ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯದಲ್ಲಿ ಖಾಲಿ ಇರುವ ವಿವಿಧ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಆಗ್ರಹಿಸಿ ಕರ್ನಾಟಕ ವಿದ್ಯಾರ್ಥಿ ಯುವಜನತೆ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಗ್ರೇಡ್-೨ ತಹಸೀಲ್ದಾರ್ ಮಂಜಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.ಒಕ್ಕೂಟದ ಅಧ್ಯಕ್ಷ ಧನ್ಯಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷಗಳ ನೆಪದಲ್ಲಿ ವರ್ಷಗಟ್ಟಲೇ ಯುವಜನತೆಯನ್ನು ಕಾಯಿಸಿ, ಅವರ ವಯಸ್ಸು, ತಾಳ್ಮೆ ಮತ್ತು ಭವಿಷ್ಯದ ಜತೆ ಕ್ರೂರವಾಗಿ ಆಟವಾಡುತ್ತಿರುವ ಸರ್ಕಾರಗಳ ನಡೆ ಅಕ್ಷಮ್ಯ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಪ್ರತಿ ಚುನಾವಣೆಯಲ್ಲೂ ಉದ್ಯೋಗದ ಭರವಸೆಗಳನ್ನು ನೀಡುತ್ತವೆ. ಮತ ಹಾಕಿಸಿಕೊಳ್ಳುವ ಚುನಾಯಿತರು ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನು ಮರೆತು ತಮ್ಮ ಸಾಮ್ರಾಜ್ಯ ಭದ್ರಪಡಿಸಿಕೊಳ್ಳಲು ಮುಂದಾಗುತ್ತಾರೆ. ತಮ್ಮನ್ನ ನಂಬಿದ ಯುವಜನರ ಗತಿ ಏನು ಎಂದು ಪ್ರಶ್ನಿಸಿದ ಅವರು, ತಕ್ಷಣವೇ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ಕರುನಾಡ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ ಮಾತನಾಡಿ, ಯುವಜನರ ಭವಿಷ್ಯವನ್ನು ಕಸಿದಿರುವ ರಾಜ್ಯ ಸರ್ಕಾರದ ಅಸಡ್ಡೆ ಆಡಳಿತಕ್ಕೆ ಧಾರವಾಡದ ಪ್ರತಿಭಟನೆಯೇ ಜೀವಂತ ಸಾಕ್ಷಿ. ಕೇವಲ ಬಣ್ಣಬಣ್ಣದ ಮಾತುಗಳು ಮತ್ತು ಉಚಿತ ಭರವಸೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಪ್ರಿಯಾಂಕ ಖರ್ಗೆ, ಮಧು ಬಂಗಾರಪ್ಪ ಯಾವಾಗಲೂ ಶೀಘ್ರವೇ ಉದ್ಯೋಗ ತುಂಬಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿ 3 ವರ್ಷಗಳೆ ಕಳೆದಿದ್ದಾರೆ. ಈಗಲಾದರೂ ಉದ್ಯೋಗ ಕೊಡಿ, ಇಲ್ಲವೇ ಯುವಜನರಿಗೆ ವಿಷ ಕೊಟ್ಟು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಹಸೀಲ್ದಾರ್ ನಡೆಗೆ ಬೇಸರ:
ತಾಲೂಕು ಆಡಳಿತ ನಿರ್ವಹಣೆ ಮಾಡುವ ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಕಚೇರಿಯಲ್ಲಿ ಕೂತು ಜನರ ಸಮಸ್ಯೆಗಳು, ಹೋರಾಟಗಾರರ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಯಾವಾಗಲೂ ಹೊರಗಡೆ ಇದ್ದೇನೆ. ಸೈಟ್ನಲ್ಲಿದ್ದೇನೆ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಕಚೇರಿ ಆಡಳಿತಕ್ಕಿಂತ ಖಾಸಗಿ ಆಡಳಿತವೇ ಹೆಚ್ಚಾಗಿದೆ. ವಿಂಡ್ಫ್ಯಾನ್, ಜಮೀನು ಖರೀದಿ ಸೇರಿದಂತೆ ಸ್ವಯಂ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಪ್ರತಿಭಟನೆ ನಡೆಸಿದ ಹೋರಾಟಗಾರರ ಮನವಿ ಸ್ವೀಕರಿಸಲು ಗ್ರೇಡ್-೨ ತಹಸೀಲ್ದಾರ್ ಮಂಜಾನಂದ ಅವರೇ ನಿಗದಿಯಾಗಿದ್ದಾರೆ ಎಂದು ಹೋರಾಟಗಾರರಾದ ಗೌರಿಪುರ ಸತ್ಯಮೂರ್ತಿ, ಆರ್ ಓಬಳೇಶ್, ಮಹಾಲಿಂಗಪ್ಪ ಆರೋಪಿಸಿದರು.
ಪ್ರತಿಭಟನೆಯಲ್ಲಿ ವಕೀಲ ಆರ್.ಓಬಳೇಶ್ , ಬಿಜೆಪಿ ಮಾಜಿ ತಾಲೂಕಾಧ್ಯಕ್ಷ ಶಿವಕುಮಾರ್ ಸ್ವಾಮಿ, ದಸಂಸ ಸಂಚಾಲಕರಾದ ಮಲೆಮಾಚಿಕೆರೆ ಸತೀಶ್, ಕುಬೇಂದ್ರಪ್ಪ, ಎಸ್ಎಫ್ಐ ಜಿಲ್ಲಾಧ್ಯಕ್ಷ ಅನಂತ್ ರಾಜ್, ಗೌರಿಪುರ ಸತ್ಯಮೂರ್ತಿ, ಅಶೋಕ್, ಕೊಟ್ರೇಶ್, ವಿದ್ಯಾರ್ಥಿ ಮುಖಂಡರಾದ ತನುಶ್ರೀ, ಮಣಿಕಂಠ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.