ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ದೇಹಕ್ಕೆ ಅವಶ್ಯವಿರುವ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸುವುದರ ಮೂಲಕ ಪೌಷ್ಟಿಕ ಮಟ್ಟವನ್ನು ಕಾಪಾಡಿಕೊಳ್ಳುವ ಕಡೆಗೆ ಜನರು ಹೆಚ್ಚಿನ ಗಮನಹರಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಾಂತರ ಯೋಜನಾಧಿಕಾರಿ ಕೆ. ಸುರೇಶ್ ತಿಳಿಸಿದರು.ತಾಲೂಕಿನ ಬಜಗೂರಿನ ಜೀವನಜ್ಯೋತಿ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮಾಂತರ ವತಿಯಿಂದ ಪೌಷ್ಟಿಕ ಆಹಾರ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಅವರು, ಪ್ರಕೃತಿದತ್ತವಾಗಿ ದೊರೆಯುವ ಸೊಪ್ಪು, ತರಕಾರಿಗಳಲ್ಲಿ ಹೆಚ್ಚಿನ ಪೋಷಕಾಂಶಗಳಿದ್ದು, ಇವುಗಳನ್ನು ಬಳಸುವುದರ ಮೂಲಕ ಅಪೌಷ್ಟಿಕತೆ, ರಕ್ತಹೀನತೆಯನ್ನು ತಡೆಗಟ್ಟಬಹುದು. ತಮ್ಮ ಮನೆಯ ಮುಂದೆ ಸ್ಥಳೀಯವಾಗಿ ಸಿಗುವ ಸಾವಯವ ಗೊಬ್ಬರದ ಮೂಲಕ ಕೈತೋಟ ಮಾಡಿ ಸೊಪ್ಪು, ತರಕಾರಿ ಬೆಳೆದು ಬಳಸುವುದರಿಂದಲೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಮ್ಮ ಜ್ಞಾನ ವಿಕಾಸ ಕೇಂದ್ರದ ಮೂಲಕ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ, ಕಾನೂನು ಅರಿವು, ಸರ್ಕಾರಿ ಯೋಜನೆ ಮುಂತಾದ ವಿಷಯಗಳ ಮಾಹಿತಿ ನೀಡುತ್ತಿದ್ದು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಆರೋಗ್ಯ ಸಹಾಯಕಿ ಪವಿತ್ರ ಮಾತನಾಡಿ, ಯಾವ ತರಕಾರಿ ಮತ್ತು ಅಡುಗೆಯಲ್ಲಿ ಯಾವ ಯಾವ ವಿಟಮಿನ್ ಇರುತ್ತದೆ, ಸೊಪ್ಪು ತರಕಾರಿಯಿಂದ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು, ಸೊಪ್ಪಿನಲ್ಲಿರುವ ಔಷದಿ ಗುಣಗಳು ಬಗ್ಗೆ, ಮಧುಮೇಹ, ರಕ್ತ ಹೀನತೆ, ಮುಟ್ಟಿನ ಸಮಸ್ಯೆ, ಗರ್ಭ ಕೋಶ ಕ್ಯಾನ್ಸರ್ ಬಗ್ಗೆ ಹಾಗೂ ಗರ್ಭಿಣಿ ಬಾಣಂತಿಯರಿಗೆ ಕೊಡುವ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮದ ಶಿವಕುಮಾರ್, ನಾಗರಾಜು, ವಲಯದ ಮೇಲ್ವಿಚಾರಕ, ಮಧು , ಜ್ಞಾನ ವಿಕಾಸ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮೀ, ಸೇವಾಪ್ರತಿನಿಧಿ ಶ್ವೇತ, ವಿಎಲ್ಇ ಪದ್ಮ ಸೇರಿದಂತೆ ಎಲ್ಲಾ ಸದಸ್ಯರು ಭಾಗವಹಿಸಿದ್ದರು.