ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ನಿರ್ದೇಶಕರಾಗಿ ನೇಮಕಗೊಂಡ ಹಿರಿಯ ವಕೀಲ ಪಿ.ಆರ್. ನಾರಾಯಣಗೌಡ ಅವರಿಗೆ ಕೆ.ಎನ್.ಆರ್. ಅಭಿಮಾನಿ ಬಳಗ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರಭಲವಾಗಿ ಬೆಳೆಯಲು ಮಾಜಿ ಸಚಿವ, ಶಾಸಕ ಕೆ.ಎನ್. ರಾಜಣ್ಣನವರ ಕೊಡುಗೆ, ಮಾರ್ಗದರ್ಶನ ಕಾರಣ, ಇದರೊಂದಿಗೆ ಈ ಕ್ಷೇತ್ರದಲ್ಲಿ ಸಾವಿರಾರು ಜನ ಉದ್ಯೋಗ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಅರ್ಹರಿಗೆ ಸೂಕ್ತ ಸ್ಥಾನ ಸಿಗಬೇಕು ಎಂಬುದು ಕೆ.ಎನ್.ಆರ್ ಅವರ ಅಭಿಲಾಷೆ, ಹಾಗೆ ಅರ್ಹರನ್ನು ಗುರುತಿಸಿ ಸ್ಥಾನಮಾನ ನೀಡುವ ವಿಶೇಷ ವ್ಯಕ್ತಿತ್ವದ ನಾಯಕರು ಎಂದು ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ. ಮಂಜುನಾಥ್ ಹೇಳಿದರು.ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ನಿರ್ದೇಶಕರಾಗಿ ನೇಮಕಗೊಂಡ ಹಿರಿಯ ವಕೀಲ ಪಿ.ಆರ್. ನಾರಾಯಣಗೌಡ ಅವರಿಗೆ ಕೆ.ಎನ್.ಆರ್. ಅಭಿಮಾನಿ ಬಳಗ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಹರು, ಬಡವರ ಬಗ್ಗೆ ಸಹಾನುಭೂತಿ ಹೊಂದಿರುವ ಸಹಾಯ ಮಾಡುವ ಮನಸ್ಥಿತಿಯ ನಾಯಕರಾಗಿ ಕೆ.ಎನ್. ರಾಜಣ್ಣನವರು ಹೆಸರಾಗಿದ್ದಾರೆ. ಅವರನ್ನು ನಂಬಿದ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ, ಸ್ಥಾನಮಾನ ಪಡೆದಿದ್ದಾರೆ ಎಂದರು.ಅಂದುಕೊಂಡಿದ್ದನ್ನು ಬಿಡದೆ ಸಾಧಿಸುವ ಕೆ.ಎನ್. ರಾಜಣ್ಣನವರು ತಮ್ಮನ್ನು ನಂಬಿ ಬಂದವರನ್ನೂ ಕೈಬಿಡುವುದಿಲ್ಲ, ಅವರಿಗೆ ಸಹಾಯ ಮಾಡಿಯೇ ಮಾಡುತ್ತಾರೆ. ಅವರಿಂದ ಬಹಳಷ್ಟು ಮಂದಿ ಸಹಾಯ ಪಡೆದಿದ್ದಾರೆ. ಇಂತಹ ಜನಾನುರಾಗಿ ನಾಯಕರಾದ ಕೆ.ಎನ್. ರಾಜಣ್ಣನವರಿಗೆ ಮಂತ್ರಿ ಸ್ಥಾನ ದೊರೆತರೆ ಹೆಚ್ಚಿನ ಜನರಿಗೆ ಸಹಾಯವಾಗುತ್ತದೆ. ಸರ್ಕಾರ ಸಚಿವ ಸಂಪುಟದಲ್ಲಿ ಇವರಿಗೆ ಅವಕಾಶ ನೀಡಬೇಕು ಎಂದು ಟಿ.ಪಿ. ಮಂಜುನಾಥ್ ಮನವಿ ಮಾಡಿದರು. ಈ ಭಾಗದ ಅಭಿವೃದ್ಧಿಗೆ ರಾಜಣ್ಣ ಕೊಡುಗೆ ಅನನ್ಯವಾಗಿದೆ. ಸಹಕಾರ ಕ್ಷೇತ್ರದಲ್ಲಿ ರಾಜಣ್ಣ ಅವರ ಕೊಡುಗೆಗಳನ್ನು ಹೇಳುತ್ತಾ ಹೋದರೆ ಸಮಯವೇ ಸಾಕಾಗುವಿದಿಲ್ಲ ಅಷ್ಟೊಂದು ಸಾಧನೆ ಮಾಡಿದ್ದಾರೆ. ಅಂತವರನ್ನು ಮತ್ತೆ ಸಚಿವರನ್ನಾಗಿ ಮಾಡಬೇಕು ಎನ್ನುವುದು ಎಲ್ಲರ ಅಭಿಲಾಷೆಯಾಗಿದೆ ಎಂದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಆರ್. ನಾರಾಯಣಗೌಡರು, ೧೯೯೪ರಿಂದ ಕೆ.ಎನ್. ರಾಜಣ್ಣನವರ ಜೊತೆಯಲ್ಲಿದ್ದು ಅವರ ಸೇವಾ ಕಾರ್ಯವನ್ನು ಹತ್ತಿರದಿಂದ ತಿಳಿದಿರುವೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೆ, ಸಹಾಯ ಯಾಚಿಸಿ ಬಂದವರಿಗೆ ಸಹಾಯ ಮಾಡುತ್ತಾರೆ. ಶೋಷಿತರು, ಅವಕಾಶ ವಂಚಿತರಿಗೆ ನೆರವಾಗುತ್ತಾ ಬಂದಿದ್ದಾರೆ. ತಾವು ಶಾಸಕರಾದ ನಂತರ ಮಧುಗಿರಿ ಕ್ಷೇತ್ರ ಹಿಂದೆಂದೂ ಆಗಿರದಂತಹ ಅಭಿವೃದ್ಧಿ ಕಂಡಿದೆ. ತಾಲೂಕು ಕೇಂದ್ರವಾದ ಮಧುಗಿರಿಯಲ್ಲಿ ಜಿಲ್ಲಾ ಕೇಂದ್ರದ ಎಲ್ಲಾ ಸೌಕರ್ಯಗಳನ್ನೂ ಮಾಡಿ, ಮಾದರಿ ಕ್ಷೇತ್ರವನ್ನಾಗಿ ಮಾಡಿದ ಅಭಿವೃದ್ಧಿ ಹರಿಕಾರರು ಎಂದು ಹೇಳಿದರು. ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಡಾ.ಧನಿಯಾಕುಮಾರ್, ಮುಖಂಡರಾದ ಲಕ್ಷ್ಮೀನಾರಾಯಣ ಮತ್ತಿತರರು ಮಾತನಾಡಿ ಕೆ.ಎನ್. ರಾಜಣ್ಣನವರ ಕೊಡುಗೆ ಕೊಂಡಾಡಿದರು.

ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ವಿವಿ ಸಿಂಡಿಕೇಟ್ ಸದಸ್ಯ ಶಿವಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜು, ಮುಖಂಡರಾದ ಶಿವಣ್ಣ, ಬಂದ್ರೆಹಳ್ಳಿ ಮಂಜುನಾಥ್, ಮುತ್ತರಾಯಪ್ಪ, ಶಿವಕುಮಾರ್, ಅಬಕಾರಿ ನಾಗರಾಜು, ರಮಣರೆಡ್ಡಿ, ಬಸವರಾಜು, ತಿಪ್ಪೇಸ್ವಾಮಿ, ಗುರುಮೂರ್ತಿ ಮೊದಲಾದವರು ಭಾಗವಹಿಸಿ ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣಗೌಡರನ್ನು ಅಭಿನಂದಿಸಿ ಶುಭಕೋರಿದರು.