ಹಿಂದು ಧರ್ಮದ ಬಗ್ಗೆ ತಿಳುವಳಿಕೆ ನೀಡಿ

| Published : Jan 01 2025, 01:02 AM IST

ಸಾರಾಂಶ

ಹಿಂದು ಧರ್ಮದ ಜಾಗೃತಿಯಾಗಬೇಕು, ಮಕ್ಕಳಿಗೆ ಧರ್ಮದ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಹಿಂದು ಧರ್ಮದ ಜಾಗೃತಿಯಾಗಬೇಕು, ಮಕ್ಕಳಿಗೆ ಧರ್ಮದ ಬಗ್ಗೆ ತಿಳುವಳಿಕೆ ನೀಡುವ ಕೆಲಸವಾಗಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಅಭಿಪ್ರಾಯಪಟ್ಟರು.

ತಾಲೂಕಿನ ಚಿಕ್ಕಪಡಸಲಗಿ ಗ್ರಾಮದಲ್ಲಿ ಹನುಮಾನ ದೇವರ ಕಾರ್ತಿಕೋತ್ಸವದ ಅಂಗವಾಗಿ ಸೋಮವಾರ ಸಂಜೆ ಹನುಮಾನ ಯುವಮಿತ್ರ ಮಂಡಳಿಯವರು ಏರ್ಪಡಸಿದ್ದ ಧರ್ಮ ಮತ್ತು ಸಂಸ್ಕೃತಿ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಪ್ರತಿಯೊಬ್ಬ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಜ್ಞಾನ ಇರಬೇಕು, ನಾಮ್ಮ ಆಚರಣೆಗಳು ಅದರ ಮಹತ್ವವನ್ನು ತಿಳಿಸಿಕೊಡಬೇಕಾದ ಅವಶ್ಯಕತೆ ಇದೆ. ಹನುಮಂತ ದೇವರ ಸ್ಮರಣೆಯಿಂದ ಬುದ್ದಿ, ಬಲ,ಯಶಸ್ಸು, ಧೈರ್ಯ, ನಿರ್ಭಯತ್ವ , ಅರೋಗತ್ವ, ಅಜಾಢ್ಯ, ವಾಕ್‌ಪಟುತ್ವ ಬರುತ್ತದೆ. ಪಾಲಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು. ಧರ್ಮ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ಹಿಂದು ಧರ್ಮ ಅತ್ಯಂತ ಶ್ರೇಷ್ಠಮತ್ತು ಉತ್ಕೃಷ್ಠವಾಗಿದೆ. ಆದರೆ, ಇಂದಿನ ಶಿಕ್ಷಣ ಪದ್ಧತಿಯಿಂದ ಧರ್ಮ ಜಾಗೃತಿಯ ಕಾರ್ಯಕ್ರಮಗಳನ್ನು ಏರ್ಪಡಿಸಬೇಕಾದ ಪರಿಸ್ಥಿತಿ ಬಂದಿವೆ ಎಂದು ತಿಳಿಸಿದರು.ಕಪೀಲ್‌ ಸೀಬಲ್‌ನಂಥವರು, ಬುದ್ದಿ ಜೀವಿಗಳು ಎಂದು ಹೇಳಿಕೊಳ್ಳುವವರು ಶ್ರೀರಾಮನ ಜನ್ಮದ ಬಗ್ಗೆ ಅನುಮಾನ ವ್ಯಕ್ತ ಪಡಿಸಿದ್ದನ್ನು ಸಮಾಜ ನೋಡಿದೆ. ಆದ್ದರಿಂದ ಅಂಥಹ ಪಾಖಂಡಿಗಳಿಗೆ ಉತ್ತರಿಸಲು ಧರ್ಮದ ಜಾಗೃತಿಯಾಗಬೇಕಿದೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರದ ನಿರ್ಮಾಣವಾಗಿದೆ. ಕಾಶಿ ವಿಶ್ವನಾಥ ಹಾಗೂ ಮಥುರಾ ಶ್ರೀಕೃಷ್ಣ ಮಂದಿರಗಳ ನಿರ್ಮಾಣ ಬಾಕಿ ಇದೆ. ಮುಂದಿನ ದಿನಗಳಲ್ಲಿ ಅವುಗಳ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹನುಮಾನ ಚಾಲೀಸಾ ಹಾಗೂ ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಹನುಮಂತ ದೇವರ ಪರಾಕ್ರಮ, ದೈವ ಭಕ್ತಿ,ದಾಸ್ಯ, ಮಹಿಮೆಯ ವರ್ಣನೆಯನ್ನು ತಿಳಿಸುತ್ತ ಹನುಮ ಜಪ, ಶ್ರೀರಾಮ ಜಪ, ವಿಶೇಷ ಪೂಜಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಸಮಾಜವನ್ನು ಜಾಗೃತಿ ಗೊಳಿಸಬೇಕು ಎಂದು ತಿಳಿಸಿದರು.ಹನುಮಂತ ದೇವರು ಜನಿಸಿದ್ದು ನಮ್ಮ ನಾಡಿನಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತ ದೇವರ ಅವತಾರವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಾಡು, ನುಡಿ, ಧರ್ಮ, ಆಚರಣೆಗಳ ಮಹತ್ವ ತಿಳಿಸುವ ಕೆಲಸವಾಗಬೇಕಿದೆ. ಇದರಿಂದ ಸಧೃಢ, ಬಲಿಷ್ಟ ಸಮಾಜದ ನಿರ್ಮಾಣವಾಗಲಿದೆ. ಹಿಂದುಗಳಬಗ್ಗೆ, ಧರ್ಮದ ಬಗ್ಗೆ ಮಾತನಾಡುವರಿಗೆ ಸರಿಯಾಗಿ ಉತ್ತರಿಸುವ ಸಾಮರ್ಥ್ಯ ಮಕ್ಕಳಿಗೆ ಬರುತ್ತದೆ. ಸಮಾಜ ಹಾಗೂ ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಶಿಕ್ಷಣದ ಜೊತೆಗೆ ಧರ್ಮದ ತಿಳುವಳಿಕೆ ಕೊಡಬೇಕು. ಆದಿಯು, ಅಂತ್ಯವಿಲ್ಲದ ಸನಾತನ ಧರ್ಮ ಹಾಗೂ ಅದರ ಸಂಸ್ಕೃತಿಯ ಪರಿಚಯ ಪ್ರತಿಯೊಬ್ಬ ಹಿಂದುವಿಗೂ ಇರಬೇಕು ಎಂದು ವಿವರಿಸಿದರು. ವೇದಿಕೆ ಮೇಲೆ ಬಬಲಾದಿಮಠದ ಸಂಗಮೇಶ ಬಬಲಾದಿಮಠ, ಹನುಮ ದೇವರ ಅರ್ಚಕರಾದ ಹನಮಂತ ಪೂಜಾರಿ, ಕಾರ್ಯಕ್ರಮದ ಸಂಘಟಕರಾದ ಬಸು ನ್ಯಾಮಗೌಡˌ ಗಂಗಪ್ಪ ದಾನಗೌಡˌ ಬಾಳು ತೇಲಿˌ ಶಿವು ಮಠೋಳಿˌ ಪರಪ್ಪ ಗಡೇಣಿˌ ಸದಾಶಿವ ಹಂಚಿನಾಳˌ ಹನಮಂತ ಅಂಬಿˌ ಪ್ರಕಾಶ ದಾನಗೌಡˌ ಸಂಜು ಸಂತಿˌ ಭರತೇಶ ಕಡಕೋಳ ಹಾಗೂ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಇದ್ದರು. ಶಿಕ್ಷಕರಾದ ಎಸ್‌.ಟಿ.ಸಂತಿ ಹಾಗೂ ಎಸ್‌.ಆರ್‌.ಪವಾರ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಹಂಚಿನಾಳ ವಂದಿಸಿದರು.