ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು ಸಾರ್ವಜನಿಕ ಶಿಕ್ಷಣ ಇಲಾಖೆ ತಾಲೂಕಿನ ವಿಶೇಷ ಚೇತನ ಮಕ್ಕಳಿಗಾಗಿ ಸ್ಥಾಪಿಸಿರುವ ಸರ್ಕಾರಿ ಫಿಸಿಯೋಥೆರಪಿ ಕೇಂದ್ರಕ್ಕೆ ಬೆಂಗಳೂರಿನ ಪಡಾಯ್ ಸರ್ಕಾರೇತರ ಸಂಸ್ಥೆ 72 ಸಾವಿರ ರು. ಮೌಲ್ಕದ ವಿವಿಧ ಸಲಕರಣೆಗಳನ್ನು ಉಚಿತವಾಗಿ ನೀಡಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ. ಮಹದೇವ್ ಹೇಳಿದರು.ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಆವರಣದಲ್ಲಿರುವ ಕೇಂದ್ರದಲ್ಲಿ ಸೋಮವಾರ ಸಲಕರಣೆಗಳನ್ನು ಸ್ವೀಕರಿಸಿ ಅವರು ಮಾತನಾಡಿದರು.ಫಿಸಿಯೋಥೆರಪಿ ಕೇಂದ್ರವು 2012ರಲ್ಲಿ ಆರಂಭಗೊಂಡಿದ್ದು, ಇದೀಗ 30ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಹೊತ್ತಿರುವ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು (ಬಿಐಇಆರ್ಟಿ) ಬೇಸಿಗೆ ರಜೆಯ ವೇಳೆಯೂ ವಿದ್ಯಾರ್ಥಿಗಳಿಗೆ ಚಿಕಿತ್ಸೆ ಸಿಗುವಂತೆ ನೋಡಿಕೊಂಡಿದ್ದಾರೆ.ಇದೀಗ ಕೇಂದ್ರಕ್ಕೆ ಅವಶ್ಯವಾಗಿದ್ದ 5 ಸಿ.ಪಿ. ಚೇರ್ ಗಳು ಮತ್ತು 8 ಸಿ.ಪಿ. ಕಾರ್ನರ್ ಚೇರ್ ಗಳನ್ನು ಉಚಿತವಾಗಿ ನೀಡಿದ್ದಾರೆ. ಬಡಕುಟುಂಬದಲ್ಲಿ ವಿಕಲಚೇತನರಾಗಿ ಜನಿಸಿದ ಮಕ್ಕಳಿಗೆ ಆಶಾಕಿರಣವಾಗಿ ಕೇಂದ್ರ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರಿನ ವೆಲಿಂಗ್ ಕರ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಸಂಸ್ಥೆಯ ನಿರ್ದೇಶಕಿ ಡಾ. ಮಾಧವಿ ಲೋಖಂಡೆ, ಪಢಾಯ್ ಸಂಸ್ಥೆಯ ಸದಸ್ಯ ಮೋಹನ್ಕುಮಾರ್ ಮುಂತಾದವರ ಸಹಕಾರವನ್ನು ಇಲಾಖೆ ಎಂದಿಗೂ ಸ್ಮರಿಸುತ್ತದೆ ಎಂದರು. ಬಿಐಇಆರ್ಟಿಗಳಾದ ತ್ರಿನೇಶ್ ಮತ್ತು ಪ್ರಭಾಕರ್ ಮಾತನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲೂ ಪಢಾಯ್ ಸಂಸ್ಥೆ 65 ಸಾವಿರ ರು. ಮೌಲ್ಯದ ಡಯಾಪರ್ ಗಳು, ಏರ್ ಬ್ಯಾಗ್ ವಾಕರ್ ಗಳನ್ನು ಉಚಿತವಾಗಿ ನೀಡಿದ್ದರು. 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಕಷ್ಟು ಮಕ್ಕಳಲ್ಲಿ ಸಕಾರಾತ್ಮಕ ಬೆಳವಣೀಗೆಗಳು ಆಗಿರುವುದು ಸಮಾಧಾನ ತಂದ ವಿಷಯವಾಗಿದೆ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಬಿಐಆರ್ಟಿಐಗಳಾದ ಸೋಮಶೇಖರ್, ವೀರಭದ್ರಪ್ಪ ಇದ್ದರು.