥಿಗಳು ವಿದ್ಯಾರ್ಜನೆಯ ನಂತರದಲ್ಲಿ ಭಾರತ ದೇಶದ ಸೇವೆ ಮಾಡುವಂತೆ ಆಗಬೇಕು. ವಿದೇಶಕ್ಕೆ ಹೋಗಿ ಹಣ ಗಳಿಸುವುದು ಮುಖ್ಯವಲ್ಲ. ಆದರೆ ದೇಶದಲ್ಲಿದ್ದು ಪ್ರೀತಿಸುವ ಜನರನ್ನು ಜೊತೆಯಲ್ಲೇ ಇಟ್ಟುಕೊಳ್ಳುವುದು ಅತೀ ಮುಖ್ಯ. ಎಲ್ಲಿಂದ ಎಲ್ಲಿಗೆ ಎನ್ನುವುದನ್ನು ಚಿಂತಿಸುವುದು ಬಿಟ್ಟು, ಇಲ್ಲಿಂದ ಎಲ್ಲಿಗೆ ಎನ್ನುವುದನ್ನು ನಿತ್ಯವೂ ಚಿಂತಿಸಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಕುಮಟಾ ಹೊನ್ನಾವರ ತಾಲೂಕಿನ ರಾಜ್ಯ ಪಠ್ಯಕ್ರಮದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರನ್ನು, ಕನ್ನಡ ಮಾಧ್ಯಮ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರನ್ನು, ಸಿಬಿಎಸ್ಸಿ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಮಂಜುನಾಥ ಭಟ್ಟ ಸುವರ್ಣಗದ್ದೆ ಸರ್ವರನ್ನೂ ಸ್ವಾಗತಿಸಿದರು. ಗಣೇಶ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ ದೇವಾಡಿಗ ವಂದಿಸಿದರು. ರಾಮಚಂದ್ರ ಹಳದೀಪುರ, ಚಂದ್ರಶೇಖರ ಹೆಗಡೆ, ರವಿ ಗೌಡ, ವಿನಾಯಕ ಮಡಿವಾಳ, ನಾಸಿರ್ ಖಾನ್, ಶ್ರೀಪಾದ ದೇವಾಡಿಗ, ವಿನಾಯಕ ದೇವಾಡಿಗ, ನಾಗರತ್ನಾ ದೇವಾಡಿದ ಸಹಕರಿಸಿದರು.