ಸೇವಾ ತಂಡ ಈಗಾಗಲೇ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಅಂಗಾಂಗ ದಾನದಲ್ಲಿ ರಾಜ್ಯಕ್ಕೆ ಗದಗ ಜಿಲ್ಲೆ ಮೂರನೇ ಸ್ಥಾನಕ್ಕೆ ಏರಿದೆ. ಇದಕ್ಕೆ ಸೇವಾ ತಂಡದ ಕೊಡುಗೆ ಬಹಳಷ್ಟಿದೆ.
ಗದಗ: ಆ. 15ರಂದು ಸಂಜೆ 4.30ಕ್ಕೆ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ನಿಮ್ಮ ಸೇವೆಗೆ ಅವಕಾಶ ಕೊಡಿ ಎಂಬ ವಿನೂತನ ಕಾರ್ಯಕ್ರಮವನ್ನು ಎಚ್.ಕೆ. ಪಾಟೀಲ ಸೇವಾ ತಂಡದಿಂದ ಆಯೋಜಿಸಲಾಗಿದ್ದು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುತ್ರ ಅನಿಲ ಬಹದ್ದೂರ್ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಸೇವಾ ತಂಡದ ಅಧ್ಯಕ್ಷ ಪ್ರಭು ಬುರಬುರೆ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೇವಾ ತಂಡ ಈಗಾಗಲೇ ವಿವಿಧ ಸೇವೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದೆ. ಅಂಗಾಂಗ ದಾನದಲ್ಲಿ ರಾಜ್ಯಕ್ಕೆ ಗದಗ ಜಿಲ್ಲೆ ಮೂರನೇ ಸ್ಥಾನಕ್ಕೆ ಏರಿದೆ. ಇದಕ್ಕೆ ಸೇವಾ ತಂಡದ ಕೊಡುಗೆ ಬಹಳಷ್ಟಿದೆ. ಗದಗ ಮತಕ್ಷೇತ್ರದಾದ್ಯಂತ 11 ಸಾವಿರ ಕುಟುಂಬಗಳನ್ನು ದತ್ತು ಪಡೆಯುವ ಗುರಿ ಹೊಂದಿದ್ದು, ಪ್ರತಿ ಕ್ಯಾಪ್ಟನ್ಗಳಿಗೆ 50 ಮನೆಗಳ ಜವಾಬ್ದಾರಿ ನೀಡಲಾಗುತ್ತದೆ. ಈಗಾಗಲೇ 577 ಕ್ಯಾಪ್ಟನ್ಗಳು ಸೇವೆಯಲ್ಲಿ ನಿರತರಾಗಿದ್ದು, ಮುಂದಿನ ದಿನಗಳಲ್ಲಿ ಸಾವಿರ ಕ್ಯಾಪ್ಟನ್ ಮಾಡುವ ಗುರಿ ಹೊಂದಲಾಗಿದೆ ಎಂದರು.ಪ್ರತಿ ಮನೆಗೆ ಕ್ಯು ಆರ್ ಅಂಟಿಸಲಾಗುತ್ತದೆ. ಆ ಕ್ಯು ಆರ್ ಕೋಡ್ ಒಪನ್ ಆದ ತಕ್ಷಣ 24 ಸೇವೆಗಳ ಲಿಸ್ಟ್ ಬರುತ್ತದೆ. ಸಾರ್ವಜನಿಕರು ತಮಗೆ ಸಂಬಂಧಿಸಿದ ಸೇವೆಯ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ಆ ಮೆಸೇಜ್ ವಾರ್ ರೂಂಗೆ ಬರುತ್ತದೆ. ವಾರ್ ರೂಂನಿಂದ ಸಂಬಂಧಪಟ್ಟ ಕ್ಯಾಪ್ಟನ್ಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಮಾತನಾಡಿ, ಮನೆ- ಮನೆಗೆ ಸೇವಾ ತಂಡದ ಕಾರ್ಯ ತಲುಪಬೇಕು ಎನ್ನುವುದು ನಮ್ಮ ಉದ್ದೇಶ. ಜನರ ಸೇವೆಗಾಗಿ ಅವಕಾಶ ಕೇಳುತ್ತಿದ್ದೇವೆ. ಪ್ರತಿ ಮನೆಗೆ ಕ್ಯು ಆರ್ ಕೋಡ್ ಅಂಟಿಸಲಾಗುತ್ತದೆ. ಆ ಮೂಲಕ ಸಾರ್ವಜನಿಕರು ಎಚ್.ಕೆ. ಪಾಟೀಲ ಸೇವಾ ತಂಡದ ಸೇವೆಯನ್ನು ಮನೆಯಲ್ಲೇ ಕುಳಿತು ಪಡೆಯುವ ವಿನೂತನ ಯೋಜನೆಯನ್ನು ಪರಿಚಯಿಸಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಡಾ. ಎಸ್.ಆರ್. ನಾಗನೂರ, ಬಿ.ಬಿ. ಅಸೂಟಿ ಮುಂತಾದವರು ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ಸಿದ್ದಲಿಂಗೇಶ್ವರ ಪಾಟೀಲ, ಡಾ. ಪ್ಯಾರಾಲಿ ನೂರಾನಿ, ಎಂ.ಸಿ. ಶೇಖ್, ಅಶೋಕ ಮಂದಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.