ಸಾರಾಂಶ
ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೂ ಆದ್ಯತೆ ನೀಡಲಾಗಿದೆ. ಈಗಾಗಲೇ ಜನತಾ ದರ್ಶನ ನಡೆಸಿ ಜನರ ಅಹವಾಲುಗಳನ್ನು ಆಲಿಸಲಾಗುತ್ತಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ಹೊಸಪೇಟೆ: ತಾಂಡಾಗಳು ಸೇರಿದಂತೆ ಹಳ್ಳಿಗಳ ಉದ್ಧಾರಕ್ಕಾಗಿ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಈಗಾಗಲೇ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದ್ದು, ಈಗ ಅಭಿವೃದ್ಧಿ ಕಾಮಗಾರಿಗಳಿಗೂ ಆದ್ಯತೆ ನೀಡಲಾಗಿದೆ ಎಂದು ಶಾಸಕ ಎಚ್.ಆರ್. ಗವಿಯಪ್ಪ ತಿಳಿಸಿದರು.
ಸೀತಾರಾಮ ತಾಂಡಾದಲ್ಲಿ ಜಿಪಂ ಗ್ರಾಮೀಣ ಕುಡಿಯುವ ನೀರು ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ₹1.17 ಕೋಟಿಯ, 371 ಮನೆಗಳಿಗೆ ಪೈಪ್ಲೈನ್ ವ್ಯವಸ್ಥೆಯಡಿ ನೀರು ಒದಗಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ 20 ವರ್ಷಗಳ ಪೈಪ್ಲೈನ್ ಇದ್ದು, ಇವುಗಳನ್ನು ತೆರವುಗೊಳಿಸಿ ಶುದ್ಧ ಕುಡಿಯುವ ನೀರು ಒದಗಿಸಲು ಹೊಸ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇನ್ನೂ ಎಂಟು ಕೋಟಿ ರು. ವೆಚ್ಚದಲ್ಲಿ ನಲ್ಲಾಪುರ, ಚಿನ್ನಾಪುರ, ಎನ್.ಆರ್. ಕ್ಯಾಂಪ್, ಸೀತಾರಾಮ ತಾಂಡಾಗಳಿಗೆ ನದಿ ಮೂಲಕ ನೀರು ಒದಗಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಈಗಾಗಲೇ ಸರ್ಕಾರ ಮಟ್ಟದಲ್ಲಿ ಚರ್ಚೆ ನಡೆದಿದೆ. ಈ ಕಾಮಗಾರಿ ಮೂಲಕ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ನದಿ ನೀರು ಒದಗಿಸಲಾಗುವುದು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗೂ ಆದ್ಯತೆ ನೀಡಲಾಗಿದೆ. ಈಗಾಗಲೇ ಜನತಾ ದರ್ಶನ ನಡೆಸಿ ಜನರ ಅಹವಾಲುಗಳನ್ನು ಆಲಿಸಲಾಗುತ್ತಿದೆ ಎಂದರು.ಸೀತಾರಾಮ ತಾಂಡಾದಲ್ಲಿ ₹6 ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು.
ಮುಖಂಡರಾದ ರಾಮಾ ನಾಯ್ಕ, ಗೋವಿಂದಪ್ಪ, ಗಣೇಶ್ ನಾಯ್ಕ, ಎಲ್. ಸಂತೋಷ್, ಗೋಪಾಲಕೃಷ್ಣ, ಮುತ್ತೇಶ್ ನಾಯ್ಕ, ಪರಶುರಾಮ ನಾಯ್ಕ, ಭದ್ರಾ ನಾಯ್ಕ, ಮಂಜುನಾಯ್ಕ, ಬಾಲಾಜಿ ನಾಯ್ಕ, ಕೃಷ್ಣ ನಾಯ್ಕ, ಶಿವ ನಾಯ್ಕ, ಮಲ್ಲಪ್ಪ, ನಾಗರಾಜ ನಾಯ್ಕ, ಲಕ್ಷ್ಮಣ ನಾಯ್ಕ, ಹನುಮಂತ ನಾಯ್ಕ, ತಿಪ್ಪೇಶ್, ಸಂಜೀವಕುಮಾರ ಮತ್ತಿತರರಿದ್ದರು.