ಸಾರಾಂಶ
ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಮೂರುಸಾವಿರ ಮಠದಿಂದ ನೀಡಲಾಗುವ ಡಾ.ಮೂ.ಜ.ಗಂ ಸಾಹಿತ್ಯ ಪ್ರಶಸ್ತಿ
ಹುಬ್ಬಳ್ಳಿ: ಇಲ್ಲಿನ ಮೂರುಸಾವಿರ ಮಠದ ಲಿಂಗೈಕ್ಯ ಡಾ. ಮೂಜಗಂ ಹೆಸರಿನಲ್ಲಿ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರನ್ನು ಗುರುತಿಸಿ ಮೂರುಸಾವಿರ ಮಠದಿಂದ ನೀಡಲಾಗುವ ಡಾ.ಮೂ.ಜ.ಗಂ ಸಾಹಿತ್ಯ ಪ್ರಶಸ್ತಿಗೆ ನಾಡೋಜ, ಜಾನಪದತಜ್ಞ ಗೋ.ರು.ಚನ್ನಬಸಪ್ಪ ಅವರನ್ನು ಆಯ್ಕೆಯಾಗಿದ್ದಾರೆ.
ಮೇ 26ರಂದು ಬೆಳಗ್ಗೆ 11ಕ್ಕೆ ನಡೆಯುವ ಮೂಜಗಂ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರೀ ಮಠದ ಪೀಠಾಧಿಪತಿ ಶ್ರೀ ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸುವರು. ಎರಡೆತ್ತಿನಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಶ್ರೀ ಅಭಿನವ ರೇವಣಶಿದ್ದೇಶ್ವರ ಮಹಾಸ್ವಾಮಿಗಳು ಸೇರಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಲಿದೆ.ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಶಂಕ್ರಣ್ಣ ಮುನವಳ್ಳಿ, ಸುನಿತಾ ಪ್ರಕಾಶ ಬುರಬುರೆ, ಮೋಹನ ಲಿಂಬಿಕಾಯಿ ಮತ್ತಿತರರು ಉಪಸ್ಥಿತರಿರುವರು.