ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ನಾಗರಿಕರಿಗೆ ಉತ್ತಮ ಸೌಲಭ್ಯ ಹಾಗೂ ಸರ್ಕಾರಿ ಯೋಜನೆಗಳ ಪ್ರಯೋಜನ ಸಿಗಬೇಕಾದರೆ ಆಡಳಿತದಲ್ಲಿ ಸುಧಾರಣೆ ಅತ್ಯಗತ್ಯ. ಇತ್ತೀಚೆಗೆ ಆಡಳಿತದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಇದನ್ನು ನಿವಾರಿಸಬೇಕಿದೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಎಲ್ಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜನತೆಗೆ ಉತ್ತಮ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣೆ ಪ್ರಕ್ರಿಯೆ ನಿರಂತರವಾಗಿರಬೇಕು. ತಾಂತ್ರಿಕ ಯುಗದಲ್ಲಿ ಪ್ರತಿಕ್ಷಣ ಅಮೂಲ್ಯ. ಈ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಹಾಕುತ್ತಿದ್ದು, ಸಾರ್ವಜನಿಕರ ಕೆಲಸಗಳನ್ನು ನಿಯಮಾನುಸಾರ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ಆಡಳಿತದಲ್ಲಿ ಪಾರದರ್ಶಕತೆ, ಸರಳತೆ ತರಲು ಅಗತ್ಯ ಸುಧಾರಣೆ ಕ್ರಮಗಳನ್ನು ತರಲು ಆಯೋಗ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಗ್ರಾಮಸೌಧಗಳು ಆಡಳಿತ ಕೇಂದ್ರವಾಗಬೇಕು:ಕಂದಾಯ ಇಲಾಖೆಯಲ್ಲಿ ಅಗತ್ಯವಿರುವ ಆಡಳಿತ ಸುಧಾರಣೆಗಳ ಕುರಿತು ವಿವರಿಸಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಗ್ರಾಪಂ ಕಟ್ಟಡಗಳನ್ನೇ ಗ್ರಾಮಸೌಧ ಎಂದು ಪರಿವರ್ತಿಸಿ ಪಂಚಾಯತಿ ವ್ಯಾಪ್ತಿಯ ಮೂರ್ನಾಲ್ಕು ಗ್ರಾಮಗಳ ಜನರಿಗೆ ಪ್ರತಿಯೊಂದು ಸೇವೆ ದೊರಕುವಂತೆ ಕ್ರಮ ಕೈಗೊಳ್ಳಬೇಕಿದೆ. ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಗ್ರಾಮಸೌಧದಲ್ಲೇ ಕುಳಿತು ಸಾರ್ವಜನಿಕರ ಕೆಲಸ ಮಾಡಿಕೊಡಲು ಅನುಕೂಲ ಕಲ್ಪಿಸಬಹುದು. ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಜಿಲ್ಲಾಧಿಕಾರಿ ಹಂತದವರೆಗೆ ಸಿಯುಜಿ ಮೊಬೈಲ್ ಸಂಖ್ಯೆ ನೀಡುವುದರಿಂದ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ಇಬ್ಬರು ಅಪರ ಡಿಸಿ ನೇಮಕಕ್ಕೆ ಸಲಹೆ:ಪೊಲೀಸ್ ಇಲಾಖೆಯಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಿಸಲಾಗಿದೆ. ಅದೇ ಮಾದರಿಯಲ್ಲಿ ಬೆಳಗಾವಿಯಂತಹ ದೊಡ್ಡ ಜಿಲ್ಲೆಗಳಿಗೆ ಇಬ್ಬರು ಅಪರ ಜಿಲ್ಲಾಧಿಕಾರಿಗಳನ್ನು ನೇಮಿಸುವುದರಿಂದ ಆಡಳಿತದಲ್ಲಿ ಇನ್ನಷ್ಟು ಸುಧಾರಣೆ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.
ಸಿಂಧುತ್ವ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅರ್ಜಿಯು ಜಿಲ್ಲಾಧಿಕಾರಿ ಲಾಗಿನ್ನಲ್ಲಿ ಪೆಂಡಿಂಗ್ ತೋರಿಸುತ್ತದೆ. ಆದ್ದರಿಂದ ಆಯಾ ಹಂತದ ಅಧಿಕಾರಿಗಳ ಬಳಿ ಪೆಂಡಿಂಗ್ ಇರುವ ಬಗ್ಗೆ ತೋರಿಸುವಂತಾಗಬೇಕು. ಪೊಲೀಸ್ ಠಾಣೆಗಳಲ್ಲಿ ದೂರು ಸ್ವೀಕರಿಸಲು ನಿರಾಕರಣೆ ಅಥವಾ ವಿಳಂಬ ಮಾಡುವ ಬಗ್ಗೆ ವ್ಯಾಪಕ ದೂರುಗಳಿವೆ. ಹೀಗಾಗಿ, ಆನ್ಲೈನ್ ದೂರು ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಡಿಸಿ ಅಭಿಪ್ರಾಯಪಟ್ಟರು.ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಗ್ರಾಪಂ ಮಟ್ಟದಲ್ಲಿನ ಅಕ್ರಮಗಳ ಪರಿಶೀಲನೆಗೆ ನರೇಗಾ ಓಂಬುಡ್ಸಮನ್ ಮಾದರಿಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ವಿಚಕ್ಷಣಾ ವ್ಯವಸ್ಥೆ ಅಗತ್ಯವಿದೆ. ಗಾಯರಾಣ ಜಮೀನಿನಲ್ಲಿನ ಮನೆಗಳ ಮಾಲೀಕತ್ವದ ಸಮಸ್ಯೆಯನ್ನು ಒಂದು ಬಾರಿ ಪರಿಹರಿಸುವ ಮೂಲಕ ಅನೇಕ ಗೊಂದಲಗಳಿಗೆ ತೆರೆ ಎಳೆಯಬಹುದು ಎಂದರು.
ಸಿಬ್ಬಂದಿ ಕೊರತೆ ನೀಗಿಸಲು ಸಲಹೆ:ಬೆಳಗಾವಿ ಜಿಲ್ಲೆಯಲ್ಲಿ ನಾಗರಿಕರು ಮತ್ತು ಪೊಲೀಸರ ನಡುವಿನ ಅನುಪಾತ ತೀರ ಕಡಿಮೆ ಇದೆ. ಪ್ರತಿ ಲಕ್ಷ ಜನರಿಗೆ ಕೇವಲ 52 ಜನ ಪೊಲೀಸರಿದ್ದಾರೆ. ಆದ್ದರಿಂದ ಕನಿಷ್ಠ ಸರ್ಕಾರ ನಿಗದಿಪಡಿಸಿದ ಅನುಪಾತದಂತೆ ಸಿಬ್ಬಂದಿ ನೇಮಿಸುವುದು ಸೂಕ್ತ ಎಂದು ಎಸ್ಪಿ ಡಾ.ಭೀಮಾಶಂಕರ ಗುಳೇದ ಸಲಹೆ ನೀಡಿದರು.
ಹಾರನಹಳ್ಳಿ ರಾಮಸ್ವಾಮಿ ಆಯೋಗದ ವರದಿಯಲ್ಲಿರುವ 256 ಅಂಶಗಳನ್ನು ಜಾರಿಗೆ ತರಲಾಗಿದೆ. ಅದೇ ರೀತಿ ನಿವೃತ್ತ ಅಧಿಕಾರಿ ವಿಜಯಭಾಸ್ಕರ್ ಅವರ ಅಧ್ಯಕ್ಷತೆಯ ಸುಧಾರಣಾ ಆಯೋಗವು 7 ವರದಿ ನೀಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಡಳಿತ ಸುಧಾರಣೆ ಆಯೋಗದ ಸಲಹೆಗಾರ ಪ್ರಸನ್ನ ಕುಮಾರ್ ಸಭೆಯಲ್ಲಿ ತಿಳಿಸಿದರು.ಸರ್ಕಾರಿ ಸೌಲಭ್ಯವನ್ನು ಸುಲಭವಾಗಿ ಒದಗಿಸಲು ಅರ್ಜಿ ನಮೂನೆಗಳನ್ನು ಸರಳ ಮಾಡಬೇಕಿದೆ. ಅತಿಯಾದ ದಾಖಲೆಗಳನ್ನು ಕೇಳಿದಾಗ ಅವುಗಳನ್ನು ಹೊಂದಿಸಲು ಸಾರ್ವಜನಿಕರು ಪರದಾಡಬೇಕಾಗುತ್ತದೆ. ತಂತ್ರಜ್ಞಾನ ಬಳಕೆಯಿಂದ ಆಡಳಿತ ಸುಧಾರಣೆ ಸಾಧ್ಯವಾಗಿದ್ದು, ಇ-ಆಫೀಸ್ ವ್ಯವಸ್ಥೆಯನ್ನು ಕೆಳಹಂತದವರೆಗೆ ವಿಸ್ತರಿಸಬೇಕು ಎಂದು ತಿಳಿಸಿದರು.
ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ, ಮೇಯರ್ ಸವಿತಾ ಕಾಂಬಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.