ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲೆಯ ಬಸವನ ಬಾಗೇವಾಡಿ, ಕೊಲ್ಹಾರ, ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನಲ್ಲಿ ಹಾದು ಹೋಗುವ 765 ಕೆವಿ ಕೂಡಗಿಯಿಂದ ಪುಣೆಗೆ ಹೋಗುವ ವಿದ್ಯುತ್ ಟ್ರಾನ್ಸ್ ಮಿಶನ್ ಲೈನ್ನಲ್ಲಿ ರೈತರಿಗೆ ಅನ್ಯಾಯ ಮಾಡುವುದನ್ನು ನಿಲ್ಲಿಸಬೇಕೆಂದು ಬಸವನಬಾಗೇವಾಡಿ ಹಾಗೂ ಬಬಲೇಶ್ವರ ಶಾಸಕರೇ ರೈತರಿಗೆ ನ್ಯಾಯ ಕೊಡಿಸಿ, ಇಲ್ಲವಾದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿ ರೈತ ಭಾರತ ಪಕ್ಷ (ರಿ) ಕರ್ನಾಟಕ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ಬಸವನಬಾಗೇವಾಡಿ, ಕೊಲ್ಹಾರ, ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನಲ್ಲಿ ಹಾದು ಹೋಗುವ 765 ಕೆವಿ ವಿದ್ಯುತ್ಲೈನ್ ಕೂಡಗಿಯಿಂದ ಪುಣೆಗೆ ಹೋಗುವ ಟ್ರಾನ್ಸ್ ಮಿಶನ್ ಲೈನ್ನಲ್ಲಿ ಎಲ್ಲ ರೈತರಿಗೆ ಪರಿಹಾರ ಮತ್ತು ಆದೇಶದ ಪ್ರತಿಯನ್ನು ನೀಡುವಲ್ಲಿ ದಬ್ಬಾಳಿಕೆ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಮುಂದುವರಿದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಮುಂಬರುವ ದಿನಗಳಲ್ಲಿ ಈ ಜಮೀನುಗಳು ಹೆದ್ದಾರಿಗೆ ಹೊಂದಿಕೊಂಡಿರುತ್ತವೆ. ಆ ಜಮೀನುಗಳಿಗೆ ಎನ್ಎ ಆಗುವ ಹಾಗೆ ರೈತರಿಗೆ ಒಪ್ಪಿಗೆ ನೀಡಬೇಕು. ರೈತರ ಮೇಲೆ ಪೊಲೀಸ್ ಹಾಗೂ ಕಂದಾಯ ಇಲಾಖೆ ದಬ್ಬಾಳಿಕೆ ಮಾಡಿ ರೈತರ ಹೊಲಗಳಿಗೆ ಹೋಗಿ ರೈತರ ಮೇಲೆ ಕೈ ಮಾಡಿ ಅಂಜಿಸಿ ಕಾಮಗಾರಿ ಮಾಡಿಸುತ್ತಿರುವುದು ಮತ್ತು ರೈತರ ಬೆಳೆಗಳನ್ನು ನಾಶಮಾಡಿರುವುದು ತುಂಬಾ ದುಃಖಕರ ಸಂಗತಿ. ಕೂಡಲೇ ರೈತರ ಕ್ಷಮೆ ಕೇಳಬೇಕು ಮತ್ತು ಒತ್ತಾಯು ಪೂರ್ವಕವಾಗಿ ಕಾಮಗಾರಿ ಮಾಡಬಾರದು ಎಂದು ಆಗ್ರಹಿಸಿದರು.ಜಿಲ್ಲಾ ದಂಡಾಧಿಕಾರಿಗಳು ಹೊರಡಿಸಿದ ಆದೇಶದ ಪ್ರತಿಯನ್ನು ಸಂಬಂಧಿಸಿದ ಕಕ್ಷಿಗಾರರಿಗೆ ತಲುಪಿಸದೇ ಡಬ್ಲೂಎಸ್ಆರ್ಎಲ್ಟಿಡಿ ನವರಿಗೆ ಏಕ ಪಕ್ಷೀಯವಾಗಿ ತಲುಪಿಸಿ ಅಕ್ರಮವಾಗಿ ಕಾಮಗಾರಿಯನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತದ ಕುಮ್ಮಕ್ಕು ಇರುವುದು ಕಂಡು ಬರುತ್ತದೆ. ಕೂಡಲೇ ಬಸವನ ಬಾಗೇವಾಡಿ ಶಾಸಕರು ಹಾಗೂ ಬಬಲೇಶ್ವರ ಮತಕ್ಷೇತ್ರದ ಶಾಸಕರು ರೈತರ ಹಿತ ಕಾಯಲು ಮುಂದಾಗಬೇಕು ಎಂದು ಒತ್ತಾಯಿಸಿದರು.ಇದೇ ಕಾಮಗಾರಿಗೆ ಸಂಬಂಧಿಸಿದಂತೆ 2024 ಫೆಬ್ರುವರಿ 13 ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದಿದ್ದ ಬಾಧಿತ ರೈತರ ಸಮಾಲೋಚನಾ ಸಭೆಯು ಅಪೂರ್ಣಗೊಂಡಿದ್ದರೂ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗದೇ ಇದ್ದರೂ ಸಭೆಯನ್ನು ಮುಂದಿನ ಗೊತ್ತುಪಡಿಸಿ ರೈತರಿಗೆ ಕೂಡಲೇ ಗತಿಸಿದ ಸಭೆಯಲ್ಲಿ ಅಂತಿಮ ನಿರ್ಣಯವನ್ನು ಕೈಗೊಳ್ಳೋಣ ಎಂದು ಸಭೆಯನ್ನು ಜಿಲ್ಲಾಧಿಕಾರಿಗಳು ಮುಂದೂಡಿದರು. ಈಗ ರೈತರಿಗೆ ನೀಡಿರುವ ಸಭಾ ನಡಾವಳಿಯ ವರದಿಯಲ್ಲಿ ಅಂದೇ ಸಭೆ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ನೀಡಿದ್ದಾರೆ. ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಹಾಗೂ ರೈತರು ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಅರ್ಜಿಯನ್ನು ಹಾಕಿದ್ದು ಅದರ ವಿಡಿಯೋ ಕ್ಲಿಪ್ನ್ನು ರೈತರು ಕೇಳಿರುತ್ತಾರೆ. ಅದನ್ನು ಬೇಗನೆ ರೈತರಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅನಿಲ ಇಕ್ಕಡೆ, ಶಿವಸಾಯಿ ಬಿರಾದಾರ, ಪರಶುರಾಮ ಗಾಯಕವಾಡ ಸೇರಿದಂತೆ ಉಪಸ್ಥಿತರಿದ್ದರು.ಬಸವನಬಾಗೇವಾಡಿ, ಕೊಲ್ಹಾರ, ಬಬಲೇಶ್ವರ ಹಾಗೂ ತಿಕೋಟಾ ತಾಲ್ಲೂಕಿನಲ್ಲಿ ಹಾದು ಹೋಗುವ 765 ಕೆವಿ ವಿದ್ಯುತ್ಲೈನ್ ಕೂಡಗಿಯಿಂದ ಪುಣೆಗೆ ಹೋಗುವ ಟ್ರಾನ್ಸ್ ಮಿಶನ್ ಲೈನ್ನಲ್ಲಿ ಎಲ್ಲ ರೈತರಿಗೆ ಪರಿಹಾರ ಮತ್ತು ಆದೇಶದ ಪ್ರತಿಯನ್ನು ನೀಡುವಲ್ಲಿ ದಬ್ಬಾಳಿಕೆ ಮಾಡಿ ರೈತರಿಗೆ ಮೋಸ ಮಾಡುತ್ತಿರುವುದು ಕಂಡು ಬಂದಿದೆ. ಇದೇ ರೀತಿ ಮುಂದುವರಿದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುತ್ತದೆ.
-ಮಲ್ಲಿಕಾರ್ಜುನ ಕೆಂಗನಾಳ, ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷರು.