ರೈತರಿಗೆ ಹಣ ಕೊಡಿಸುವುದು ಆದ್ಯತೆ: ಶಾಸಕ ಗೋವಿಂದಪ್ಪ

| Published : Mar 07 2024, 01:51 AM IST

ಸಾರಾಂಶ

ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಮುಖ್ಯವಲ್ಲ ನನ್ನ ರೈತರಿಗೆ ಕೊಡಬೇಕಾದ ಹಣ ಕೊಡಿಸುವುದು ನನ್ನ ಆದ್ಯತೆ ಎಂದ ಶಾಸಕ ಗೋವಿಂದಪ್ಪ.

ಹೊಸದುರ್ಗ: ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವುದು ಮುಖ್ಯವಲ್ಲ ನನ್ನ ರೈತರಿಗೆ ಕೊಡಬೇಕಾದ ಹಣ ಕೊಡಿಸುವುದು ನನ್ನ ಆದ್ಯತೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.

ಪಟ್ಟಣದ ಆಶೊಕ ರಂಗಂದಿರದಲ್ಲಿ ಬುಧವಾರ ಆಯೋಜಿಸಲಾಗಿದ್ದ ಹಕ್ಕುಪತ್ರ ವಿತರಣೆ ಹಾಗೂ ಬೆಂಬಲ ಬೆಲೆಯಡಿ ರಾಗಿ ಬಿಟ್ಟ ರೈತರಿಗೆ ಚೆಕ್‌ ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಕಳೆದ ಸಾಲಿನಲ್ಲಿ ಬೆಂಬಲ ಬೆಲೆಯಲ್ಲಿ ರೈತರು ಬಿಟ್ಟ ರಾಗಿಗೆ ಖರೀದಿ ಕೇಂದ್ರದ ಸಿಬ್ಬಂದಿ ವಂಚನೆಯಿಂದ ಹಣ ಬಂದಿರಲಿಲ್ಲ ಈ ಸಂಬಂಧ ಈಗಾಗಲೇ 3 ಜನರ ಮೇಲೆ ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ. ಅವರಿಗೆ ಶಿಕ್ಷೆಯೂ ಆಗುತ್ತದೆ. ಆದರೆ ಅದು ನನಗೆ ಮುಖ್ಯವಲ್ಲ ರೈತರಿಗೆ ಹಣ ಸಿಗಬೇಕು ಎಂದರು.

ನೋಂದಣಿ ನಂತರ ಸಾಗುವಳಿ ಚೀಟಿ: ಸಾಗುವಳಿ ಚೀಟಿಗಾಗಿ ತಾಲೂಕಿನಲ್ಲಿ ಸಾವಿರಾರು ಅರ್ಜಿಗಳು ಬಂದಿವೆ. ಅವುಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಬರೀ ಸಾಗುವಳೀ ಚೀಟಿ ಕೊಡುವುದಾದರೆ ನಾಳೆಯೇ ಕೊಡಬಹುದು ಆದರೆ ಅದರಿಂದ ಪ್ರಯೋಜನವಿಲ್ಲ ಎಂದರು.

ಹಕ್ಕು ಪತ್ರ ವಿತರಣೆ: ಹಲವರು ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನೂ ಕೆಲವರು ಗುಡಿಸಲು ಹಾಕಿಕೊಂಡಿದ್ದಾರೆ. ಈಗ ಯಾರು ಮನೆಗಳನ್ನು ಕಟ್ಟಿಕೊಂಡಿದ್ದಾರೆ ಅವರಿಗೆ ಹಕ್ಕು ಪತ್ರ ವಿತರಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ತಿರುಪತಿ ಪಟೇಲ್, ರೈತ ಸಂಘದ ಗೌರವಧ್ಯಕ್ಷ ಮಹೇಶ್ವರಪ್ಪ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಮುಖ್ಯಧಿಕಾರಿ ತಿಮ್ಮರಾಜು, ಸದಸ್ಯರಾದ ರಾಮಚಂದ್ರಪ್ಪ, ಜಾಫರ್ ಸಾದಿಕ್, ಶಂಕರಪ್ಪ, ತಾಹಿರ ಬಾನು, ದೊಡ್ಡಯ್ಯ, ಪೂರ್ಣಿಮಾ, ಪುಷ್ಪ ಲತಾ, ಆಗ್ರೋ ಶಿವಣ್ಣ, ಕೆ.ಸಿ. ನಿಂಗಪ್ಪ ಮತ್ತಿತರಿದ್ದರು.

ಈಗಿರುವುದು ನಮ್ಮ ಸರ್ಕಾರ ಇಲ್ಲಿ ನಾನು ಶಾಸಕ, ಇಲ್ಲಿ ನನ್ನ ಅಧಿಕಾರ ವಿನಾಕಾರಣ ಅಧಿಕಾರಿಳಿಗೆ ತೊಂದರೆ ಕೊಟ್ಟರೆ ಸುಮ್ಮನೆ ಕೂರಲ್ಲ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ತಿರುಗೇಟು ನೀಡಿದರು. ಪಟ್ಟಣದ ಅಶೋಕ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಆಡಳಿತ ಸುಗಮವಾಗಿ ನಡೆಯುತ್ತಿದೆ. ಅಭಿವೃದ್ಧಿ ವಿಚಾರವಾಗಿ ಸಲಹೆ ಇದ್ದರೆ ಕೊಡಿ ಅದನ್ನು ಆಡಳಿತದಲ್ಲಿ ಜಾರಿಗೆ ತರುತ್ತೇನೆ. ಅದನ್ನು ಬಿಟ್ಟು ಅಧಿಕಾರಿಗಳ ಮೇಲೆ ಸರ್ಕಾರಕ್ಕೆ ಪತ್ರ ಬರೆಯುವುದು, ಬೆದರಿಸುವುದು ಮಾಡುವುದನ್ನು ಖಂಡಿಸುತ್ತೇನೆ ಎಂದರು. ನಿಮಗೆ ಅಧಿಕಾರ ಮಾಡುವ ಆಸೆಯಿದ್ದರೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿ ಜನಾದೇಶ ಪಡೆದು ಗೆಲ್ಲಿ. ರಾಜಕಾರಣ ಮಾಡಲು ನೀವು ಸ್ವಾತಂತ್ರ್ಯರು ಹಾಗಂತ ಸುಖಾ ಸುಮ್ಮನೆ ಅಧಿಕಾರಿಗಳ ಮೇಲೆ ಸವಾರಿ ಮಾಡಿದರೆ ಅದನ್ನು ನಾನು ಸಹಿಸುವುದಿಲ್ಲ. ಇನ್ನು ಮಂದೆ ತಾಲೂಕಿನ ಯಾವುದೇ ಕಚೇರಿ, ಮೈದಾನ, ಯಾವುದೇ ಗ್ರಾಮ, ಎಲ್ಲಿ ಬೇಕಾದರೂ ಧರಣಿ ಮಾಡಲಿ ಅವರ ಬಳಿ ಯಾವುದೇ ಆಧಿಕಾರಿಗಳು ಹೋಗಬಾರದು ಎಂದು ಎಚ್ಚರಿಕೆ ನೀಡಿದರು.