ಸಾರಾಂಶ
ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಬಡವರಿಗೆ ಜಿಲ್ಲಾ ಕೈಗಾರಿಕೆ ಇಲಾಖೆ ವತಿಯಿಂದ ನಿವೇಶನ ಬಿಡುಗಡೆ ಮಾಡಬೇಕು
ಕೊಪ್ಪಳ: ನಗರದ ಜಿಲ್ಲಾಡಳಿತ ಭವನದ ಬಳಿ ಕೊಪ್ಪಳ ಜಿಲ್ಲಾ ವಿಶ್ವಕರ್ಮ ಸಮಾಜದ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ವಿಶ್ವಕರ್ಮ ಸಮಾಜದವರಿಗೆ ಎಸ್ಟಿ ಮೀಸಲಾತಿ ಹಾಗು ನಾನಾ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಜಯರಾಂ ಪತ್ತಾರ ಮಾತನಾಡಿ, ಬೇರೆಯವರಿಗೋಸ್ಕರವೇ ಬದುಕು ಮುಡುಪಾಗಿಟ್ಟು ದುಡಿಯುವ ಶ್ರಮಜೀವಿ ಸಮುದಾಯ ವಿಶ್ವಕರ್ಮ. ನಮ್ಮ ಸಮುದಾಯ ವಿಶ್ವಕರ್ಮ ಜಾತಿಯವರ, ಅಭಿಯಂತರರ, ಕುಶಲಕರ್ಮಿಗಳ ಮತ್ತು ವಾಸ್ತುಶಿಲ್ಪಿಗಳ ಪ್ರಧಾನ ದೇವತೆಯಾಗಿದ್ದಾನೆ. ಇವನು ಬ್ರಹ್ಮಾಂಡದ ಪ್ರಧಾನ ವಾಸ್ತುಶಿಲ್ಪಿ ಮತ್ತು ಬ್ರಹ್ಮನ್ ಹಾಗೂ ಪುರುಷರ ಮೂಲ ಪರಿಕಲ್ಪನೆ ಎಂದು ನಂಬಲಾಗಿದೆ. ಇಂಥ ಸಮಾಜ ಇಂದು ಶೈಕ್ಷಣಿಕ, ಆರ್ಥಿಕ ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿದೆ. ಹೀಗಾಗಿ 2ಎ ಸಾಕು ಎಸ್ಟಿ ಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಅಧ್ಯಯನದ ವರದಿ ತೆಗೆದುಕೊಂಡು ನಮ್ಮ ಸಮಾಜಕ್ಕೆ ನ್ಯಾಯ ಕೊಡಬೇಕೆಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.ಮನವಿಯಲ್ಲಿ ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ದೇವಸ್ಥಾನಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿರುವ ವಿಶ್ವಕರ್ಮ ಸಮಾಜದ ಬಡವರಿಗೆ ಜಿಲ್ಲಾ ಕೈಗಾರಿಕೆ ಇಲಾಖೆ ವತಿಯಿಂದ ನಿವೇಶನ ಬಿಡುಗಡೆ ಮಾಡಬೇಕು. ಬಡತನ ಸೇರಿದಂತೆ ಪಂಚ ಕಸುಬು ಮಾಡುವ ವಿಶ್ವಕರ್ಮ ಜನಾಂಗದವರಿಗೆ ಹೆಚ್ಚಿನ ರೀತಿಯಲ್ಲಿ ಕೈಗಾರಿಕೆ ಇಲಾಖೆ ವತಿಯಿಂದ ಆರ್ಥಿಕ ಸಹಾಯಧನ ನೀಡಬೇಕು. ಕೊಪ್ಪಳ ನಗರದಲ್ಲಿ ವಿಶ್ವಕರ್ಮ ವಿದ್ಯಾರ್ಥಿ ನಿಲಯಕ್ಕೆ ಅನುದಾನ ನೀಡಬೇಕು. ವಿಶ್ವಕರ್ಮ ಸಮಾಜದವರಿಗೆ ನೀಡುವ ನಿವೇಶನಕ್ಕೆ ₹೩,೦೦,೦೦೦ ಸರ್ಕಾರದ ಅನುದಾನ ಬಿಡುಗಡೆ ಮಾಡಬೇಕು. ಕಾಂತರಾಜ್ ಆಯೋಗದ ವರದಿ ಜಾರಿಗೆ ಮಾಡಬೇಕು ಎಂದು ಒತ್ತಾಯ ಮಾಡಿದರು.
ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧಿಕಾರೇತರ ಸದಸ್ಯ ಪ್ರಭಾಕರ್ ಬಡಿಗೇರ್, ಚಂದ್ರಶೇಖರ್ ಬಡಿಗೇರ್, ವಿಶ್ವಕರ್ಮ ಸಮಾಜದ ಮುಖಂಡ ವೀರಭದ್ರಪ್ಪ ಬಡಿಗೇರ್, ಮೌನೇಶ್ ಮಾದಿನೂರ್, ಎಚ್ಚರೇಶ ಹೊಸಮನಿ, ಪ್ರಶಾಂತ್ ವಿಶ್ವ ಬ್ರಾಹ್ಮಣ, ಮೌನೇಶ್ ಬಡಿಗೇರ್, ವೀರೇಶ್ ಕಮ್ಮಾರ್, ಕೃಷ್ಣ ಬಡಿಗೇರ್, ಮಹೇಶ ಬೇವಿನಹಳ್ಳಿ, ಬಸವರಾಜ ಇರಕಲ್ಲಗಡ, ಈರಣ್ಣ ಕಲ್ಲತಾವರಗೇರ, ವಿರುಪಾಕ್ಷಿ ಹಿರೇಬೊಮ್ಮನಾಳ, ಶಂಕರ್ ಗುನ್ನಾಳ, ಜಗದೇವಪ್ಪ ಹಿರೆವಂಕಲಕುಂಟಿ, ವಿಶ್ವನಾಥ್ ಲಿಂಗನಬಂಡಿ, ಶರಣಪ್ಪ ಕಾಮನೂರ ಇತರರಿದ್ದರು.