ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಆವೆ ಮಣ್ಣಿನ ಹೊಂಡಕ್ಕೆ ಇನ್ನೇನೂ ಬೀಳುವುದು ಕೂದಲೆಳೆಯಿಂದ ತಪ್ಪಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿನ ಕೋಟ ಸಮೀಪದ ಉಪ್ಲಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಉಡುಪಿ: ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಕಾರೊಂದು ಆವೆ ಮಣ್ಣಿನ ಹೊಂಡಕ್ಕೆ ಇನ್ನೇನೂ ಬೀಳುವುದು ಕೂದಲೆಳೆಯಿಂದ ತಪ್ಪಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಇಲ್ಲಿನ ಕೋಟ ಸಮೀಪದ ಉಪ್ಲಾಡಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕೇರಳದ ಕುಟುಂಬವೊಂದು ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕಾಗಿ ಕಾರಲ್ಲಿ ತೆರಳುತ್ತಿದ್ದರು, ಚಾಲಕ ರಾಹೆ 66ರಲ್ಲಿ ಗೂಗಲ್ ಮ್ಯಾಪ್ ಅನುಸರಿಸಿ ಕಾರು ಚಲಾಯಿಸುತ್ತಿದ್ದ, ಬ್ರಹ್ಮಾವರ - ಬಾರ್ಕೂರು ಮಾರ್ಗವಾಗಿ ಸಾಹೇಬ್ರಕಟ್ಟೆಗೆ ಕಾರು ತಲುಪಿದಾಗ ಮ್ಯಾಪ್ ಕೋಟದತ್ತ ತಿರುಗುವಂತೆ ಸೂಚಿಸಿತು. ಅದರಂತೆ ಚಾಲಕ ಕೋಟ ದಾಟಿ ಮುಂದೆ ಬಂದಾಗ ಉಪ್ಲಾಡಿಯಲ್ಲಿ ಹಠಾತ್ ರಸ್ತೆ ಮುಗಿಯಿತು, ಗಡಿಬಿಡಿಯಲ್ಲಿ ಚಾಲಕನ ಕಾರನ್ನು ಪಕ್ಕಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿ ಮೊದಲು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಬದಿಯ ಸಿಮೆಂಟ್ ಕಟ್ಟೆ ಹತ್ತಿ ನಿಂತುಬಿಟ್ಟಿತು.

ಕೇವಲ 1 ಅಡಿ ಮುಂದೆ ಆವೆ ಮಣ್ಣು ತೆಗೆದ ಭಾರಿ ಆಳದ ಹೊಂಡವೊಂದಿತ್ತು, ಸೆಕುಂಡು ಅಂತರದಲ್ಲಿ ಕಾರು ನಿಂತು ಸಂಭಾವ್ಯ ಭಾರಿ ದುರಂತ ತಪ್ಪಿತು.ಕಾರಿನಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಕೋಟ ಪೊಲೀಸರು ಸ್ಥಳೀಯರ ಸಹಕಾರದಿಂದ ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.