ಸಮಯದ ಸದ್ಬಳಕೆಯೇ ಸಾಧನೆಗೆ ದಾರಿ: ವಿಜ್ಞಾನಿ ಗುರ್ರಪ್ಪ

| Published : Feb 25 2024, 01:46 AM IST / Updated: Feb 25 2024, 01:47 AM IST

ಸಾರಾಂಶ

ದೇಶದ ಜನಸಂಖ್ಯೆ ಚೀನಾ ಜನಸಂಖ್ಯೆಯನ್ನು ಮೀರಿಸುತ್ತಿದೆ. ಆದರೆ ಯುವಜನತೆ ಹೆಚ್ಚಾಗಿರುವುದು ನಮ್ಮ ದೇಶದಲ್ಲೇ. ಆದ್ದರಿಂದ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಸಾಧನೆ ಮಾಡಬೇಕು

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಸಮಯವನ್ನು ವ್ಯರ್ಥ ಮಾಡದೇ ಶ್ರದ್ಧೆಯಿಂದ ಸದ್ಬಳಕೆ ಮಾಡಿಕೊಂಡು ಓದಿದಾಗ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಸಮಯವನ್ನು ವ್ಯರ್ಥ ಮಾಡದೇ ಓದಬೇಕು ಎಂದು ಇಸ್ರೋ ವಿಜ್ಞಾನಿ ಗುರ್ರಪ್ಪ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಜಂಗಾಲಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಡಾ. ಎಸ್.ಕೆ. ಶಿವಕುಮಾರ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಪೀಠೋಪಕರಣ ಹಾಗೂ ಕಲಿಕೋಪರಣಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣಕ್ಕೆ ಸಕಲ ಸೌಲಭ್ಯ

ನಾವು ಓದುವ ಸಮಯದಲ್ಲಿ ಈಗಿರುವಷ್ಟು ಸೌಲಭ್ಯಗಳು ಮಕ್ಕಳಿಗೆ ಇರಲಿಲ್ಲ. ನೆಲದ ಮೇಲೆ ಕುಳಿತುಕೊಂಡು ಪಾಠ ಕೇಳುತ್ತಿದ್ದೆವು. ಸರಿಯಾದ ಊಟ ಇರುತ್ತಿರಲಿಲ್ಲ, ಸರಿಯಾದ ಬಟ್ಟೆ ಇರುತ್ತಿರಲಿಲ್ಲ. ಜೊತೆಗೆ ಪ್ರಾಥಮಿಕ ಶಾಲಾ ಹಂತ ಮುಗಿದ ಬಳಿಕ ಪ್ರೌಢಶಾಲೆಗೆ ಹೋಗಲು ಬಸ್ ಇಲ್ಲದೇ ನಡೆದುಕೊಂಡು ಹೋಗಬೇಕಾಗಿತ್ತು. ಆದರೆ ಇದೀಗ ಮಕ್ಕಳಿಗೆ ಎಲ್ಲಾ ತರಹದ ಸೌಲಭ್ಯಗಳಿವೆ. ಆ ಸೌಲಭ್ಯಗಳನ್ನು ಪಡೆದುಕೊಂಡು ನೀವು ಒಳ್ಳೆಯ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಮೊಬೈಲ್, ಟಿವಿ ಎಂದು ಸಮಯ ವ್ಯರ್ಥ ಮಾಡದೇ ಓದಿದಾಗ ಮುಂದೆ ನೀವು ಸಹ ಒಳ್ಳೆಯ ಸ್ಥಾನಗಳನ್ನು ಅಲಂಕರಿಸಬಹುದು. ತಾವು ಮುಂದಿನ ದಿನಗಳಲ್ಲಿ ಒಳ್ಳೆಯ ಹುದ್ದೆಗಳನ್ನು ಅಲಂಕರಿಸಿ ತಮ್ಮ ಶಾಲೆ, ಊರಿನ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಪಸರಿಸುವಂತೆ ಮಾಡಬೇಕು ಎಂದರು.

ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ

ಡಾ.ಎಸ್.ಕೆ. ಶಿವಕುಮಾರ್ ಮೆಮೋರಿಯಲ್ ಟ್ರಸ್ಟ್‌ನ ಟ್ರಸ್ಟಿ ಶ್ರೀನಿವಾಸನ್ ಮಾತನಾಡಿ, ಇಂದು ದೇಶದ ಜನಸಂಖ್ಯೆ ಚೀನಾ ಜನಸಂಖ್ಯೆಯನ್ನು ಮೀರಿಸುತ್ತಿದೆ. ಆದರೆ ಯುವಜನತೆ ಹೆಚ್ಚಾಗಿರುವುದು ನಮ್ಮ ದೇಶದಲ್ಲೇ. ಆದ್ದರಿಂದ ತಾವುಗಳು ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಬೇಕು. ತಾವು ಸಹ ಮುಂದಿನ ದಿನಗಳಲ್ಲಿ ತಾವು ಓದಿದಂತಹ ಶಾಲೆಗೆ ಸಹಾಯ ಮಾಡಬೇಕು. ತಮಗೆ ಈಗ ಸಿಗುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಮಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಕಾರ್ಯದರ್ಶಿ ಶ್ರೀರಾಮಪ್ಪ ಸೇರಿದಂತೆ ಹಲವರು ಮಾತನಾಡಿದರು. ವರ್ಲಕೊಂಡ ಗ್ರಾ.ಪಂ. ಮಾಜಿ ಅಧ್ಯಕ್ಷೆ ಆನಂದಮ್ಮ, ಬಿ.ಆರ್.ಪಿ ರಾಘವೇಂದ್ರ, ಪತ್ರಕರ್ತರ ಸಂಘದ ಅಧ್ಯಕ್ಷ ಬಾಲಾಜಿ, ಶಾಲೆಯ ಹಳೆಯ ವಿದ್ಯಾರ್ಥಿ ಸುರೇಶ್, ಗ್ರಾಮಸ್ಥರಾದ ಚೆನ್ನರಾಯಪ್ಪ, ಚೆನ್ನಪ್ಪ ಸೇರಿದಂತೆ ಶಾಲೆಯ ಶಿಕ್ಷಕರು ಹಾಜರಿದ್ದರು.