ಕನ್ನಡಪ್ರಭ ವಾರ್ತೆ ಮೈಸೂರು

ಥೈರಾಯ್ಡ್ ನಿಯಂತ್ರಣಕ್ಕೆ ಉತ್ತಮ ಜೀವನ ಶೈಲಿ, ಆಹಾರ ಕ್ರಮ ಬಹಳ ಮುಖ್ಯ ಎಂದು ಜೆಎಸ್‌ಎಸ್‌ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಪಿ. ಮಧು ತಿಳಿಸಿದರು.

ನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಎಂಡೋಕ್ರೈನಾಲಜಿ ವಿಭಾಗವು ಆಯೋಜಿಸಿದ್ದ ವಿಶ್ವ ಥೈರಾಯ್ಡ್‌ ದಿನಾಚರಣೆಯಲ್ಲಿ ಮಾತನಾಡಿದ ಅವರು, ಥೈರಾಯ್ಡ್‌ ಗ್ರಂಥಿಯ ಮಹತ್ವ, ಅದರ ಕಾರ್ಯಗಳು ಮತ್ತು ಸಂಬಂಧಿತ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಇದು ಇತ್ತೀಚೆಗೆ ಸಾಮಾನ್ಯ ಕಾಯಿಲೆಯಾಗಿದ್ದು, ಇದನ್ನು ರಕ್ತ ಪರೀಕ್ಷೆಗಳ ಮೂಲಕ ಸುಲಭವಾಗಿ ಪತ್ತೆ ಹಚ್ಚಬಹುದು. ಸೂಕ್ತ ವೈದ್ಯಕೀಯ ಚಿಕಿತ್ಸೆ, ಔಷಧಿಗಳು, ಆಹಾರಕ್ರಮ ಹಾಗೂ ಶಿಸ್ತಿನ ಜೀವನ ಶೈಲಿಯ ಮೂಲಕ ಇದನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಡಬಹುದು ಎಂದರು.

ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ನಾರಾಯಣಪ್ಪ ಮಾತನಾಡಿ, ಥೈರಾಯ್ಡ್‌ ಜಾಗತಿಕ ಮತ್ತು ಸಾಮಾನ್ಯ ಕಾಯಿಲೆಯಾಗಿದ್ದು, ಇದರ ಬಗ್ಗೆ ಜಾಗೃತಿ ಬಹಳ ಮುಖ್ಯ. ಥೈರಾಯ್ಡ್ ನಮ್ಮ ಕುತ್ತಿಗೆಯ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಸಣ್ಣಗ್ರಂಥಿಯಾಗಿದೆ. ಇದು ದೇಹದ ಅನೇಕ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುವ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಈ ಗ್ರಂಥಿಯ ಕಾರ್ಯ ವೈಖರಿಯಲ್ಲಿ ಏರುಪೇರಾದಾಗ ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂದರು.


ನವಜಾತು ಶಿಶುವಿನಿಂದ ಹಿಡಿದು ವಯಸ್ಕರಲ್ಲೂ ಈ ಕಾಯಿಲೆ ಕಂಡು ಬರುತ್ತಿದ್ದು, ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಹಾರ್ಮೋನುಗಳ ಬೇಡಿಕೆ ಶೇ.50 ರಷ್ಟು ಹೆಚ್ಚಾಗುತ್ತದೆ. ಇದು ತಾಯಿಯ ಚಯಾಪಚಯಕ್ರಿಯೆ ಮತ್ತು ಮಗುವಿನ ಮಿದುಳು ಹಾಗೂ ನರಮಂಡಲದ ಬೆಳವಣಿಗೆಗೆ ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ವೈದ್ಯರ ಸಲಹೆಯ ಮೇರೆಗೆ ಸರಿಯಾದ ಚಿಕಿತ್ಸೆ ಮತ್ತು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತವಾಗಿರಬಹುದು ಎಂದು ಸಲಹೆ ನೀಡಿದರು.

ಬೆಂಗಳೂರಿನ ಶ್ರೀ ಶಂಕರ ಕ್ಯಾನ್ಸರ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸರ್ಜಿಕಲ್‌ ಆಂಕೋಲಜಿಸ್ಟ್‌ ಎಂಡೋಕ್ರೈನ್ ಮತ್ತು ಬ್ರೆಸ್ಟ್ ಸರ್ಜನ್‌ ಡಾ. ಸಸಿಮೌಲಿ ವೇಲಾಡಿ ಮಾತನಾಡಿ, ಇತ್ತೀಚಿನ ಶಸ್ತ್ರಚಿಕಿತ್ಸಾ ಪ್ರಗತಿಗಳು ಥೈರಾಯ್ಡ್ ಗಂಟುಗಳು ಮತ್ತು ಗೆಡ್ಡೆಗಳನ್ನು ನೋವುರಹಿತ ಮತ್ತು ಗಾಯಗಳಿಲ್ಲದೆ ತೆಗೆದು ಹಾಕಲು ಇರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.

ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಎಂ.ಸುರೇಶ್ ಬಾಬು, ವೈದ್ಯರಾದ ಡಾ.ವೈ.ಎಸ್. ರವಿಕುಮಾರ್, ಡಾ. ಲಕ್ಷ್ಮೀ ನಾಗೇಂದ್ರ, ಡಾ. ಅಜಯ್ ಹನುಮಂತು, ಡಾ.ಸಂಜನಾ, ಡಾ.ರಘು, ಡಾ.ನಮ್ರತಾ ಸಿದ್ದಪ್ಪ, ಡಾ. ಮಾಂತಪ್ಪ, ಡಾ. ಶಾಂತಮಲ್ಲಪ್ಪ ಮೊದಲಾದವರು ಇದ್ದರು.