ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ವಿದ್ಯಾರ್ಥಿಗಳು ಸರಿಯಾದ ಮಾರ್ಗದಲ್ಲಿ ನಡೆದು ಒಳ್ಳೆಯ ಮತ್ತು ಹೊಸ ವಿಚಾರಗಳಲ್ಲಿ ಭಾಗಿಯಾಗಬೇಕು ಎಂದು ಸಿದ್ದಾಪುರದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಾಹಕ ನಿರ್ದೇಶಕ ವಿರೂಪಾಕ್ಷಯ್ಯ ಗುಡಗುಂಟಿಮಠ ಹೇಳಿದರು.

ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಸೃಜನೋತ್ಸವ ೨೦೨೬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಗುರಿ, ಕಲಿಕೆ, ಧೈರ್ಯ ಈ 3 ವಿಚಾರಗಳನ್ನು ಎಂದಿಗೂ ಮರೆಯಬಾರದು. ಜೊತೆಗೆ ಪಾಲಕರು ಮಕ್ಕಳ ಸೃಜನಶೀಲತೆಗೆ ಕೈಜೋಡಿಸಬೇಕು. ತಾವು ಮಾಡುವ ಕೆಲಸದಲ್ಲಿ ಮನಸ್ಸನ್ನು ತೊಡಗಿಸಿ ಕಾರ್ಯನಿರ್ವಹಿಸಿದರೆ ಗೆಲವು ಸಾಧ್ಯ ಎಂದರು.ಜಮಖಂಡಿಯ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ಮಾತನಾಡಿ, ಇಂದಿನ ಯುವ ಪೀಳಿಗೆ ನಮ್ಮ ದೇಶ,ರಾಜ್ಯ, ಜಿಲ್ಲಾದ್ಯಂತ ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಸಾಮಾಜಿಕ ಕಾರ್ಯದಲ್ಲಿ ತೊಡಗಿ ಗುರುಗಳಿಗೆ, ತಂದೆ-ತಾಯಂದಿರಿಗೆ ಒಳ್ಳೆಯ ಮಕ್ಕಳು ಎಂದೆನಿಸಿಕೊಳ್ಳಬೇಕು ಎಂದರು.ಕೆಎಲ್ಇ ಪದವಿ ಕಾಲೇಜಿನ ಪ್ರಾಚಾರ್ಯ ಎನ್.ಬಿ.ಪಾಟೀಲ ಮಾತನಾಡಿ, ಜೀವನದಲ್ಲಿ ನಿರಂತರ ಪ್ರಯತ್ನದಿಂದ ಕೆಲಸ ಮಾಡಿ ಮಾಲೀಕರಾಗಿ. ಯಾವುದೇ ಕೆಲಸಕ್ಕೆ ಹಿಂಜರಿಕೆ ಬೇಡ. ಮೊದಲು ಅರಿತು, ಕಲಿತು ಧೈರ್ಯದಿಂದ ಮುನ್ನುಗ್ಗಿ ಎಂದರು.ನಂತರ ಜಮಖಂಡಿಯ ಓಲೆಮಠದ ಆನಂದ ದೇವರು ಸಾನ್ನಿಧ್ಯ ವಹಿಸಿ ವಿದ್ಯಾರ್ಥಿಗಳ ಜೀವನ ಮಾರ್ಗ ಯಶಸ್ವಿಯಾಗಲಿ ಎಂದು ಹಾರೈಸಿದರು. ಕೆಎಲ್‌ಇ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಎಸ್.ಐ.ಕುಂದಗೋಳ ವಾರ್ಷಿಕ ವರದಿ ವಾಚಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳಾದ ರೋಹಿಣಿ ರಾವಳ, ಪ್ರಜ್ಞಾ ಬೆಳಗಾಂವಕರ, ಬಸವರಾಜ ತೇಲಿ, ಶಿವಾನಂದ ಮಲಾಬದಿ ಅನಿಸಿಕೆ ಹಂಚಿಕೊಂಡರು. ಈ ವರ್ಷ ಬೀಳ್ಕೊಡುವ ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಫೈಲ್ ವಿತರಿಸಲಾಯಿತು. ಅನೇಕ ವಿದ್ಯಾರ್ಥಿಗಳು ಉತ್ತಮ ಬಹುಮಾನ ಪಡೆದರು. ಹಾಡಿನ ಜೊತೆಗೆ ಕುಣಿದು ಕುಪ್ಪಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಂಸ್ಥೆಯ ನಿರ್ದೇಶಕ ಅಶೋಕ ಅಂಗಡಿ, ಉಮೇಶ ಹಾದಿಮನಿ, ವಂದನಾ ಪಸಾರ ಸೇರಿದಂತೆ ವಿವಿಧ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿದ್ದರು. ಶಿಕ್ಷಕರಾದ ಸವಿತಾ ಬೀಳಗಿ, ವಿಶಾಲ ಮೆಟಗುಡ್ ನಿರೂಪಿಸಿ, ವಂದಿಸಿದರು.