ಪರ್ತಗಾಳಿಯಲ್ಲಿ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿಯವರ ಚಾರ್ತುರ್ಮಾಸ್ಯ ಆರಂಭಕನ್ನಡಪ್ರಭ ವಾರ್ತೆ ಭಟ್ಕಳ
ಪರಿಶುದ್ಧವಾದ ಭಕ್ತಿಯಿಂದ ದೇವರನ್ನು ಒಲಿಸಿಕೊಳ್ಳಬಹುದೇ ಹೊರತು ಯಾವುದೇ ಸಂಪತ್ತಿನಿಂದಲ್ಲ. ದೇವರು ಭಕ್ತನ ಸಂಪತ್ತನ್ನು ನೋಡುವುದಿಲ್ಲ, ಭಕ್ತಿಯನ್ನೇ ಪರಿಗಣಿಸುತ್ತಾನೆ ಎಂದು ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ಆಶೀರ್ವಚನ ನೀಡಿದರು.ಪರ್ತಗಾಳಿಯಲ್ಲಿ ಚಾತುರ್ಮಾಸ್ಯ-೨೦೨೬ರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಪೂರ್ವಜನ್ಮದ ಕರ್ಮಫಲವನ್ನು ಅನುಭವಿಸುತ್ತಿರುವ ನಾವು ಈ ಜನ್ಮದಲ್ಲಿ ಸತ್ಕರ್ಮ ಹಾಗೂ ದೇವಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೆ ದುಷ್ಕರ್ಮಗಳ ಫಲ ಕ್ಷೀಣಿಸಿ, ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ನೂತನ ಅಧಿಕೃತ ವೆಬ್ಸೈಟ್ನ್ನು ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು. ಮಠದಲ್ಲಿ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ನಿತ್ಯ ಪಂಚಾಂಗ, ಅಪರೂಪದ ಗ್ರಂಥಗಳು, ಸೇವಾ ಬುಕ್ಕಿಂಗ್, ಶ್ರೀ ಸ್ವಾಮೀಜಿಯವರ ಮೊಕ್ಕಾಂ ಸೇರಿ ಮಠದ ಸಮಗ್ರ ಮಾಹಿತಿಯನ್ನು ವಿಶ್ವದಾದ್ಯಂತ ಇರುವ ಶಿಷ್ಯವೃಂದಕ್ಕೆ ತಲುಪಿಸುವ ಉದ್ದೇಶದಿಂದ ವೆಬ್ಸೈಟ್ ಅಭಿವೃದ್ಧಿಪಡಿಸಲಾಗಿದೆ ಎಂದರು.ಆದರ್ಶಧಾಮ ಹಾಗೂ ಶ್ರೀರಾಮ ಥೀಮ್ ಪಾರ್ಕ್ ನಿರ್ಮಾಣಕ್ಕೆ ದೇಣಿಗೆ ಸಲ್ಲಿಸಿದ ಮೂಲತಃ ಅಂಕೋಲದ, ಪ್ರಸ್ತುತ ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶಶಿಕಾಂತ ರಾಯಪ್ಪ ಶಾನಭಾಗ ಅವರನ್ನು ಶ್ರೀಗಳು ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ಜೀವೋತ್ತಮ ವಿದ್ಯಾಪೀಠದ ವಿದ್ಯಾರ್ಥಿಗಳು, ವೈದಿಕರು, ಕರ್ನಾಟಕ, ಗೋವಾ, ಕೇರಳ ಹಾಗೂ ಮಹಾರಾಷ್ಟ್ರದ ವಿವಿಧ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರು, ಪರ್ತಗಾಳಿ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಅನಿಲ ಪೈ ಹಾಗೂ ಸದಸ್ಯರು, ಮಾಜಿ ಉಪಮುಖ್ಯಮಂತ್ರಿ ದಿಗಂಬರ ಕಾಮತ, ಗೋಕರ್ಣ ಮಠ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಶ್ರೀನಿವಾಸ ದೆಂಪೊ, ಉಪಾಧ್ಯಕ್ಷ ಆರ್.ಆರ್. ಕಾಮತ, ವಿವಿಧ ಸಮಿತಿಗಳ ಸದಸ್ಯರು, ಗಣ್ಯರು ಹಾಗೂ ದೇಶ-ವಿದೇಶಗಳಿಂದ ಆಗಮಿಸಿದ್ದ ಸಹಸ್ರಾರು ಶಿಷ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.
--------
6ಬಿಕೆಲ್4: ಗೋವಾದ ಪರ್ತಗಾಳಿಯಲ್ಲಿ ಚಾತುರ್ಮಾಸ್ಯ-೨೦೨೬ರ ಅಂಗವಾಗಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ.