ಮಾಧುಸ್ವಾಮಿಗೆ ಲೋಕಸಭೆ ಟಿಕೆಟ್ ನೀಡಿ

| Published : Feb 07 2024, 01:46 AM IST

ಸಾರಾಂಶ

ಮಾಜಿ ಸಚಿವರಾದ ಬಿಜೆಪಿ ಮುಖಂಡರಾದ ಜೆ.ಸಿ. ಮಾಧುಸ್ವಾಮಿ ಅವರಿಗೆ ಬಿಜೆಪಿ ಪಕ್ಷದಿಂದ ಮುಂಬರಲಿರುವ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ಮಾಧುಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು.

ಕನ್ನಡಪ್ರಭ ವಾರ್ತೆ ತಿಪಟೂರು

ದಕ್ಷ, ಜಾತ್ಯಾತೀತ ವ್ಯಕ್ತಿತ್ವ ಹೊಂದಿರುವ ಮಾಜಿ ಸಚಿವರಾದ ಬಿಜೆಪಿ ಮುಖಂಡರಾದ ಜೆ.ಸಿ. ಮಾಧುಸ್ವಾಮಿ ಅವರಿಗೆ ಬಿಜೆಪಿ ಪಕ್ಷದಿಂದ ಮುಂಬರಲಿರುವ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕೆಂದು ಮಾಧುಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಲಾಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮಾಧುಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಆರ್‌. ಸಂಗಮೇಶ್ ಮಾತನಾಡಿ, ಮಾಧುಸ್ವಾಮಿಯವರು ಧೀಮಂತ ನಾಯಕರಾಗಿದ್ದು, ಕಾನೂನು ಸಚಿವರಾಗಿ, ನೀರಾವರಿ ಸಚಿವರಾಗಿ ಅನುಭವವುಳ್ಳವರಾಗಿದ್ದು ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಅಧಿವೇಶನಗಳಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಜನಪರ, ರೈತಪರವಾಗಿ ನಿಂತು ಜಿಲ್ಲೆಗೆ ಸಾಕಷ್ಟು ಯೋಜನೆ, ಅನುದಾನಗಳನ್ನು ತಂದಿದ್ದಾರೆ. ತುಮಕೂರು ಕ್ಷೇತ್ರದ ಅಭಿವೃದ್ಧಿಗೆ ಇಂತಹ ನಾಯಕನ ಅವಶ್ಯಕತೆ ಇದೆ. ಜನಮನ್ನಣೆ ಗಳಿಸಿರುವ ಪ್ರಬಲ ನಾಯಕರಾಗಿರುವ ಜೆ.ಸಿ. ಮಾಧುಸ್ವಾಮಿಯವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ತುಮಕೂರು ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದ್ದು ಈ ಬಗ್ಗೆ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

ಗುಡಿಗೌಡರಾದ ಕೋಟೆ ಪ್ರಕಾಶ್ ಮಾತನಾಡಿ, ಕಾನೂನು, ಶಿಕ್ಷಣದ ಜ್ಞಾನ ಹೊಂದಿರುವ ಜೆ.ಸಿ. ಮಾಧುಸ್ವಾಮಿಯವರು ಎಲ್ಲಾ ವರ್ಗದ ಜನರನ್ನು ಹತ್ತಿರದಿಂದ ನೋಡಿದ್ದು ತಮ್ಮ ಬುದ್ಧಿಶಕ್ತಿ ಉಪಯೋಗಿಸಿ ಯೋಜನೆಗಳನ್ನು ತಂದು ಜನರಿಗೆ ನೀಡಿದ್ದಾರೆ. ತುಮಕೂರು ಕ್ಷೇತ್ರ ಮತ್ತಷ್ಟು ಅಭಿವೃದ್ದಿಯಾಗಬೇಕಾದರೆ ಜೆಸಿಎಂಗೆ ಟಿಕೆಟ್ ನೀಡಿ ಎಂದು ಆಗ್ರಹಿಸಿದರು.

ವಿಜಯಕುಮಾರ್‌ ಮಾತನಾಡಿ, ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿಯಾಗಿದ್ದ ಎಚ್.ಡಿ. ದೇವೇಗೌಡರನ್ನೇ ಜನತೆ ಸೋಲಿಸಿದ್ದಾರೆ. ಈಗ ಪಕ್ಷ ವಿ. ಸೋಮಣ್ಣನವರಿಗೆ ಟಿಕೆಟ್ ನೀಡಿದರೆ ಅವರಿಗೆ ಜನರ ಒಲವು ಕಡಿಮೆ ಇದ್ದು ಜೆಸಿಎಂಗೆ ಟಿಕೆಟ್ ನೀಡಿದರೆ ಗೆಲುವು ಖಚಿತ. ಆದ್ದರಿಂದ ಪಕ್ಷ ಜೆಸಿಎಂಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದರು.

ರವಿ ತಿಮ್ಲಾಪುರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ನಿರಂಜನಮೂರ್ತಿ ಮಾರನಗೆರೆ, ನಾಗರಾಜು ಹಿಂಡಿಸ್ಕೆರೆ, ಶಿವಕುಮಾರಸ್ವಾಮಿ ಮಾರನಗೆರೆ ಮತ್ತಿತರರಿದ್ದರು.