ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ರ್‍ಯಾಂಕ್‍ಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭವನ್ನು ಎಂ.ಸಿ.ರಘುಚಂದನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಒಳ್ಳೆಯ ಆಲೋಚನೆ, ಉತ್ತಮ ಜೀವನ ನಿಮ್ಮ ಕೈಯಲ್ಲಿದ್ದರೆ ಭವಿಷ್ಯ ರೂಪಿಸಿಕೊಳ್ಳಲು ಸಹಾಯವಾಗಲಿದೆ ಎಂದು ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಿ.ರಘುಚಂದನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಮಂಗಳವಾರ ಸಂಸ್ಥೆಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ನವೆಂಬರ್‌ನಲ್ಲಿ 2025ರಲ್ಲಿ ನಡೆದ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿಶ್ವವಿದ್ಯಾನಿಲಯ ಶ್ರೇಣಿಯಲ್ಲಿ ರ್‍ಯಾಂಕ್‍ಗಳನ್ನು ಪಡೆದ ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹೆಣ್ಣನ್ನು ಭಾರತಮಾತೆ ಎಂದು ಕರೆಯಲಾಗುವುದು. ನಮ್ಮ ದೇಶದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನವಿದೆ. ಆದರೆ ದ್ರೌಪದಿ ಮುರ್ಮುರವರು ರಾಷ್ಟ್ರಪತಿಯಾಗಲು 70 ವರ್ಷ ಬೇಕಾಯಿತು. ಕಲ್ಪನಾ ಚಾವ್ಲ, ದೆಹಲಿ ಮುಖ್ಯಮಂತ್ರಿ ಇವರೆಲ್ಲ ಹೆಣ್ಣಲ್ಲವೇ. ಹೆಣ್ಣಿಲ್ಲದೆ ಯಾವ ಸೃಷ್ಠಿಯೂ ಇಲ್ಲ. ಎಲ್ಲೆಡೆ ಜಾತಿಯತೆ, ಧರ್ಮಾಂಧತೆ ತುಂಬಿ ತುಳುಕುತ್ತಿದೆ. ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಮಾನಸಿಕವಾಗಿ ಬಲಶಾಲಿಗಳಾಗಿ. ನಕಾರಾತ್ಮಕ ಚಿಂತನೆಯಿಂದ ಹೊರಬನ್ನಿ. ಒಬ್ಬರು ಮತ್ತೊಬ್ಬರನ್ನು ನೋಡಿ ಸುಧಾರಿಸಿಕೊಳ್ಳದಷ್ಟು ಅಸೂಯೆಯಿದೆ. ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಸಿಲುಕಿದಾಗ ಹೆಣ್ಣು ಮಾನಸಿಕ ಮತ್ತು ದೈಹಿಕವಾಗಿ ನಿಶ್ಯಕ್ತಳಾಗುವುದು ಸಹಜ. ಸಿನಿಮಾ ಹೀರೋ, ಹೀರೋಯಿನ್‍ಗಳು ನಿಮಗೆ ಮಾಡಲ್ ಆಗಬಾರದು. ನಿಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ಅಪ್ಪ-ಅಮ್ಮ, ವಿದ್ಯೆ ಕಲಿಸಿದ ಗುರುಗಳನ್ನು ಮಾದರಿಯಾಗಿಟ್ಟುಕೊಂಡರೆ ಜೀವನದಲ್ಲಿ ಗುರಿ ಸಾಧಿಸುತ್ತೀರಿ ಎಂದರು.

ನಮ್ಮ ಸಂಸ್ಥೆಯ ಯಾವ ವಿಭಾಗದ ವಿದ್ಯಾರ್ಥಿಗಳಾಗಲಿ ವಿಶ್ವವಿದ್ಯಾನಿಲಯದ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿ ಚಿನ್ನದ ಪದಕ ಪಡೆದರೆ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯಿಂದ 2 ಲಕ್ಷ ರು. ನೀಡಿ ಅಭಿನಂದಿಸಲಾಗುವುದೆಂದು ಭರವಸೆ ನೀಡಿದರು.

ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಡೀನ್ ಡಾ.ಬಿ.ಸಿ.ಅನಂತರಾಮು, ಆದ್ಯಾ ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲರಾದ ಡಾ.ಮೊಹಮದ್ ಮುತಾಹರ್, ಆರ್.ಕೆ.ವೆಂಕಟೇಶ್ವರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಎ.ಜೆ.ಶಿವಕುಮಾರ್, ವೆಂಕಟೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಪಿ.ನಾಗಭೂಷಣ್, ಎಸ್.ಎಲ್.ವಿ.ನರ್ಸಿಂಗ್ ಕಾಲೇಜು ಪ್ರಾಚಾರ್ಯರಾದ ಡಾ.ಎಂ.ಎಂ.ಮಹಾಂತೇಶ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲರಾದ ಕೇಶವಮೂರ್ತಿ, ಮಾನವ ಸಂಪನ್ಮೂಲ ಮತ್ತು ಆಡಳಿತ ವ್ಯವಸ್ಥಾಪಕರಾದ ಡಾ.ಕೊಟ್ರೇಶ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಕೋಟ್ಲಾ ಸುನೀಲ್, ಬೋಧಕ ಮತ್ತು ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.