ಸರ್ವಿಸ್‌ ರಸ್ತೆ ದುರಸ್ತಿಗೆ ಗೊಟಗೋಡಿ ಗ್ರಾಮಸ್ಥರ ಆಗ್ರಹ

| Published : Jun 14 2025, 12:21 AM IST / Updated: Jun 14 2025, 12:22 AM IST

ಸಾರಾಂಶ

ಗೊಟಗೋಡಿ ಗ್ರಾಮದಿಂದ ವಿವಿಧ ಕಡೆಗೆ ಕೃಷಿ ಕಾರ್ಯಕ್ಕೆ ತೆರಳಲು ಸಾಕಷ್ಟು ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

ಶಿಗ್ಗಾಂವಿ: ತಾಲೂಕಿನ ಗೊಟಗೋಡಿ ಗ್ರಾಮಕ್ಕೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ ಪ್ರಮುಖ ಸರ್ವಿಸ್ ರಸ್ತೆಯು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಹಾಗೂ ರೈತರು ಪರದಾಡುತ್ತಿದ್ದಾರೆ. ಕೂಡಲೇ ದುರಸ್ತಿ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಮುಖ ಪ್ರವಾಸಿ ತಾಣವಾಗಿರುವ ಗೊಟಗೋಡಿ ಗ್ರಾಮದ ಉತ್ಸವ ರಾಕ್ ಗಾರ್ಡನ್‌ಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ನಿತ್ಯವೂ ಸಾವಿರಾರು ಪ್ರವಾಸಿಗರು ಪ್ರಯಾಣ ಮಾಡುತ್ತಾರೆ. ದೂರದ ಸ್ಥಳದಿಂದ ಪ್ರವಾಸಿಗರು ಗ್ರಾಮಕ್ಕೆ ಬರುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ೪ರಿಂದ ಹುಬ್ಬಳ್ಳಿ- ಹಾವೇರಿ ಭಾಗದಿಂದ ಬರುವ ಸವಾರರಿಗೆ ಸರ್ವಿಸ್ ರಸ್ತೆಯಿಂದ ಬರಲು ಹೋಗಲು ಸಾಕಷ್ಟು ಪ್ರಮಾಣದಲ್ಲಿ ತೊಂದರೆಯಾಗುತ್ತಿದೆ. ಇದರಿಂದ ಹಲವು ಅಪಘಾತಗಳು ಸಂಭವಿಸುತ್ತಿವೆ.

ಗೊಟಗೊಡಿ ಗ್ರಾಮದಿಂದ ವಿವಿಧ ಕಡೆಗೆ ಕೃಷಿ ಕಾರ್ಯಕ್ಕೆ ತೆರಳಲು ಸಾಕಷ್ಟು ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಯಲ್ಲಪ್ಪ ಶಿಂದ್ಯೆ, ಮಾಜಿ ಸದಸ್ಯ ಸುರೇಶ ಮುಗುಳಿಕಟ್ಟಿ, ಹನುಮಂತಪ್ಪ ಮಾದರ, ದೇವರಾಜ ದೊಡ್ಡಮನಿ, ಈರಪ್ಪ ನೀರಲಗಿ, ಭೀಮಪ್ಪ ಹರಿಜನ, ಶಿವಾಜಪ್ಪ ಜೀವಾಜಿ ಸೇರಿದಂತೆ ಹಲವಾರು ರೈತರು ಗ್ರಾಮಸ್ಥರು ಆಗ್ರಹಿಸಿದ್ದಾರೆ.ಇಂದು ಜಿಲ್ಲಾ ಪೌರ ನೌಕರರ ಶಕ್ತಿ ಪ್ರದರ್ಶನ

ರಾಣಿಬೆನ್ನೂರು: ಕರ್ನಾಟಕ ರಾಜ್ಯ ಪೌರ ನೌಕರರ ಸಂಘ ವತಿಯಿಂದ ಜಿಲ್ಲಾ ಮಟ್ಟದ ಸ್ಥಳೀಯ ಸಂಸ್ಥೆಗಳ ಪೌರ ನೌಕರರ ಶಕ್ತಿ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭ ಜೂ. 14ರಂದು ಬೆಳಗ್ಗೆ 11 ಗಂಟೆಗೆ ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ.ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟಿಸುವರು. ರಾಜ್ಯ ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ ಅಧ್ಯಕ್ಷತೆ ವಹಿಸುವರು. ಪೌರ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಸ್. ಮಂಜುನಾಥ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಯೋಜನಾ ನಿರ್ದೇಶಕ ಎಸ್.ಎಸ್. ಮತ್ತಿಕಟ್ಟಿ, ತಹಸೀಲ್ದಾರ್ ಆರ್.ಎಚ್. ಭಾಗವಾನ, ಡಿವೈಎಸ್‌ಪಿ ಲೋಕೆಶ ಜೆ., ಪೌರಾಯುಕ್ತ ಫಕ್ಕೀರಪ್ಪ ಐ. ಇಂಗಳಗಿ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ಆರ್. ಶಂಕರ, ನಗರಸಭೆ ಅಧ್ಯಕ್ಷೆ ಚಂಪಕ ರಮೇಶ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೆಣ್ಣನವರ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸ್ಥಳೀಯ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.