ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ: ಸೋಮಶೇಖರ ನೀಲೊಗಲ್

| Published : Feb 29 2024, 02:08 AM IST

ಸಾರಾಂಶ

ಸೇವಾಲಾಲ ಮಹಾರಾಜರ ತಂದೆ, ತಾಯಿಗಳಿಗೆ ೧೧ ವರ್ಷಗಳ ಕಾಲ ಮಕ್ಕಳಾಗಿದ್ದಿಲ್ಲ. ಮಾರಿಕಾಂಬೆ ದೇವಿಯ ವರದಿಂದ ಶ್ರೀಸೇವಾಲಾಲರು ಹುಟ್ಟಿದರು.

ಕುಕನೂರು: ಬಂಜಾರ ಸಮಾಜದ ಹಿರಿಯರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ವಿದ್ಯಾನಂದ ಗುರುಕುಲ ಕಾಲೇಜಿನ ಉಪ ಪ್ರಾಚಾರ್ಯ ಸೋಮಶೇಖರ ನೀಲೊಗಲ್ ಹೇಳಿದರು.

ಪಟ್ಟಣದ ಶಾದಿಮಹಲ್‌ನಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಸೇವಾಲಾಲ ಮಹಾರಾಜರ ೨೮೫ನೇ ಜಯಂತ್ಯುತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಸೇವಾಲಾಲ ಮಹಾರಾಜರ ತಂದೆ, ತಾಯಿಗಳಿಗೆ ೧೧ ವರ್ಷಗಳ ಕಾಲ ಮಕ್ಕಳಾಗಿದ್ದಿಲ್ಲ. ಮಾರಿಕಾಂಬೆ ದೇವಿಯ ವರದಿಂದ ಶ್ರೀಸೇವಾಲಾಲರು ಹುಟ್ಟಿದರು. ಬಂಜಾರ ಸಮಾಜದ ಸುಧಾರಣೆಗಾಗಿ ಸೇವಾಲಾಲರು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಕೆಲವೊಂದು ಸಂದರ್ಭದಲ್ಲಿ ಪವಾಡಗಳನ್ನು ಸಹ ಸೃಷ್ಟಿ ಮಾಡಿದ್ದಾರೆ. ತಂದೆ, ತಾಯಿಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ನೀಡಬೇಕು. ಆಗ ಸೇವಾಲಾಲರ ತ್ಯಾಗ ಸಾರ್ಥಕವಾಗುತ್ತದೆ ಎಂದು ಹೇಳಿದರು.

ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಲಕ್ಷ್ಮಣ ನಾಯಕ ಮಾತನಾಡಿ, ಸೇವಾಲಾಲ ದಾರ್ಶಿನಿಕರಾಗಿದ್ದರು. ಅವರು ಒಂದೇ ಜಾತಿಗೆ ಸೀಮಿತರಲ್ಲ. ಸಮಾಜದ ಸುಧಾರಣೆಗಾಗಿ ಇಂತಹ ದಾರ್ಶಿನಿಕರು ಹುಟ್ಟಿ ಬಂದಿದ್ದಾರೆ. ನಾವು ಮೂಲತಃ ವ್ಯಾಪಾರಿಗಳು ನಾವು ವ್ಯಾಪಾರ ಮಾಡಬಾರದು ಎಂದು ಬ್ರಿಟಿಷರು ಆದೇಶಿಸಿದ್ದರು. ಇಂತಹ ಅನೇಕ ಸಮಸ್ಯೆಗಳ ಮಧ್ಯೆ ನಾವು ಜೀವಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.

ಸೇವಾಲಾಲ್ ಭಾವಚಿತ್ರವನ್ನು ತೆರೆದ ವಾಹನದಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮಾಡಲಾಯಿತು. ಪ್ರಮುಖ ರಸ್ತೆಗಳ ಮೂಲಕ ಡಿಜೆ ಸೌಂಡ್‌ಗೆ ಹೆಜ್ಜೆಗಳನ್ನು ಸಮಾಜದ ಮುಖಂಡರು, ಮಹಿಳೆಯರು ಹಾಕಿದರು. ಉದ್ಯಮಿ ಅನಿಲ್ ಆಚಾರ್, ಮುಖಂಡ ಶಿವಕುಮಾರ ಗುಳಗಣ್ಣವರ್ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅನ್ನದಾನೇಶ್ವರಮಠದ ಶ್ರೀಮಹಾದೇವ ಸ್ವಾಮೀಜಿ, ಶ್ರೀಗುರು ಗೋಸಾವಿ ಬಾವಾನವರು ಬಂಜಾರ ಧರ್ಮಗುರುಗಳು ಸಾನ್ನಿಧ್ಯ ವಹಿಸಿದ್ದರು.

ತಹಶೀಲ್ದಾರ್ ಅಶೋಕ ಶಿಗ್ಗಾವಿ, ತಾಪಂ ಇಒ ಸಂತೋಷ ಪಾಟೀಲ್ ಬಿರಾದಾರ, ಪಿ.ಲಕ್ಷ್ಮಣ ನಾಯಕ, ಮೇಘರಾಜ ಬಳಗೇರಿ, ಬಂಜಾರ ಸಮಾಜದ ತಾಲೂಕಾಧ್ಯಕ್ಷ, ಸುರೇಶ ಬಳೂಟಗಿ, ಗೋರ ಸೇನಾ ಪ್ರಧಾನ ಕಾರ್ಯದರ್ಶಿ, ಯಮನೂರಪ್ಪ ಕಟ್ಟಿಮನಿ, ಗ್ರಾಪಂ ಸದಸ್ಯ ರಾಮಣ್ಣ ಭಜಂತ್ರಿ, ಜಿಪಂ ಮಾಜಿ ಅಧ್ಯಕ್ಷ, ರಶೀದ್‌ಸಾಬ ಹಣಜಗಿರಿ, ಲಚ್ಚಪ್ಪ ನಾಯಕ, ದೇವೇಂದ್ರಪ್ಪ ರಾಠೋಡ, ಓಬಪ್ಪ ಲಮಾಣಿ, ರವಿ ಕಾರಬಾರಿ, ಚಂದ್ರು ಭಾನಾಪುರ, ಅಂಬಣ್ಣ ಕಟ್ಟಿಮನಿ, ಯಲ್ಲಪ್ಪ ಮನ್ನಾಪುರ, ರಾಜಕುಮಾರ ರಾಠೋಡ, ಪರಸಪ್ಪ ಕಾರಬಾರಿ ಇದ್ದರು.