ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಾಶಿವರಾತ್ರಿ ಸಂಬಂಧ ದೇಗುಲಗಳಲ್ಲಿ ರುದ್ರಹೋಮ, ರುದ್ರಾಭಿಷೇಕದ ವಿಶೇಷ ಪೂಜೆ ಮಾಡುವಂತೆ ಇದೇ ಮೊದಲ ಬಾರಿಗೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಜೊತೆಗೆ ರಾಜ್ಯದಲ್ಲಿ ನಶಿಸುತ್ತಿರುವ ಸ್ಥಳೀಯ ಜನಪದ ಕಲೆಗಳನ್ನು ಶುಕ್ರವಾರ ದೇವಸ್ಥಾನಗಳಲ್ಲಿ ಪ್ರದರ್ಶಿಸುವಂತೆ ತಿಳಿಸಿದೆ.
ರಾಜ್ಯದಲ್ಲಿ ಶಾಂತಿ ಸಂಯಮದೊಂದಿಗೆ ಜನತೆಯಲ್ಲಿ ವಿಶ್ವಾಸ, ಸ್ನೇಹ ಉಂಟಾಗುವ ಹಿನ್ನೆಲೆಯಲ್ಲಿ ಲೋಕ ಕಲ್ಯಾಣಾರ್ಥ ಶಿವನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು.
ಪ್ರಾಂತೀಯ ಕಲೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಹಾಗೂ ಹಬ್ಬಗಳ ಪುನರುಜ್ಜೀನವನಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇಲಾಖೆ ವ್ಯಾಪ್ತಿಯಲ್ಲಿನ ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗೆ ತೊಂದರೆ ಆಗದಂತೆ ಶಿವರಾತ್ರಿ ಹಬ್ಬದ ಪ್ರಯುಕ್ತ ರುದ್ರಹೋಮ, ರುದ್ರಾಭಿಷೇಕ ವಿಶೇಷ ಪೂಜೆ ಕೈಗೊಳ್ಳಬೇಕು.
ಜೊತೆಗೆ ಮರೆಯಾಗುತ್ತಿರುವ ಕಲೆಗಳಾದ ಗೊಂಬೆಯಾಟ, ಭರತನಾಟ್ಯ, ಭಕ್ತಿಗೀತೆ, ಸಾಂಪ್ರದಾಯಿಕ ಜನಪದ ಗೀತೆ ನಡೆಸಬೇಕು. ಕೋಲಾಟ, ಯಕ್ಷಗಾನ, ವೀರಭದ್ರ ಕುಣಿತ, ಡೊಳ್ಳು ಕುಣಿತ, ದೇಸಿಯ ವಾದ್ಯ ಪ್ರದರ್ಶನ ನಡೆಸಬೇಕು. ಶಿವ ಸಂಬಂಧಿ ಕಿರುನಾಟಕ ದಕ್ಷಯಜ್ಞ, ಶನಿಮಹಾತ್ಮೆ ಶಿವಪುರಾಣ ಆಯೋಜಿಸಬಹುದು.
ಈ ಕಲಾವಿದರು ಸಿಗದಿದ್ದರೆ ಸ್ಥಳೀಯ ಪ್ರಾಂತ್ಯಗಳಲ್ಲಿ ಮರೆಯಾಗುತ್ತಿರುವ ಯಾವುದಾದರೂ ಒಂದು ಕಲೆಯ ಕಾರ್ಯಕ್ರಮ ನಡೆಸಬೇಕು.
ಈ ಮೂಲಕ ಜನಪದ ಕಲೆಗಳನ್ನು ಉಳಿಸುವ ಕೆಲಸವಾಗಬೇಕು. ಇದರ ವೆಚ್ಚವನ್ನು ದೇವಾಲಯದ ನಿಧಿಯಿಂದ ಭರಿಸಬೇಕು ಎಂದು ದತ್ತಿ ಇಲಾಖೆ ಆದೇಶದಲ್ಲಿ ತಿಳಿಸಿದೆ.