ಸಾರಾಂಶ
ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಈ ಬಾರಿ ಮುಂಗಾರು ಉತ್ತಮವಾಗಿರುವ ಲಕ್ಷಣಗಳು ಕಾಣುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಬರಗಾಲ ಮತ್ತು ಅತಿವೃಷ್ಟಿಗೆ ರೈತರು ಸಿಲುಕಿ ಕಂಗಾಲಾಗಿದ್ದು, ಆಶ್ವಿನಿ, ಭರಣಿ ಮತ್ತು ಕೃತ್ತಿಕಾ ಮಳೆ ಈ ಬಾರಿ ಉತ್ತಮವಾಗಿ ಸುರಿದಿದ್ದು ರೈತರ ಮೊಗದಲ್ಲಿ ಹರ್ಷ ತಂದಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರೈತರು ಕೃಷಿ ಭೂಮಿಯನ್ನು ಹದಗೊಳಿಸುವ ಕಾರ್ಯ ಭರದಿಂದ ನಡೆಸಿದ್ದು, ಕೆಲ ರೈತರು ಸಾವಯವ ಗೊಬ್ಬರವನ್ನು ಭೂಮಿಗೆ ಸೇರಿಸುವ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಈ ಎಲ್ಲ ಕಾರ್ಯ ಸದ್ಯ ಮುಗಿಯುತ್ತಿದ್ದು, ಭರಣಿ ಮಳೆಗೆ ಬಹುತೇಕ ಬಿತ್ತನೆ ಕಾರ್ಯ ಆರಂಭಗೊಳ್ಳಲಿದೆ.ತಾಲೂಕಿನ ಕಡಕೋಳ, ಹೊಸಳ್ಳಿ, ಮಾಚೇನಹಳ್ಳಿ, ಮಜ್ಜೂರ, ವರವಿ, ತೆಗ್ಗಿನ ಭಾವನೂರ, ಹಡಗಲಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಮಾಗಡಿ, ಹೊಳಲಾಪೂರ, ಪರಸಾಪುರ, ಛಬ್ಬಿ, ರಣತೂರ, ನಾಗರಮಡುವು ಗ್ರಾಮಗಳಲ್ಲಿ ಮಳೆ ಉತ್ತಮವಾಗಿರುವುದರಿಂದ ಈ ಭಾಗದಲ್ಲಿ ರೈತರು ಬಿತ್ತನೆಗೆ ಸಿದ್ಧತೆ ನಡೆಸಿದ್ದು, ಬೀಜ, ಗೊಬ್ಬರ ಸಂಗ್ರಹಿಸಲು ಮುಂದಾಗಿದ್ದಾರೆ.ಅಧಿಕಾರಿ ಹೇಳಿಕೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ ಶೇಂಗಾ ೩೩೫೦ ಹೆಕ್ಟೇರ್, ಹೆಸರು ೩೨೦೦ ಹೆಕ್ಟೇರ್, ಗೋವಿನಜೋಳ ೨೭೧೪೬ ಹೆಕ್ಟೇರ್, ಸೂರ್ಯಕಾಂತಿ ೪೫ ಹೆಕ್ಟೇರ್, ತೊಗರಿ ೪೫೦ ಹೆಕ್ಟೇರ್, ಅಲಸಂದಿ ೫೫ ಹೆಕ್ಟೇರ್, ಬತ್ತ ೪೬೦ ಹೆಕ್ಟೇರ್, ಹತ್ತಿ ೫೭೫ ಹೆಕ್ಟೇರ್, ಕಬ್ಬು ೫೦೦ ಹೆಕ್ಟೇರ್, ಹೈಬ್ರೀಡ್ ಜೋಳ ೧೨೫ ಹೆಕ್ಟೇರ್ ಸೇರಿದಂತೆ ಒಟ್ಟು ೩೬ ೪೧೧ ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಮಳೆ ಉತ್ತಮವಾದಲ್ಲಿ ಈ ಗುರಿ ಮೀರುವ ಸಾಧ್ಯತೆ ಇದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ರೇವಣೆಪ್ಪ ಮನಗೂಳಿ ತಿಳಿಸಿದ್ದಾರೆ.ಈ ಬಾರಿ ಉತ್ತಮ ಮುಂಗಾರು ಮಳೆ ಸುರಿಯುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಹೆಸರು, ಶೇಂಗಾ, ಹೈಬ್ರೀಡ್ ಜೋಳ ಬಿತ್ತನೆಗೆ ಸಜ್ಜಾಗಿದ್ದು, ಬೀಜ, ಗೊಬ್ಬರದ ಸಿದ್ಧತೆ ನಡೆದಿದೆ. ಮಳೆ ಒಂದೆರಡು ದಿನ ಬಿಡುವು ಕೊಟ್ಟರೆ ಬಿತ್ತನೆ ಕಾರ್ಯ ಪ್ರರಂಭವಾಗಲಿದೆ ಎಂದು ರೈತ ಬಸವರಾಜ ತಿರಕಪ್ಪ ಬಂಕಾಪುರ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟಾರೆ ೯೪,೯೧೩ ಭೌಗೋಳಿಕ ಕ್ಷೇತ್ರವಿದ್ದು, ಇದರಲ್ಲಿ ೧೨,೯೪೩ ಅರಣ್ಯ, ೫೯೯೭ ಹೆಕ್ಟೇರ್ ಸಾಗುವಳಿ ಅಲ್ಲದ (ಬಂಜರು ಪ್ರದೇಶ) ಹಾಗೂ ೭೪,೪೭೫ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದೆ. ಇದರಲ್ಲಿ ೬೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುವುದು. ಕಳೆದ ನಾಲ್ಕೈದು ದಿನಗಳಿಂದ ತಾಲೂಕಿನಾದ್ಯಂತ ಮಳೆ ಆಗುತ್ತಿದ್ದು, ರೈತರೆಲ್ಲ ಹಿಂದಿನ ಸಂಕಷ್ಟಗಳನ್ನು ಮರೆತು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.ತಾಲೂಕಿನಲ್ಲಿ ಮೇ ೨೩ರ ವರೆಗೆ ೯೪.೮ ಮಿಮೀ ಮಳೆ ಆಗಬೇಕಿತ್ತು. ಆದರೆ ೧೭೮.೯ ಮಿಮೀ ಮಳೆ ಸುರಿದಿದೆ. ಶೇ. ೮೯ರಷ್ಟು ಮಳೆ ಹೆಚ್ಚಾದ ಬಗ್ಗೆ ವರದಿಯಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಹಂಗಾಮಿನ ಬಿತ್ತನೆಗೆ ತಾಲೂಕಿನ ಸಣ್ಣ, ಅತಿ ಸಣ್ಣ ರೈತರಿಗೆ ಶೇ. ೫೦ರ ಸಹಾಯಧನ ಯೋಜನೆ ಅಡಿ ಹೆಸರು, ಗೋವಿನ ಜೋಳದ ಬೀಜಗಳನ್ನು ನೀಡಲಾಗುವುದು. ಇದಲ್ಲದೆ ಇತರ ರೈತರಿಗೂ ಅವರ ೨ ಹೆಕ್ಟೇರ್ ಜಮೀನಿನ ಮಿತಿಗೊಳಪಟ್ಟಂತೆ ಸಹಾಯಧನದಲ್ಲಿ ಪ್ರಮಾಣಿತ ಬೀಜಗಳನ್ನು ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಡಿಎಪಿ ಗೊಬ್ಬರ ಬಳಕೆಯಿಂದ ಮಣ್ಣಿನ ಸತ್ವ ಕಳೆದು ಹೋಗಿದ್ದು, ಸರ್ಕಾರದ ನಿರ್ದೇಶನದಂತೆ ಸದ್ಯ ಬಿತ್ತನೆಗೆ ಕಾಂಪ್ಲೆಕ್ಸ್ ರಸಗೊಬ್ಬರ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗಿದೆ. ಅಗತ್ಯಾನುಸಾರ ಗೊಬ್ಬರ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.