ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಸರ್ಕಾರ 75 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ತಿಳಿಸಿದರು.ತಾಲೂಕಿನ ಕೆಲವು ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಅಲೆಮಾರಿ ಸಮುದಾಯದ ಜನರ ಸ್ಥಿತಿಗತಿ ಕುರಿತು ಖುದ್ದಾಗಿ ಆಯಾ ಗ್ರಾಮಗಳಿಗೆ ಭೇಟಿ ನೀಡಲು ಆಗಮಿಸಿದ್ದ ಸಂದರ್ಭದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಸತಿ ಮತ್ತು ನಿವೇಶನ ರಹಿತ ಅಲೆಮಾರಿಸಮುದಾಯದವರಿಗೆ ಸವಲತ್ತುಗಳನ್ನು ಒದಗಿಸಿಕೊಡಲು ವಿಶೇಷವಾಗಿ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ ಎಂದರು.
ತಾಲೂಕಿನ ಅಗ್ರಹಾರ ಗೇಟ್ ಬಳಿ ಅಲೆಮಾರಿ ಸಮುದಾಯದವರು ವಾಸ ಮಾಡುತ್ತಿದ್ದು, ಅವರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಸಂಬಂಧಪಟ್ಟವರು ಕಾಳಜಿ ವಹಿಸದ ಪರಿಣಾಮ ಇಂದಿಗೂ ಸಹ ಕೆಟ್ಟ ಪರಿಸ್ಥಿತಿಯಲ್ಲಿ ಅವರು ಬದುಕು ಹೀನಾಯವಾಗಿ ಸಾಗುತ್ತಿದೆ ಎಂದು ಸುದ್ದಿಗಾರರು ಅಧ್ಯಕ್ಷರ ಗಮನವನ್ನು ಸೆಳೆದರು.ರಾಜ್ಯಾಧ್ಯಕ್ಷರ ಸಭೆಯಲ್ಲಿ ಉಪಸ್ಥಿತರಿದ್ದ ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ತಾ.ಪಂ. ಇಒ ಮುನಿರಾಜು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಉದ್ದೇಶಿಸಿ ಅಧ್ಯಕ್ಷೆ ಜಿ.ಪಲ್ಲವಿ ಅವರು ಬುಧವಾರ ಬೆಳಗ್ಗೆ ಆ ಗ್ರಾಮಕ್ಕೆ ತೆರಳಲಿದ್ದು, ಆ ಗ್ರಾಮ ಸಂಪೂರ್ಣ ಶುಚಿತ್ವದಿಂದ ಕೂಡಿರಬೇಕು. ಸ್ವಚ್ಛಗೊಳಿಸುವ ವಿಷಯದಲ್ಲಿ ಇಂದೇ ಕಾರ್ಯ ನಿರ್ವಹಿಸಬೇಕೆಂದು ತಾಲೂಕು ಪಂಚಾಯಿತಿ ಇ.ಒಗೆ ಸೂಚಿಸಿದರು. ತಾಲೂಕು ಕಚೇರಿ ಸಿಬ್ಬಂದಿ ಸತೀಶ್ ಸಾವನ್ನಪ್ಪಿದ್ದು ತಾಲೂಕು ಕಚೇರಿಯ ಮುಂಭಾಗದಲ್ಲಿ ಇರಿಸಿದ್ದ ಮೃತದೇಹದ ಬಳಿ ತೆರಳಿ ಸಂತಾಪ ಸೂಚಿಸಿದ ಅಧ್ಯಕ್ಷರು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಪ್ರವಾಸಿ ಮಂದಿರದಲ್ಲಿ ಅಧ್ಯಕ್ಷೆ ಅವರನ್ನು ಸನ್ಮಾನಿಸಿದರು.