ಬೆಂಗಳೂರು ಕರಗದಲ್ಲಿ ಗೋಂವಿದನದ್ದೇ ಜಪ

| Published : Apr 24 2024, 02:20 AM IST

ಸಾರಾಂಶ

ಬೆಂಗಳೂರಿನ ಐತಿಹಾಸಿಕ ಪ್ರಸಿದ್ಧ ಕರಗ ಬುಧವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು. ದ್ರೌಪದಿದೇವಿಯ ಹೂವಿನ ಕರಗವು ನಗರದಲ್ಲಿ ವಿವಿಧೆಡೆ ಸಂಚರಿಸಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚೈತ್ರಮಾಸದ ಶುದ್ಧ ಪೌರ್ಣಿಮೆ ರಾತ್ರಿ ಬೆಳದಿಂಗಳ ಬೆಳಕಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಮಂಗಳವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡು ಪುನೀತರಾದರು.

ಮಂಗಳವಾರ ಬೆಳಗ್ಗೆಯಿಂದಲೇ ಭಕ್ತರಲ್ಲಿ ಸಡಗರ, ಸಂಭ್ರಮ ಮನೆ ಮಾಡಿತ್ತು. ದೇವಾಲಯದ ಆವರಣ ಮಲ್ಲಿಗೆ, ಕರ್ಪೂರದ ಪರಿಮಳದೊಂದಿಗೆ ಘಮಗುಡುತ್ತಿತ್ತು. ನಗರ್ತಲಪೇಟೆಯಲ್ಲಿ ಇರುವ ಧರ್ಮರಾಯ ಸ್ವಾಮಿ ಮಹಾ ರಥೋತ್ಸವ ಹೊರಡುತ್ತಿದ್ದಂತೆ, ಅದರ ಹಿಂದೆಯೇ ಗರ್ಭಗುಡಿಯಿಂದ ದ್ರೌಪದಿದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು.

ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಿಗಳ ಸಮುದಾಯದ ಅರ್ಚಕ ವಿ.ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ಹೆಜ್ಜೆ ಹಾಕಿದರು. ಕರಗದ ಅಕ್ಕಪಕ್ಕದಲ್ಲಿ ವೀರಕುಮಾರರು ಕರಗಕ್ಕೆ ಭದ್ರತೆ ಒದಗಿಸಿದರು.

ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯುತ್ಸವ (ದ್ರೌಪದಿ ದೇವಿಯ ಕರಗ) ಮಂಗಳವಾರ ಮಧ್ಯರಾತ್ರಿ ಆರಂಭವಾಗಿ, ಬುಧವಾರ ಬೆಳಗಿನ ಜಾವದವರೆಗೆ ನಗರದ ನಾನಾ ಭಾಗಗಳಲ್ಲಿ ಕರಗ ಸಾಗಿತು.

ನಗರದ ಆಯ್ದ ರಸ್ತೆಗಳಲ್ಲಿ ಕರಗ ಸಂಚರಿಸಿದರೂ ಕೂಡ ಇಡೀ ಬೆಂಗಳೂರಿಗರು ಕರಗ ನಡೆಯುವ ಜಾಗಕ್ಕೇ ಬಂದು ರಸ್ತೆ ಇಕ್ಕೆಲ, ಕಟ್ಟಡ, ಕಾಂಪೌಂಡ್‌ಗಳ ಮೇಲೂ ನಿಂತು ದೇವರ ದರ್ಶನ ಪಡೆದರು. ಹೀಗಾಗಿ ಇಡೀ ಬೆಂಗಳೂರಿಗೆ ಬೆಂಗಳೂರೇ ಕರಗಕ್ಕೆ ಸಾಕ್ಷಿಯಾಗಿತ್ತು. ನೆರೆ ಜಿಲ್ಲೆ ಹಾಗೂ ರಾಜ್ಯಗಳಿಂದಲೂ ಭಕ್ತರು ಕರಗ ವೀಕ್ಷಣೆಗೆ ಆಗಮಿಸಿದ್ದು ಕಂಡು ಬಂತು.

ಸಾಂಪ್ರದಾಯಿಕ ಆಚರಣೆ

ಶಕ್ತಿ ದೇವತೆ ದ್ರೌಪದಿ ದೇವಿಯ ಹೆಸರಿನಲ್ಲಿ ನಡೆಯುವುದೇ ಹೂವಿನ ಕರಗ ಉತ್ಸವ ಅಂಗವಾಗಿ ಮಂಗಳವಾರ ಸಂಜೆ ಚಂದ್ರೋದಯವಾಗುತ್ತಿದ್ದಂತೆ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕರಾದ ಜ್ಞಾನೇಂದ್ರ ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ನೂರಾರು ವೀರಕುಮಾರರ ನಡುವೆ ಮಂಗಳವಾದ್ಯಗಳೊಂದಿಗೆ ಕಬ್ಬನ್ ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು. ಅಲ್ಲಿಂದ ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂದಿರುಗಿ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡರು.

ಮಲ್ಲಿಗೆ ಹೂವಿನ ಅಲಂಕಾರ:

ದೇವಾಲಯದಲ್ಲಿ ಪರಿವಾರ ಸಹಿತ ಶ್ರೀ ಧರ್ಮರಾಯಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಕುಂಭದಲ್ಲಿ ದುರ್ಗೆ (ದ್ರೌಪದಿ ದೇವಿ) ಯನ್ನು ಆಹ್ವಾನಿಸಿ, ಪೂಜಿಸಿ, ಅದಕ್ಕೆ ಹೂವಿನಿಂದ ಅಲಂಕಾರ ಮಾಡಲಾಯಿತು. ಈ ವೇಳೆ ಹಳದಿ ಸೀರೆಯುಟ್ಟು, ಬಳೆ ತೊಟ್ಟಿದ್ದ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕ ಜ್ಞಾನೇಂದ್ರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

ಬಳಿಕ ಹೂವಿನ ಕರಗ ಹೊತ್ತು ದೇವಸ್ಥಾನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಸಮೀಪದ ಶಕ್ತಿ ಗಣಪತಿ ಮತ್ತು ಮುತ್ಯಾಲಮ್ಮದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

5 ಕೆ.ಜಿ ಕರ್ಪೂರ ಸೇವೆ:

ಮುಂಜಾನೆ ಅರ್ಚಕರು ಹಾಗೂ ವೀರಕುಮಾರರು ಎಂದಿನಂತೆ ಧರ್ಮರಾಯ ದೇವಸ್ಥಾನದಿಂದ ಕರಗದ ಕುಂಟೆಗೆ ಸಾಗಿ ಗಂಗೆ ಪೂಜೆ ಮಾಡಿ, ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಹರಕೆ ಹೊತ್ತ ಭಕ್ತರು ದೇವಾಲಯದ ಮುಂದೆ ರಾಶಿಗಟ್ಟಲೆ (5 ಸಾವಿರ ಕೆ.ಜಿ. ಅಧಿಕ) ಕರ್ಪೂರ ಉರಿಸಿದರು.

ಮಧ್ಯಾಹ್ನ 3ಕ್ಕೆ ದೇವಾಲಯದಲ್ಲಿ ಬಳೆ ತೊಡಿಸುವ ಶಾಸ್ತ್ರ ನೆರವೇರಿತು. ನಂತರ ಅರ್ಜುನ ಮತ್ತು ದ್ರೌಪದಿ ದೇವಿಗೆ ವಿವಾಹ ಶಾಸ್ತ್ರ ಮಾಡಲಾಯಿತು. ಸಂಜೆ ಶಾಂತಿ ಹೋಮ, ಗಣ ಹೋಮ ನಡೆಯಿತು.

ಪಲ್ಲಕ್ಕಿ ಉತ್ಸವ:

ಕರಗ ಶಕ್ತ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ನಗರದ ನಾನಾ ಭಾಗಗಳಿಂದ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಅಣ್ಣಮ್ಮ ದೇವಿ ಸೇರಿ ನಗರದ ಸುತ್ತಮುತ್ತಲ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ ರಥಗಳು ರಾತ್ರಿ ವೇಳೆಗೆ ಮಾರುಕಟ್ಟೆ ಪ್ರದೇಶ ತಲುಪಿದವು.

ಮಹಾರಾಜರ ಕಾಲದ ಬೆಂಗಳೂರಿನ ತಿಗಳರಪೇಟೆ, ರಾಣಾಸಿಂಗ್ ಪೇಟೆ, ಅರಳೆಪೇಟೆ, ಅಕ್ಕಿಪೇಟೆ, ಬಳೆಪೇಟೆ, ಕಬ್ಬನ್‌ಪೇಟೆ, ಚಿಕ್ಕಪೇಟೆ ಇತ್ಯಾದಿಗಳಲ್ಲೆಲ್ಲ ಅಧಿಕ ಸಂಖ್ಯೆಯಲ್ಲಿರುವ ಕುಲಬಾಂಧವರು ಕಳೆದ ಒಂಭತ್ತು ದಿನಗಳಿಂದ ಕರಗ ಉತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.ಕರಗ ಸಾಗಿದ ಮಾರ್ಗ

ವಿವಿಧ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸುತ್ತ ಸಾಗಿದ ಕರಗ ಮುಂಜಾನೆವರೆಗೆ ನಗರದ ಅಲಸೂರು ಪೇಟೆ, ಗಾಣಿಗರಪೇಟೆ, ನಗರ್ತರಪೇಟೆ, ಕಬ್ಬನ್ ಪೇಟೆ, ಉಪ್ಪಾರಪೇಟೆ, ಅಕ್ಕಿಪೇಟೆ, ಅರಳೇಪೇಟೆ, ಬಳೇಪೇಟೆ, ಕುಂಬಾರಪೇಟೆ, ಗೊಲ್ಲರಪೇಟೆ, ಮಾಮೂಲುಪೇಟೆ, ತಿಗಳರ ಪೇಟೆ, ಸುಣ್ಣಕಲ್ ಪೇಟೆ, ಅವೆನ್ಯೂ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾಗಿದ ಹೂವಿನ ಕರಗ ಬೆಳಗಿನ ಜಾವದವರೆಗೂ ನಡೆಯಿತು.

3 ಸಾವಿರ ಕೆ.ಜಿ. ಸೇಲಂ ಮೊಗ್ಗು

ಕರಗಕ್ಕೆ ಸುಮಾರು 4 ಸಾವಿರ ಮಲ್ಲಿಗೆ ಹಾರುಗಳು ಸೇರಿದಂತೆ 3 ಸಾವಿರ ಕೆ.ಜಿ. ಸೇಲಂ ಮಲ್ಲಿಗೆ ಹೂವು ಬಳಸಲಾಗಿದೆ. ಕರಗದಲ್ಲಿ ಪಾಲ್ಗೊಳ್ಳುವ ಸಹಸ್ರಾರು ವೀರಗಾರರಿಗೆ ಕರಗವಸ್ತ್ರ ಮತ್ತು ಪೇಟವನ್ನು ವಿತರಿಸಲಾಯಿತು. ಇದಲ್ಲದೆ ದೀಕ್ಷೆ ಪಡೆದ ಸಾವಿರಾರು ವೀರಕುಮಾರರಿಗೆ ದೀಕ್ಷಾ ಖಡ್ಗಗಳನ್ನೂ ಉಚಿತವಾಗಿ ನೀಡಲಾಯಿತು ಎಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಸತೀಶ್ ಮಾಹಿತಿ ನೀಡಿದ್ದಾರೆ.- - -

ಬಾಕ್ಸ್‌

ಸಿಎಂ ಭೇಟಿ ವೇಳೆ ಮೋದಿ ಘೋಷಣೆ

ಬೆಂಗಳೂರು ಕರಗ ಉತ್ಸವದ ಅಂಗವಾಗಿ ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀ ಧರ್ಮರಾಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸಿದ್ದರಾಮಯ್ಯ ಅವರಿಗೆ ಶಾಸಕ ಹ್ಯಾರೀಸ್‌ ಸ್ವಾಗತ ಕೋರಿದರು. ವಿಧಾನಪರಿಷತ್‌ನ ಮಾಜಿ ಸದಸ್ಯ ಪಿ.ಆರ್‌.ರಮೇಶ್‌ ಸೇರಿದಂತೆ ಮೊದಲಾದವರಿದ್ದರು. ಈ ವೇಳೆ ಮೋದಿ... ಮೋದಿ... ಎಂಬ ಘೋಷಣೆಗಳನ್ನು ಕೂಗಲಾಯಿತು.