ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ: ಪಾಟೀಲ

| Published : Feb 27 2025, 12:30 AM IST

ಸಾರಾಂಶ

ವೀರ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನವನ್ನು ಸ್ಮರಿಸುವ ಮೂಲಕ ಆತನ ಧೈರ್ಯ, ಸಾಹಸ ಮರೆಯಲೂ ಸಾಧ್ಯವಿಲ್ಲ. ಅಂತಹವರ ತತ್ವಾದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಯಲಬುರ್ಗಾ:

ಹಾಲಿನಂತಿರುವ ಹಾಲುಮತ ಸಮಾಜ ಅತ್ಯಂತ ಪ್ರಾಮಾಣಿಕ, ವಿಶ್ವಾಸವುಳ್ಳ ಜನಾಂಗವಾಗಿದೆ ಎಂದು ಜಿಪಂ ಮಾಜಿ ಸದಸ್ಯ ಸಿ.ಎಚ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ ಶಿವರಾತ್ರಿ ನಿಮಿತ್ತ ಬುಧವಾರ ಶ್ರೀಬೀರಲಿಂಗೇಶ್ವರ ಜಾತ್ರಾಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಈ ನಾಡಿಗೆ ಹಾಲುಮತ ಸಮಾಜದವರ ನೀಡಿದ ಕೊಡುಗೆ ಅಪಾರವಾಗಿದೆ ಎಂದರು.

ವೀರ ಸಂಗೊಳ್ಳಿ ರಾಯಣ್ಣನ ದೇಶಾಭಿಮಾನವನ್ನು ಸ್ಮರಿಸುವ ಮೂಲಕ ಆತನ ಧೈರ್ಯ, ಸಾಹಸ ಮರೆಯಲೂ ಸಾಧ್ಯವಿಲ್ಲ. ಅಂತಹವರ ತತ್ವಾದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದ ಅವರು, ಹಾಲುಮತ ಸಮಾಜ ಬಾಂಧವರು ಮಕ್ಕಳಿಗೆ ಶಿಕ್ಷಣ ಕೊಡಿಸಿ ಇನ್ನಷ್ಟು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ಮಾತನಾಡಿ, ಹಾಲುಮತ ಸಮಾಜ ಬಾಂಧವರು ನಿರ್ಸಗದ ಆರಾಧಕರು ಆಗಿದ್ದಾರೆ. ವಿಶ್ವಾಸ, ಪ್ರಾಮಾಣಿಕತೆ, ನಂಬಿಕೆಯೇ ವಿಶ್ವಾಸದ ಸಂಕೇತ ಹಾಲುಮತ ಸಮಾಜವಾಗಿದೆ. ಕನಕದಾಸರು ತಮ್ಮ ಕೃತಿಗಳಲ್ಲಿ ಹುಟ್ಟಿನಿಂದ ಬಂದ ಜಾತಿಗೆ ಮಹತ್ವ ಕೊಡದೆ ಮನುಷ್ಯರ ಆಚಾರ-ವಿಚಾರ ಮತ್ತು ನಡೆ-ನುಡಿಗಳಿಗೆ ಪ್ರಾಶಸ್ಯ ಕೊಡುವ ಮೂಲಕ ಎಲ್ಲರೂ ಒಂದೇ ಎಂದು ಸಾರಿ ಹೇಳಿದ ದಾಸರಲ್ಲಿ ಶ್ರೇಷ್ಠರಾಗಿದ್ದಾರೆ ಎಂದರು.

ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಲೀಸ್‌ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವ ಮುಖಂಡ ಅಂದಾನಗೌಡ ಪೊಲೀಸ್‌ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ದ್ಯಾಮಯ್ಯ ಗುರುವಿನ, ವಿರೂಪಾಕ್ಷಯ್ಯ ಗುರುವಿನ ಸಾನ್ನಿಧ್ಯ ವಹಿಸಿದ್ದರು. ಈರಪ್ಪ ಕುಡಗುಂಟಿ, ಮಂಜುನಾಥ ಕಡೇಮನಿ, ಸಿಡಿಪಿಒ ಬೆಟದಪ್ಪ ಮಳೆಕೊಪ್ಪ, ಶೇಖರಗೌಡ ಉಳ್ಳಾಗಡ್ಡಿ, ಅಮರಪ್ಪ ಕಲಬುರ್ಗಿ, ಶಾರದಾ ಸಾಲಭಾವಿ, ಪ್ರೇಮಾ ನೋಟಗಾರ, ರೇವಣೆಪ್ಪ ಹಿರೇಕುರಬರ, ಆನಂದ ಉಳ್ಳಾಗಡ್ಡಿ ಮತ್ತಿತರರು ಇದ್ದರು.