ಕೊಡಗು ಜಿಲ್ಲೆಯಲ್ಲಿ ಎಂನರೇಗಾ ಯೋಜನೆ ಉತ್ತಮ ಅನುಷ್ಠಾನ: ವೇಣುಗೋಪಾಲ್‌

| Published : Feb 29 2024, 02:00 AM IST

ಸಾರಾಂಶ

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಮೋದಿತ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಸಾಮಾಗ್ರಿ ವೆಚ್ಚ ಪಾವತಿ ಮಾಡುವಾಗ ಎಲ್ಲಾ ಕಾಮಗಾರಿಗಳ ಎಫ್.ಟಿ.ಒ ಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕ ವೇಣುಗೋಪಾಲ್ ಮಡಿಕೇರಿಯಲ್ಲಿ ಬುಧವಾರ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಉತ್ತಮವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮತ್ತಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕ ವೇಣುಗೋಪಾಲ್ ಸೂಚನೆ ನೀಡಿದ್ದಾರೆ. ನಗರದ ಜಿ.ಪಂ. ಕಚೇರಿಯಲ್ಲಿ ಬುಧವಾರ ಮಹಾತ್ಮಗಾಂಧಿ ನರೇಗಾ ಯೋಜನೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಮಹಾತ್ಮಗಾಂಧಿ ನರೇಗಾ ರಾಷ್ಟ್ರಾದ್ಯಂತ ಅನುಷ್ಠಾನಗೊಳ್ಳುತ್ತಿರುವ ಮಹತ್ತರ ಯೋಜನೆಯಾಗಿದೆ. ತಾಂತ್ರಿಕವಾಗಿಯೂ ಹಲವಾರು ಬದಲಾವಣೆಗಳನ್ನು ಯೋಜನೆಯಲ್ಲಿ ತರಲಾಗಿದೆ. ಸೂಕ್ತ ಫಲಾನುಭವಿಗೆ ಯೋಜನೆಯ ಲಾಭ ತಲುಪಬೇಕು. ಯೋಜನೆಯ ಅನುಷ್ಠಾನ ಸಂದರ್ಭದಲ್ಲಿ ಹಲವು ತಾಂತ್ರಿಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜಿ.ಎಸ್.ಟಿ. ಹಾಗೂ ರಾಜಧನ ಪಾವತಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು ಎಂದು ಅವರು ತಾಂತ್ರಿಕ ಸಿಬ್ಬಂದಿಗೆ ನಿರ್ದೇಶನ ನೀಡಿದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅನುಮೋದಿತ ವೈಯಕ್ತಿಕ ಮತ್ತು ಸಮುದಾಯ ಕಾಮಗಾರಿಗಳನ್ನು ಮತ್ತಷ್ಟು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕು. ಸಾಮಾಗ್ರಿ ವೆಚ್ಚ ಪಾವತಿ ಮಾಡುವಾಗ ಎಲ್ಲಾ ಕಾಮಗಾರಿಗಳ ಎಫ್.ಟಿ.ಒ ಗಳನ್ನು ಸೂಕ್ತವಾಗಿ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.

ಕಾಮಗಾರಿಗಳ ಸ್ಥಳ ಪರಿಶೀಲನೆ:

ಸಭೆಯ ಬಳಿಕ ಜಂಟಿ ನಿರ್ದೇಶಕರು ಮಡಿಕೇರಿ ತಾಲೂಕಿನ ಮದೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದರು. ಗ್ರಾ.ಪಂ.ವ್ಯಾಪ್ತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾದ ತೆರೆದ ಬಾವಿ, ದನದ ಕೊಟ್ಟಿಗೆ ಕಾಮಗಾರಿ ಪರಿಶೀಲಿಸಿದರು.

ನಂತರ ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಬೇಳೂರು ಗ್ರಾ.ಪಂ.ನ ಸರ್ಕಾರಿ ಶಾಲೆಯಲ್ಲಿ ಗಿಡ ನೆಡುವ ಕಾಮಗಾರಿ, ಗಣಗೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗೆ ಕಾಂಪೌಡ್ ನಿರ್ಮಾಣ, ಸಿಮೆಂಟ್ ಚರಂಡಿ ಮತ್ತು ಅಮೃತ ಸರೋವರ ಕಾರ್ಯಕ್ರಮದಡಿ ಅಭಿವೃದ್ಧಿ ಮಾಡಲಾದ ಕೆರೆ ಕಾಮಗಾರಿ ಪರಿಶೀಲಿಸಿದರು. ಗ್ರಾ.ಪಂ.ಕಚೇರಿಗಳಿಗೆ ತೆರಳಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿ, ಅಗತ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿದರು.

ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್, ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕರಾದ ಹೇಮಂತ್, ರಾಕೇಶ್, ಸಹಾಯಕ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಮಹೇಂದ್ರ, ಜಿಲ್ಲಾ ಐಇಸಿ ಸಂಯೋಜಕ ಪವನ್ ಕುಮಾರ್, ತಾಂತ್ರಿಕ ಸಂಯೋಜಕರಾದ ರಂಜಿತ್, ದಿಲೀಪ್ ಕುಮಾರ್ ಇತರರು ಇದ್ದರು.