ಹಗರಿಬೊಮ್ಮನಹಳ್ಳಿ: ಸಾವಯವ ಪದ್ಧತಿಯಲ್ಲಿ ನುಗ್ಗೆ ಕೃಷಿ ಕೈಗೊಂಡು ನುಗ್ಗೆ ಎಲೆ ಸಂಗ್ರಹ ಸೇರಿದಂತೆ ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟ ಹೀಗೆ ಪ್ರತಿ ಹಂತದಲ್ಲೂ ಶುದ್ಧತೆ, ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಇದೇ ನುಗ್ಗೆ ಕೃಷಿ ಯಶಸ್ಸಿನ ಮೂಲಮಂತ್ರವಾಗಿದೆ ಎಂದು ಪ್ರಗತಿಪರ ನುಗ್ಗೆ ಕೃಷಿಕ ಬ್ಯಾಲಿಹಾಳ ಬಸಯ್ಯ ಹಿರೇಮಠ ಪ್ರತಿಪಾದಿಸಿದರು.ತಾಲೂಕಿನ ನಂದೀಪುರ ಗ್ರಾಮದ ಶ್ರೀಗುರು ದೊಡ್ಡಬಸವೇಶ್ವರ ಮಠದಲ್ಲಿ ಮಠದಿಂದ ಮಂಗಳವಾರ ಆಯೋಜಿಸಲಾಗಿದ್ದ ನುಗ್ಗೆ ಕೃಷಿ ಮತ್ತು ನುಗ್ಗೆ ಬೆಳೆಗಾರರ ಸಬಲೀಕರಣ ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನುಗ್ಗೆ ಬೆಳೆ ರೈತರಿಗೆ ವರದಾನವಾಗಿದೆ. ನುಗ್ಗೆ ಎಲ್ಲ ಮಣ್ಣಿನಲ್ಲಿ ಬೆಳೆಯಬಹುದಾದ ಬ್ರಹ್ಮವೃಕ್ಷ. ನುಗ್ಗೆ ಆಹಾರವಾಗಿ ಅಲ್ಲದೇ ಔಷಧಿಯಾಗಿಯೂ ಗರಿಷ್ಠ ಮಟ್ಟದಲ್ಲಿ ಬಳಕೆಯಾಗುತ್ತಿದೆ. ನುಗ್ಗೆ ಬೀಜದಿಂದ ಎಣ್ಣೆ ತಯಾರಿಸುವ ಜತೆಗೆ ನುಗ್ಗೆ ಎಲೆ, ಬೀಜದಿಂದ ತಯಾರಿಸಿರುವ ಮೌಲ್ಯವರ್ಧಿತ ಉತ್ಪನ್ನಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದರು.ವಾರ್ಷಿಕವಾಗಿ 300 ರಿಂದ 500 ಮೆಟ್ರಿಕ್ ಟನ್ ನುಗ್ಗೆ ಸೊಪ್ಪಿನ ಬೇಡಿಕೆ ಪೂರೈಸಲು ರೈತರಿಗೆ ಅವಕಾಶ ಇದೆ ಎಂಬ ಕಿವಿಮಾತು ಹೇಳಿದರು.
ಕೃಷಿ ವಿಜ್ಞಾನಿ ಮಹಾಂತೇಶ್ ಪಾಟೀಲ್ ಮಾತನಾಡಿ, ರೈತರು ಯೋಜನಾಬದ್ಧವಾಗಿ ಕೃಷಿ ಮಾಡುವ ಜೊತೆಗೆ ಪ್ರಯೋಗ, ಸಂಶೋಧನೆಗಳಿಗೆ ಮನಸ್ಸು ತೆರೆದುಕೊಳ್ಳಬೇಕು. ಬೆಳೆ ಮಾತ್ರ ಸಾವಯವವಾಗದೇ ರೈತರ ಇಡೀ ಜಮೀನುಗಳು ಸಾವಯವದಲ್ಲಿ ಉಸಿರಾಡಬೇಕು ಎಂದರು.ಮಠದ ಡಾ.ಮಹೇಶ್ವರ ಶ್ರೀ, ಕೃಷಿಕ ವಿಶ್ವೇಶ್ವರ ಸಜ್ಜನ್, ಪ್ರಗತಿಪರ ಸಾವಯವ ಕೃಷಿಕ ವಸಂತ್ ಮಾಲವಿ ಮಾತನಾಡಿದರು.
ಪ್ರಗತಿಪರ ಕೃಷಿಕರಾದ ಬಿ.ಎಂ. ವೀರಪ್ಪಯ್ಯ, ಡಾ.ಚಿಕ್ಕಣ್ಣ, ಎಂ.ಶಿವಮೂರ್ತಿ, ವಿಷ್ಣು, ನಿಯಾಜಿ, ಶಿವಜ್ಜ ಬಿದರಕೇರಿ, ಒಪ್ಪತ್ತೇಶ್ವರ, ನಾಗೇನಹಳ್ಳಿ ಶ್ರೀನಿವಾಸ್, ಅಪ್ಪೇನಹಳ್ಳಿ ಶಿವಣ್ಣ, ಎಚ್.ಎಂ. ಕರ್ಣಂ, ಓಬಳೇಶ್, ಡಾ.ಕೊಟ್ರೇಶ್ ಇದ್ದರು.
ಪೊಲೀಸ್ ಇಲಾಖೆಯ ಸ್ವರೂಪಾನಂದ್ ಕೊಟ್ಟೂರು, ಶಿಕ್ಷಕ ಎಚ್.ಎಂ. ಕೊಟ್ರದೇವರು ಕಾರ್ಯಕ್ರಮ ನಿರ್ವಹಿಸಿದರು.