ಕನ್ನಡಪ್ರಭ ವಾರ್ತೆ ಹಮನಾಬಾದ್
ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚುರುಕಾಗಿ ಉತ್ತಮ ಕೆಲಸ ಮಾಡುವಂಥ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಭರವಸೆ ನೀಡಿದರು.ಅವರು ಪಟ್ಟಣದ ಬಸವರಾಜ ಪಾಟೀಲ್ ಹುಮನಾಬಾದ್ ಕಲ್ಯಾಣ ಮಂಟಪದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ನಡೆದ ಎಸ್ಐಆರ್ ಕುರಿತು ಜನಜಾಗೃತಿ ಮತ್ತು ತರಬೇತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರೇ ಪಕ್ಷದ ನಿಜವಾದ ಸಂಪತ್ತು. ಕಾರ್ಯಕರ್ತರಿಂದಲೇ ಬಲಿಷ್ಠ ಸಂಘಟನೆ ಹೊಂದಲು ಸಾಧ್ಯ ಎಂದರು.
ಎಸ್ಐಆರ್ಗೆ ಸಂಬಂಧಿಸಿದಂತೆ ವಾರ್ ರೂಮ್ ನಿರ್ಮಿಸಿ ಅದರಿಂದಲೇ ಮತ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಮಾಹಿತಿ ಪಡೆಯಲು ಸಹಾಯವಾಗುತ್ತದೆ, ಅದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರು ಜಾಗೃತರಾಗಿ ಕೆಲಸ ಮಾಡಿ ಎಂದರು.ತಪ್ಪಿನಿಂದ ತಪ್ಪಿದ ಗೆಲವು, ಸಚಿವನಾಗಿದ್ರೆ ಅಭಿವೃದ್ಧಿ ಮಾಡುತ್ತಿದ್ದೆ: ಹುಮನಾಬಾದ್ ಮತಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮವಾದ ಯೋಜನೆಗಳು ಬಂದಿಲ್ಲ. ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿಂದೆ ನಡೆದ ಚುನಾವಣೆಯಲ್ಲಿ ನಮ್ಮವರು ಜಾಗೃತರಾಗಿ ಕೆಲಸ ಮಾಡಿದರೆ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ನಮ್ಮ ತಪ್ಪುಗಳಿಂದ ಈ ದಿನಗಳಲ್ಲಿ ಅಭಿವೃದ್ಧಿಹೀನತೆಯನ್ನು ಅನುಭವಿಸುತ್ತಿದ್ದೇವೆ. ಜಯ ದಾಖಲಿಸಿದ್ದರೆ ಇಂದು ಸಚಿವನಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ತರುತ್ತಿದ್ದೆ ಎಂದು ಕಳವಳ ವ್ಯಕ್ತಪಡಿಸಿದರು.
ವಿಪ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಇರಲಿಲ್ಲ ಎಂದರೆ ನಮ್ಮ ಪೌರತ್ವ ರದ್ದಾಗುತ್ತದೆ. ಸರ್ಕಾರದ ಯೋಜನೆ, ಇತರೆ ಸೌಲಭ್ಯ ಪಡೆಯಲು ಅನರ್ಹರಾಗುತ್ತೇವೆ. ಹೀಗಾಗಿ ಒಂದು ತಿಂಗಳ ಕಾಲ ನಿರಂತರ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತರಾಗಿ ಮತದಾರ ಪಟ್ಟಿಗೆ ತಮ್ಮ ಹೆಸರು ಸೇರಿಸಬೇಕು ಎಂದರು.
ರಕ್ತಪಾತವಿಲ್ಲದೆ ಜನರ ಹತ್ಯೆಗೆ ಕೇಂದ್ರದಿಂದ ಎಸ್ಐಆರ್ ಸಂಚು: ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ವಿಠಲದಾಸ ತ್ಯಾಗಿ ಮಾತನಾಡಿ, ಎಸ್ಐಆರ್ ಮೂಲಕ ರಕ್ತಪಾತವಿಲ್ಲದೆ ಜನಸಾಮಾನ್ಯರ ಹತ್ಯೆಗೆ ಕೇಂದ್ರ ಸರ್ಕಾರ ವ್ಯವಸ್ಥಿತ ಯೋಜನೆ ಒಂದನ್ನು ರೂಪಿಸಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಎಸ್ಐಆರ್ ಮೂಲಕ ತಮ್ಮ ಪ್ರಾಬಲ್ಯ ಸಾಧಿಸಿವೆ. ಈ ನಮ್ಮ ರಾಜ್ಯದಲ್ಲಿ ಎಲ್ಲರೂ ಜಾಗೃತರಾಗಿ ಎಸ್ಐಆರ್ ವಿರುದ್ಧ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಹಿರಿಯ ಮುಖಂಡ ಕೇಶಪ್ಪ ಬಿರಾದಾರ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಿಎಲ್ಒ ಜೊತೆಗೂಡಿ ಬಿಎಲ್ಎಗಳು ಜಾಗೃತರಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದರು.ವಿಪ ಸದಸ್ಯ ಭೀಮರಾವ್ ಪಾಟೀಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರ್ಮಿಯಾ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಓಂಕಾರ ತುಂಬಾ, ಯುವ ಕಾಂಗ್ರೆಸ್ ಅಧ್ಯಕ್ಷ ಉಮೇಸ ಜಮಗಿ, ಜಿಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಪಂ. ಮಾಜಿ ಸದಸ್ಯ ವೀರಣ್ಣ ಪಾಟೀಲ್, ಕೇಶವರಾವ್ ಮಹಾರಾಜ್, ತಾಪಂ. ಮಾಜಿ ಅಧ್ಯಕ್ಷ ಶಿವರಾಜ ಗಂಗಶಟ್ಟಿ, ತಾಪಂ. ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ, ಕೇಶಪ್ಪ ಬಿರಾದಾರ ಇದ್ದರು.--------
ಹುಮನಾಬಾದ್ನಲ್ಲಿ ನಡೆದ ಎಸ್ಐಆರ್ ಕುರಿತು ಜನಜಾಗೃತಿ ಮತ್ತು ತರಬೇತಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಮಾಜಿ ಸಚಿವ ರಾಜಶೇಖರ ಪಾಟೀಲ್ ಉದ್ಘಾಟಿಸಿದರು.