ಶ್ರೀರಂಗನಾಥಸ್ವಾಮಿಗೆ ಸಡಗರ, ಸಂಭ್ರಮದ ಬಂಗಾರದ ಗರುಡೋತ್ಸವ

| Published : May 13 2025, 01:31 AM IST

ಶ್ರೀರಂಗನಾಥಸ್ವಾಮಿಗೆ ಸಡಗರ, ಸಂಭ್ರಮದ ಬಂಗಾರದ ಗರುಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವಿಷ್ಣುವಿನ ವಾಹನ ಬಂಗಾರದ ಗರುಡ ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ, ಅಲಂಕಾರ ಮಾಡಿ ಮಂಗಳ ವಾದ್ಯದೊಂದಿಗೆ ಪಟ್ಟಣದ ರಾಜ ಬೀದಿಯಲ್ಲಿ ದೇವಾಲಯದ ಸಿಬ್ಬಂದಿಯಿಂದ ರಥವನ್ನು ಮೆರವಣಿಗೆ ನಡೆಸಲಾಯಿತು. ಮನೆ ಬಾಗಿಲಿಗೆ ಆಗಮಿಸಿದ ಗರುಡ ಸ್ವಾಮಿಯ ರಥೋತ್ಸವಕ್ಕೆ ಭಕ್ತರು ಹಣ್ಣು, ಕಾಯಿ ಪೂಜೆ ಸಲ್ಲಿಸಿ, ಆರತಿ ಎತ್ತಿ ಪೂಜಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಶ್ರೀರಂಗನಾಥ ಸ್ವಾಮಿಯ ಬಂಗಾರದ ಗರುಡೋತ್ಸವ ಸೋಮವಾರ ಸಡಗರ, ಸಂಭ್ರಮದಿಂದ ಜರುಗಿತು.

ವೈಶಾಖ ಮಾಸದ ವ್ಯಾಸ ಪೌರ್ಣಮಿ ಅಂಗವಾಗಿ ಈ ಉತ್ಸವ ಜರುಗಲಿದ್ದು, ದೇವಾಲಯದ ಮುಖ್ಯ ಅರ್ಚಕ ವಿಜಯ ಸಾರಥಿ ನೇತೃತ್ವದಲ್ಲಿ ಮುಂಜಾನೆಯಿಂದಲೇ ಶ್ರೀರಂಗನಾಥ ದೇವಾಲಯದಲ್ಲಿ ಹೋಮ, ಹವನ ಕಾರ್ಯಕ್ರಮಗಳೊಂದಿಗೆ ಗರುಡ ಸ್ವಾಮಿಗೆ ವಿಶೇಷ ಪೂಜೆ ನಡೆಸಲಾಯಿತು.

ವಿಷ್ಣುವಿನ ವಾಹನ ಬಂಗಾರದ ಗರುಡ ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ, ಅಲಂಕಾರ ಮಾಡಿ ಮಂಗಳ ವಾದ್ಯದೊಂದಿಗೆ ಪಟ್ಟಣದ ರಾಜ ಬೀದಿಯಲ್ಲಿ ದೇವಾಲಯದ ಸಿಬ್ಬಂದಿಯಿಂದ ರಥವನ್ನು ಮೆರವಣಿಗೆ ನಡೆಸಲಾಯಿತು. ಮನೆ ಬಾಗಿಲಿಗೆ ಆಗಮಿಸಿದ ಗರುಡ ಸ್ವಾಮಿಯ ರಥೋತ್ಸವಕ್ಕೆ ಭಕ್ತರು ಹಣ್ಣು, ಕಾಯಿ ಪೂಜೆ ಸಲ್ಲಿಸಿ, ಆರತಿ ಎತ್ತಿ ಪೂಜಿಸಿದರು.

ರಸ್ತೆಯುದ್ದಕ್ಕೂ ಭಕ್ತರಿಗೆ ಮಜ್ಜಿಗೆ, ಪಾನಕ ನೀಡುವುದು ಕಂಡು ಬಂದಿತ್ತು. ನಂತರ ರಥೋತ್ಸವ ಮಧ್ಯಾಹ್ನ 2.30ರ ವೇಳೆ ದೇವಾಲಯದ ಬಳಿ ತಲುಪಿತು.

ದೇವಾಲಯದ ಇಒ ಪದ್ಮ, ದೇವಾಲಯ ಸಮಿತಿ ಅಧ್ಯಕ್ಷ, ಸದಸ್ಯರು, ಸಿಬ್ಬಂದಿ ವರ್ಗ ಸೇರಿದಂತೆ ಅರ್ಚಕ, ಭಕ್ತರು ಭಾಗಿಯಾಗಿದ್ದರು.