ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ: ಸಚಿವ ಕೃಷ್ಣಭೈರೇಗೌಡ

| Published : Nov 12 2025, 03:00 AM IST

ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಿದೆ: ಸಚಿವ ಕೃಷ್ಣಭೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಿ ಅಂಡ್‌ ಡಿ ಪ್ರಕರಣದಲ್ಲಿ ರೈತರ ವಿರುದ್ಧ ರಾಜ್ಯ ಹೈಕೋರ್ಟ್‌ ಆದೇಶ ನೀಡಿದ್ದು ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ರೈತರ ಪರವಾಗಿ ಅರ್ಜಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ ಜಿಲ್ಲೆಯ ಜಮೀನಿನ ಪೋಡಿ ದುರಸ್ತಿ ಪ್ರಕರಣಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ರೈತರ ಪರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮುಂದಾಗಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರದ ಮಾದಾಪಟ್ಟಣ ಗ್ರಾಮದ ಬಳಿ ನೂತನ ತಾಲೂಕು ಕಚೇರಿಯ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಿ ಅಂಡ್ ಡಿ ಲ್ಯಾಂಡ್ ಪ್ರಕರಣದಲ್ಲಿ ರೈತರ ವಿರುದ್ಧ ರಾಜ್ಯ ಹೈಕೋರ್ಟ್ ಆದೇಶ ನೀಡಿದ್ದು ಈ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ರೈತರ ಪರವಾಗಿ ಅರ್ಜಿ ಸಲ್ಲಿಸಿದೆ ಎಂದು ಸ್ಪಷ್ಟಪಡಿಸಿದರು.ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ , ರಾಜ್ಯದ 49 ನೂತನ ತಾಲೂಕುಗಳಿಗೆ ಪ್ರಜಾಸೌಧ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದೆ. ಪ್ರತಿ ತಾಲೂಕುಗಳಲ್ಲಿ 8.60 ಕೋಟಿ ರು. ಗಳ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಒಂದೇ ಕಟ್ಟಡದಲ್ಲಿ ಅಗತ್ಯವಿರುವ ಎಲ್ಲಾ ಸಾರ್ವಜನಿಕ ಕಚೇರಿಗಳಿಗೂ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕುಶಾಲನಗರದಲ್ಲಿ ಸುಮಾರು 3.5 ಎಕರೆ ಪ್ರದೇಶದಲ್ಲಿ ಎರಡು ಮಹಡಿಯ ಕಟ್ಟಡ ನಿರ್ಮಾಣವಾಗಲಿದೆ. ತಕ್ಷಣ ಕಾಮಗಾರಿ ಆರಂಭಗೊಂಡು ಮಳೆಗಾಲಕ್ಕೆ ಮುನ್ನ ಬಹುತೇಕ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ತಿಳಿಸಿದರು. ಪ್ರಾಮಾಣಿಕ ಪ್ರಯತ್ನ:

1964ರ ನಂತರದಿಂದ ಬಗೆಹರಿಯದ ಸಿ ಅಂಡ್ ಡಿ ಭೂಮಿ ಸಮಸ್ಯೆ ಬಗ್ಗೆ ಸರ್ಕಾರ ಸುಪ್ರೀಂ ಕೋರ್ಟ್ ಮೂಲಕ ಕಾನೂನಾತ್ಮಕ ಹೋರಾಟ ನಡೆಸಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಕ್ರಮ ವಹಿಸಲಾಗಿದೆ ಎಂದು ಹೇಳಿದ ಸಚಿವರು 2021 ರಲ್ಲಿ ಅರಣ್ಯ ಇಲಾಖೆ 12,000 ಹೆಕ್ಟೇರ್ ಪ್ರದೇಶವನ್ನು ರೈತರಿಂದ ತೆರವುಗೊಳಿಸಿ ವಶಕ್ಕೆ ಪಡೆಯುವ ಬಗ್ಗೆ ಈಗಾಗಲೇ ರಾಜ್ಯ ಉಚ್ಚ ನ್ಯಾಯಾಲಯದಿಂದ ಆದೇಶ ಪ್ರಕಟಗೊಂಡಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಆದೇಶದ ವಿರುದ್ಧ ರೈತರ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ. ಈ ನಡುವೆ ಕೊಡಗು ಜಿಲ್ಲೆಯ ಇಬ್ಬರು ಶಾಸಕರುಗಳ ಜೊತೆಗೆ ಚರ್ಚಿಸಲಾಗಿ ತಜ್ಞರ ಸಮಿತಿ ಒಂದನ್ನು ನೇಮಕ ಮಾಡಲಾಗಿದೆ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಿದ್ದು ಪ್ರಸಕ್ತ ಇರುವ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.ಈ ನಡುವೆ ರೈತರಿಗೆ ಎರಡು ತಿಂಗಳ ಹೆಚ್ಚುವರಿ ಅವಧಿ ನೀಡಿ ಪರೋಕ್ಷ ಅವಕಾಶ ಕಲ್ಪಿಸಲಾಗಿದೆ.ಸರಳೀಕರಣ ವ್ಯವಸ್ಥೆ:

ಕಂದಾಯ ಇಲಾಖೆ ಮೂಲಕ ವಿವಿಧ ದಾಖಲೆಗಳ ಸರಳೀಕರಣ ವ್ಯವಸ್ಥೆ ಮಾಡಲಾಗಿದೆ. ಪೌತಿ ಖಾತೆಗಳನ್ನು ಈ -ಪೌತಿ ಆಂದೋಲನ ಮೂಲಕ ಕಂದಾಯ ಇಲಾಖೆ ಸಮಸ್ಯೆಗೆ ಪರಿಹಾರ ಹುಡುಕುತ್ತಿದೆ ಎಂದು ಸಚಿವರು ಹೇಳಿದರು.ಅತಂತ್ರ ದಾಖಲೆಗಳ ಲಭ್ಯತೆಗೆ ಸರ್ಕಾರ ಈಗಾಗಲೇ ಚಿಂತನೆ ಹರಿಸಿದ್ದು ದಾಖಲೆಗಳ ರಕ್ಷಣೆ ಮಾಡುವ ಮೂಲಕ ಪ್ರಸಕ್ತ 50 ಕೋಟಿ ಪುಟಗಳ ದಾಖಲೆ ಸ್ಕ್ಯಾನ್ ಮಾಡಲಾಗಿದೆ. ಇನ್ನುಳಿದಂತೆ ಉಳಿದ ದಾಖಲೆಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣ ಗೊಳಿಸಲಾಗುವುದು ಎಂದರು.ತಕ್ಷಣ ವಿಲೇವಾರಿ:

ಭೂ ಸುರಕ್ಷಾ ಯೋಜನೆ ಅಡಿಯಲ್ಲಿ ಕಡತಗಳ ರಕ್ಷಣೆ ಮಾಡುವ ಕೆಲಸ ನಡೆಯಲಿದೆ. ಮುಂದಿನ ದಿನಗಳಲ್ಲಿ ಕಡತಗಳನ್ನು ತಕ್ಷಣ ವಿಲೇವಾರಿ ಮಾಡುವ ಯೋಜನೆ ಸರ್ಕಾರ ಹಮ್ಮಿಕೊಂಡಿದೆ ಎಂದರು. ಹಿಂದಿನ ಸರ್ಕಾರದ ವೈಫಲ್ಯಗಳನ್ನು ಇತ್ಯರ್ಥ ಮಾಡುವ ಕೆಲಸ ಸಾಗುತ್ತಿದೆ ಎಂದ ಕೃಷ್ಣಭೈರೇಗೌಡ ಪ್ರಸಕ್ತ ಸುಧಾರಣೆ ಕಾಣುತ್ತಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಭೂ ಸುರಕ್ಷತಾ ಯೋಜನೆ ಅಡಿಯಲ್ಲಿ ನಾಲ್ಕು ತಾಲೂಕುಗಳಲ್ಲಿ ಎಲ್ಲಾ ರೀತಿಯ ಕೆಲಸಗಳು ಪೂರ್ಣಗೊಂಡಿವೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲಾವಕಾಶ ಅಗತ್ಯವಿದೆ ಎಂದರು. ಸಿ ಅಂಡ್ ಡಿ ಭೂಮಿಯ ಸಮಸ್ಯೆಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರ ಹುಡುಕಲಾಗುತ್ತಿದೆ. ಸುಮಾರು ಒಂದು ಲಕ್ಷ ಪೋಡಿ ದುರಸ್ತಿ ಪ್ರಕರಣಗಳು ಬಾಕಿ ಇದ್ದು ಅವುಗಳ ಗೊಂದಲಕ್ಕೆ ಕಾನೂನಾತ್ಮಕ ಪರಿಹಾರ ಹುಡುಕಲಾಗುತ್ತದೆ ಎಂದರು.

ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ರಾಜ್ಯ ಉನ್ನತ ಶಿಕ್ಷಣ ಸಚಿವರ ಮೂಲಕ ಕೋಟಿಗಟ್ಟಲೆ ಮೌಲ್ಯದ ಜಾಗ ಕಂದಾಯ ಇಲಾಖೆಗೆ ಉಚಿತವಾಗಿ ದೊರಕಿದ್ದು ಈ ಮೂಲಕ ಕುಶಾಲನಗರ ತಾಲೂಕಿಗೆ ಪ್ರಜಾಸೌಧ ನಿರ್ಮಾಣ ಮಾಡಲು ಅವಕಾಶ ದೊರೆತಿದೆ. ಕ್ಷೇತ್ರದ ಜನತೆಯ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಮಂತರ್ ಗೌಡ ಕುಶಾಲನಗರ ನೂತನ ತಾಲೂಕಿಗೆ ಈಗಾಗಲೇ ಹೈಟೆಕ್ ಆಸ್ಪತ್ರೆ, ರಸ್ತೆ ಸಾರಿಗೆ ಡಿಪೋ ಮತ್ತಿತರ ಯೋಜನೆಗಳು ಲಭ್ಯವಾಗಿದ್ದು ಇದೀಗ ಪ್ರಜಾ ಸೌಧಕ್ಕೆ ಕಂದಾಯ ಸಚಿವರಿಂದ ಎಲ್ಲ ರೀತಿಯ ಸಹಕಾರ ದೊರೆತಿದೆ ಎಂದರು. ಜಿಲ್ಲೆಯಲ್ಲಿ ಇರುವ ಕಂದಾಯ ಇಲಾಖೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರಕಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸರಕಾರಿ ಸೌಲಭ್ಯಗಳು ಕಟ್ಟಕಡೆಯ ಪ್ರಜೆಗೆ ತಲುಪುವ ಕೆಲಸ ಆಗಬೇಕಾಗಿದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯತತ್ಪರರಾಗಬೇಕಾಗಿದೆ ಎಂದರು. ಸರ್ಕಾರಿ ಕೆಲಸದಲ್ಲಿ ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ ನೇರವಾಗಿ ಸಾರ್ವಜನಿಕರ ಸಂಪರ್ಕ ಹೊಂದುವ ನಿಟ್ಟಿನಲ್ಲಿ ಪ್ರಜಾಸೌಧ ಕಾರ್ಯ ನಿರ್ವಹಿಸಲಿದೆ ಎಂದರು. 11 ತಿಂಗಳ ಅವಧಿಯಲ್ಲಿ ನೂತನ ಕಟ್ಟಡ ನಿರ್ಮಾಣ ಗೊಳ್ಳಲಿದೆ. ಒಂದೇ ಕಟ್ಟಡದಲ್ಲಿ 14 ಇಲಾಖೆಗಳು ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು. ಕುಶಾಲನಗರ ತಾಲೂಕು ಹೋರಾಟ ಕಾರ್ಯಕ್ರಮ ಸ್ವರೂಪದ ಬಗ್ಗೆ ವಕೀಲರ ಸಂಘದ ಅಧ್ಯಕ್ಷರಾದ ಆರ್ ಕೆ ನಾಗೇಂದ್ರ ಬಾಬು ಮಾಹಿತಿ ನೀಡಿದರು. ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ ಪಿ ಶಶಿಧರ್ ಆಶಯ ನುಡಿಗಳನ್ನಾಡಿ ತಾಲೂಕು ಹೋರಾಟದ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ ರಾಜ ಅಪರ ಜಿಲ್ಲಾಧಿಕಾರಿ ಆರ್ ಐಶ್ವರ್ಯ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಸೀಲ್ದಾರ್ ಕಿರಣ್ ಜಿ ಗೌರಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ ಪಿ ಚಂದ್ರಕಲಾ, ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರು.