ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯಗಳ ಮಾಹಿತಿ ಅಗತ್ಯ: ಡಾ. ಗೋಪಾಲಕೃಷ್ಣ

| Published : Jul 11 2024, 01:42 AM IST / Updated: Jul 11 2024, 12:30 PM IST

ಸರ್ಕಾರಿ ನೌಕರರಿಗೆ ವಿಮಾ ಸೌಲಭ್ಯಗಳ ಮಾಹಿತಿ ಅಗತ್ಯ: ಡಾ. ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಸಂಭವಿಸಬಹುದಾಗ ಆಪತ್ತುಗಳ ತಡೆಗೆ ವಿಮಾ ಯೋಜನೆಗಳ ಸೌಲಭ್ಯದ ಜೊತೆಗೆ ಆರೋಗ್ಯ ಕುರಿತಂತೆ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು.

 ಚಿಕ್ಕಮಗಳೂರು :  ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಸಂಭವಿಸಬಹುದಾಗ ಆಪತ್ತುಗಳ ತಡೆಗೆ ವಿಮಾ ಯೋಜನೆಗಳ ಸೌಲಭ್ಯದ ಜೊತೆಗೆ ಆರೋಗ್ಯ ಕುರಿತಂತೆ ಅಗತ್ಯ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಹೊರ ಸಂಪನ್ಮೂಲ ಸಿಬ್ಬಂದಿ ಕುಂದು ಕೊರತೆ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಜೀವನ್ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಅಂಚೆ ಇಲಾಖೆ ವಿಮಾ ಯೋಜನೆ, ಪಿಎಫ್, ಇಎಸ್‌ಐ ಸೌಲಭ್ಯವನ್ನು ನೌಕರರು ಪಡೆಯುವ ಜತೆಗೆ ಕುಟುಂಬದ ಸದಸ್ಯರು ಸಹ ಇವುಗಳ ಅನುಕೂಲ ಪಡೆಯಬೇಕು ಎಂದು ಸಲಹೆ ನೀಡಿದರು.

ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರು ಸಂಭವಿಸುವ ವಿಪತ್ತುಗಳಿಗೆ ಹಾಗೂ ಜೀವ ಹಾನಿಗೆ ಈ ವಿಮಾ ಸೌಲಭ್ಯ ಸಹಕಾರಿ ಯಾಗಲಿದ್ದು, ಕುಟುಂಬದ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಸಕಾಲದಲ್ಲಿ ದೊರೆಯಲಿದೆ ಎಂದು ಹೇಳಿದರು.

ನೌಕರರೊಬ್ಬರು ಹಿಂದೆ ಸೇವೆ ಸಲ್ಲಿಸಿದ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಮೃತರಾದರು. ಆ ಸಂದರ್ಭದಲ್ಲಿ ವಿಮಾ ಸೌಲಭ್ಯ ಇದ್ದರೆ ಅವರ ಕುಟುಂಬಕ್ಕೆಆರ್ಥಿಕ ನೆರವು ಸಿಗುತ್ತಿತ್ತು ಎಂದು ಸ್ಮರಿಸಿದ ಅವರು, ವಿಮಾ ಸೌಲಭ್ಯದ ಅವಶ್ಯಕತೆ ಬಹಳಷ್ಟು ಇರುತ್ತದೆ. ಎಲ್ಲಾ ಮಧ್ಯಮ ವರ್ಗದವರು ಈ ವಿಮಾ ಸೌಲಭ್ಯ ಮಾಡಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಎಂದು ಸಲಹೆ ನೀಡಿದರು.

ಆರೋಗ್ಯ ಕಾರ್ಡ್ ಸೌಲಭ್ಯವನ್ನು ಪ್ರತಿಯೊಬ್ಬ ನೌಕರ ಪಡೆದಿರಬೇಕು. ಬಡತನದಿಂದ ಬಂದವರು ಅನಾರೋಗ್ಯದಿಂದ ಆಸ್ಪತ್ರೆ ಬಿಲ್ ಲಕ್ಷಗಟ್ಟಲೆ ಬಂದರೆ ಪಾವತಿಸುವ ಕುರಿತು ಚಿಂತಿಸಬೇಕಾಗುತ್ತದೆ. ಜೊತೆಗೆ ಹೊರೆಯೂ ಆಗುತ್ತದೆ. ಆದ್ದರಿಂದ ಆರೋಗ್ಯ ಕಾರ್ಡ್‌ ಯೋಜನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವುದು ಸೂಕ್ತ ಎಂದರು.

ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರೆ ಸುಮಾರು 5 ಲಕ್ಷ ರು.ಗಳವರೆಗೆ ವಿಮಾ ಸೌಲಭ್ಯ ಪಡೆಯಲು ಅವಕಾಶವಿದೆ. ಇಲ್ಲಿ ತಿಳಿಸುವ ಮಾಹಿತಿಗಳನ್ನು ಅರ್ಥ ಮಾಡಿಕೊಂಡು ವಿಮಾ ಸೌಲಭ್ಯ ವ್ಯಾಪ್ತಿಗೆ ಬರಬೇಕು. ಇದರಿಂದ ಯಾರೂ ವಂಚಿತರಾಗಬಾರದು ಎಂದು ಕರೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್ ಮಾತನಾಡಿ, ಡೆಂಘೀ ನಿಯಂತ್ರಣ ಮಾಡುವ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಮಗ್ರ ಮಾಹಿತಿ ನೀಡಲಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಸಭೆಗೆ ಆಗಮಿಸಿರುವ ವಿವಿಧ ಇಲಾಖೆ ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಪರಿಚಯಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ, ಲೀಡ್ ಬ್ಯಾಂಕ್‌ ಅಧಿಕಾರಿ ರಾಜೇಶ್, ಭವಿಷ್ಯ ನಿಧಿ ಇಲಾಖೆ ಜಾರಿ ಅಧಿಕಾರಿ ಮಧುರಾನಾಥ್, ಇಎಸ್‌ಐ ಮ್ಯಾನೇಜರ್ ರೇಣುಕಾ, ಅಂಚೆ ಇಲಾಖೆ ಸಹಾಯಕ ವ್ಯವಸ್ಥಾಪಕ ಲೋಕೇಶ್ ಉಪಸ್ಥಿತರಿದ್ದರು.