ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವುದೇ ಸರ್ಕಾರದ ಗುರಿ

| Published : Feb 10 2024, 01:47 AM IST

ಸಾರಾಂಶ

ದಾಬಸ್‌ಪೇಟೆ: ಕನ್ನಡ ಸುವರ್ಣ ಸಂಭ್ರಮಾಚರಣೆ ನೆನಪಿಗಾಗಿ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸೇವೆ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಮಾದಕ ವಸ್ತುಗಳ ನಿಲ್ಲಿಸಲು ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ದಾಬಸ್‌ಪೇಟೆ: ಕನ್ನಡ ಸುವರ್ಣ ಸಂಭ್ರಮಾಚರಣೆ ನೆನಪಿಗಾಗಿ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಸೇವೆ ಜನಮಾನಸದಲ್ಲಿ ಉಳಿಸುವ ನಿಟ್ಟಿನಲ್ಲಿ ಇಡೀ ರಾಜ್ಯದಲ್ಲಿ ಮಾದಕ ವಸ್ತುಗಳ ನಿಲ್ಲಿಸಲು ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ಕಿ ಎನ್ವರೋ ಇಂಜಿನಿಯರ್ಸ್ ಮ್ಯಾನೇಜ್‌ಮೆಂಟ್ ಕಂಪನಿಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

128.98 ಕೋಟಿ ಮೌಲ್ಯದ ಮಾದಕ ವಸ್ತುಗಳ ವಶ:

ಕಳೆದ 3 ವರ್ಷಗಳಿಗೆ ಹೋಲಿಸಿದರೆ 2023ರಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಅತ್ಯಂತ ಹೆಚ್ಚು ಪ್ರಕರಣ ದಾಖಲಿಸಿಕೊಂಡಿದ್ದು, 2023ರಲ್ಲಿ 6764 ಪ್ರಕರಣಗಳನ್ನು ದಾಖಲಿಸಿ 9645 ಕೆಜಿ ಗಾಂಜಾ, 233 ಕೆಜಿ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಂಡು 7297 ಭಾರತೀಯರು, 106 ವಿದೇಶೀಯರು ಸೇರಿದಂತೆ ಒಟ್ಟು 7403 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 128.98 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದರು.

36.65 ಕೋಟಿ ಮೌಲ್ಯದ ಮಾದಕ ವಸ್ತು ನಾಶ:

ಇಂದು ಕೇಂದ್ರ ವಲಯದ 6 ಜಿಲ್ಲೆ, ದಕ್ಷಿಣ ವಲಯದ 5 ಜಿಲ್ಲೆ, ಬೆಂಗಳೂರು ನಗರ, ಮೈಸೂರು ನಗರದಲ್ಲಿ ವಶಪಡಿಸಿಕೊಂಡಿರುವ 3885.5 ಕೆಜಿ ಗಾಂಜಾ, 52.5 ಕೆಜಿ ಎಂಡಿಎಂಎ, ಎಲ್ ಎಸ್ ಡಿ, ಹಶಿಸ್, ಗಾಂಜಾ ಆಯಿಲ್, ಹೆರಾಯಿನ್ ಸೇರಿದಂತೆ ಒಟ್ಟು 36.65 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ ಎಂದರು.

ಇಡೀ ಮನುಕುಲಕ್ಕೆ ಡ್ರಗ್ಸ್ ಎಂಬ ಮಾರಿ ಸವಾಲಾಗಿದೆ, ಯುವಕರನ್ನು ಅತೀ ಹೆಚ್ಚು ದಾರಿತಪ್ಪಿಸುತ್ತಿರುವುದು ಮಾದಕ ವಸ್ತುಗಳು, ಸಣ್ಣ ರಾಷ್ಟ್ರಗಳು ಮಾದಕ ವಸ್ತು ಬಗ್ಗೆ ಅಸಡ್ಡೆ ಭಾವನೆ, ಮನುಕುಲಕ್ಕೆ ಮಾದಕ ವಸ್ತು ವ್ಯಾಪಿಸುವಂತೆ ಆಗಿದೆ. ಡ್ರಗ್ಸ್ ಮುಕ್ತ ಜಿಲ್ಲೆಯ ನಿರ್ಮಾಣ ಜವಾಬ್ದಾರಿಯನ್ನು ಆಯಾ ಎಸ್.ಪಿ.ಗೆ ವಹಿಸಿದ್ದೇವೆ ಎಂದರು.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ:

ಇಡೀ ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಹಾಗೂ ನಿಯಂತ್ರಣಕ್ಕೆ ನಮ್ಮ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರತಿ ಪೊಲೀಸ್ ಸಿಬ್ಬಂದಿಯೂ ಕಾರ್ಯಾಚರಣೆ ಮಾಡಿ ಹತೋಟಿಯಲ್ಲಿಡಲು ಶ್ರಮಿಸುತ್ತಿರುವ ರಾಜ್ಯ ಪೊಲೀಸರು ಮತ್ತು ರೈಲ್ವೇ ಪೊಲೀಸರ ಕಾರ್ಯಕ್ಕೆ ರಾಜ್ಯ ಸರ್ಕಾರದ ವತಿಯಿಂದ ಪ್ರಶಂಶಿಸುತ್ತೇನೆ ಎಂದು ಹೇಳಿದರು.

ಕಠಿಣ ನಿಯಮಗಳ ಜಾರಿಗೆ ಚಿಂತನೆ:

ಮಾದಕ ವಸ್ತುಗಳನ್ನು ನಿಯಂತ್ರಿಸಲು ಹಾಗೂ ಪತ್ತೆ ಹಚ್ಚಲು ರಾಜ್ಯ ಪೊಲೀಸರಿಗೆ ಹೆಚ್ಚಿನ ತರಭೇತಿ ನೀಡಲಾಗುವುದು, ಹೊಸ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತದೆ ಹಾಗೂ ಪೊಲೀಸರಿಗೆ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಮಾರಾಟ ಮಾಡುವ, ವ್ಯಸನಿಗಳಿಗೆ ನೀಡುವ ಗಾಂಜಾ ಪ್ಲೇಡರ್ ಗಳ ಅಸ್ತಿಮುಟ್ಟಗೋಲು ಸೇರಿದಂತೆ ಕಠಿಣ ನಿಯಮಗಳನ್ನು ಜಾರಿಗೆ ತರಲು ಸರ್ಕಾರದ ಮಟ್ಟದಲ್ಲಿ ಚಿಂತನೆ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಡಿಜಿ, ಐಜಿಪಿ ಅಲೋಕ್ ಡಾ.ಮೋಹನ್ ಕುಮಾರ್, ಕೇಂದ್ರ ವಲಯ ಐಜಿಪಿ ಡಾ.ರವಿಕಾಂತೇಗೌಡ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಅಪರಾಧ ಹಾಗೂ ತಾಂತ್ರಿಕ ಸೇವಾ ವಿಭಾಗದ ಎಡಿಜಿಪಿ ಉಮೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮೈಸೂರು ನಗರ ಆಯುಕ್ತ ರಮೇಶ್ ಭಾನುತ್, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಪರ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ ಪಿಗಳು, ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ಪೋಟೋ 1 :

ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ಕಿ ಕಂಪನಿಯಲ್ಲಿ ಹಮ್ಮಿಕೊಂಡಿದ್ದ ವಶಪಡಿಸಿಕೊಂಡ ಮಾದಕ ವಸ್ತುಗಳ ವಿನಾಶ ಅಭಿಯಾನವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.ಪೋಟೋ 2 :

ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ವೀಕ್ಷಿಸುತ್ತಿರುವುದು.ಪೋಟೋ 3 :

ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ವಶಪಡಿಸಿಕೊಂಡ ಮಾದಕ ವಸ್ತುಗಳನ್ನು ಬಾಯ್ಲರ್‌ಗೆ ಹಾಕುವ ಮೂಲಕ ನಾಶಪಡಿಸಿದರು.