ಬಡವರ ಮಕ್ಕಳಿಗೆ ಇಂಗ್ಲಿಷ್, ವಿಜ್ಞಾನ, ಗಣಿತ ಕಲಿಸಲು ಸರ್ಕಾರದ ನಿರಾಸಕ್ತಿ!

| Published : Jun 21 2025, 12:49 AM IST

ಸಾರಾಂಶ

ನನ್ನ ಶಾಲೆಯ ಬಡ ಮಕ್ಕಳು ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ

ಮಲ್ಲಿಕಾರ್ಜುನ ಸಿದ್ದಣ್ಣವರ ಹುಬ್ಬಳ್ಳಿ

ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತ್ಯಂತ ಉಮೇದಿಯಿಂದ "ಆಂಗ್ಲ ಮಾಧ್ಯಮ ಶಿಕ್ಷಣ " ಆರಂಭಿಸಿರುವ ರಾಜ್ಯ ಸರ್ಕಾರ, ಸಾವಿರಾರು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯ ಬೋಧಿಸುವ ಅತಿಥಿ ಶಿಕ್ಷಕರನ್ನೂ ನೇಮಿಸಲು ಹಿಂದೇಟು ಹಾಕುತ್ತಿದೆ!

ಏಷಿಯಾದಲ್ಲಿಯೇ ಅತಿ ದೊಡ್ಡ ಎಪಿಎಂಸಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿರುವ ಇಲ್ಲಿನ "ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ "ಯ ಹಮಾಲಿ ಕಾರ್ಮಿಕರ ಮಕ್ಕಳಿಗಾಗಿ ಎರಡೂವರೆ ದಶಕಗಳ ಹಿಂದೆ ಆರಂಭವಾಗಿರುವ "ಶ್ರೀಮತಿ ಶಿವಲಿಂಗಮ್ಮ ಶಂಕರಗೌಡ ಬಾಳನಗೌಡ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ "ಯಲ್ಲಿ ಓದುತ್ತಿರುವ 5,6,7,8ನೇ ತರಗತಿಗೆ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯ ಬೋಧಿಸುವ ಶಿಕ್ಷಕರೇ ಇಲ್ಲ.

ಅಕ್ಷರ ವಂಚಿತ ಹಮಾಲಿ ಕಾರ್ಮಿಕರ ಮಕ್ಕಳ ಎದೆಯಲ್ಲಿ ವಿದ್ಯೆಯ ಜ್ಯೋತಿ ಬೆಳಗಿಸಿದ ಮಹೋನ್ನತ ಕಾರ್ಯಕ್ಕಾಗಿ ಇಲ್ಲಿನ ಶಿಕ್ಷಕ ರಾಮು ಮೂಲಗಿ ಅವರಿಗೆ "ಕನ್ನಡಪ್ರಭ ವರ್ಷದ ವ್ಯಕ್ತಿ " ಪ್ರಶಸ್ತಿ ನೀಡಿ ಗೌರವಿಸಿತ್ತು. ಇದೀಗ ಸರ್ಕಾರದ ದ್ವಂದ್ವ ನಿಲುವಿನಿಂದಾಗಿ ಪ್ರಮುಖ ವಿಷಯ ಬೋಧಿಸುವ ಶಿಕ್ಷಕರಿಲ್ಲದೇ ಈ ಶಾಲೆಯ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಇದೊಂದೇ ಅಲ್ಲ ರಾಜ್ಯದಲ್ಲಿ ಇಂಥ ಸಾವಿರಾರು ಶಾಲೆಗಳು ಈ ಸಮಸ್ಯೆ ಎದುರಿಸುತ್ತಿವೆ.ಮಕ್ಕಳ ಸಂಖ್ಯೆ ಕುಸಿತ: ಇಲ್ಲಿನ ಪ್ರಧಾನ ಗುರುಮಾತೆ ಎ.ಪಿ.ಬೀಡಿಕರ್‌ "ನನ್ನ ಶಾಲೆಯ ಬಡ ಮಕ್ಕಳು ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯ ಬೋಧನೆಯಿಂದ ವಂಚಿತರಾಗುತ್ತಿದ್ದಾರೆ. ತಕ್ಷಣ ಈ ವಿಷಯ ಬೋಧಿಸುವ ಅತಿಥಿ ಶಿಕ್ಷಕರನ್ನಾದರೂ ಕೊಡಿ " ಎಂದು ಹುಬ್ಬಳ್ಳಿ ಗ್ರಾಮೀಣ ಬಿಇಒ ಉಮೇಶ ಬೊಮ್ಮಕ್ಕನವರ ಅವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಅವರು ನಿಮ್ಮಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಈಗಿದ್ದವರೇ ಎಲ್ಲ ವಿಷಯ ಬೋಧಿಸಬೇಕು. ಬೇರೆ ಶಿಕ್ಷಕರನ್ನು ಕೊಡಲು ಸಾಧ್ಯವಿಲ್ಲ ಎಂದಿದ್ದಾರಂತೆ.

ಈ ಪೈಪೋಟಿ ಯುಗದಲ್ಲಿ ತಮ್ಮ ಮಕ್ಕಳೂ ಗುಣಮಟ್ಟದ ಶಿಕ್ಷಣ ಹೊಂದಲಿ ಎನ್ನುವುದು ಎಲ್ಲ ಪಾಲಕರ ಕನಸು. ಹಾಗಾಗಿ ಇಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳನ್ನು ಬೋಧಿಸುವ ಶಿಕ್ಷಕರು ಇಲ್ಲ ಎನ್ನುವ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಅದೇ ಕಾಲಕ್ಕೆ ಮಕ್ಕಳ ಸಂಖ್ಯೆ ಕಡಿಮೆ ಇದೆ ಎನ್ನುವ ಕಾರಣವೊಡ್ಡಿ ಸರ್ಕಾರ ಹೆಚ್ಚಿನ ಶಿಕ್ಷಕರನ್ನು ಇಲ್ಲಿಗೆ ನೇಮಿಸುತ್ತಿಲ್ಲ.

ಈ ದ್ವಂದ್ವ ಹೀಗೆಯೇ ಮುಂದುವರೆದರೆ ಇಂಥ ಶಾಲೆಗಳ ಬಾಗಿಲಿಗೆ ಬೀಗ ಜಡಿಯುವುದು ಸರ್ಕಾರದ ಮತ್ತೊಂದು ಗ್ಯಾರಂಟಿ ಕಾರ್ಯಕ್ರಮ ಆಗಬಹುದು ಎನ್ನುವ ಆಕ್ರೋಶದ ಮಾತುಗಳು ಪಾಲಕರಿಂದ ಕೇಳಿ ಬರುತ್ತಿವೆ.ಕೊರೋನಾ ಅವಾಂತರ: ಕೊರೋನಾ ಹಾವಳಿಗೂ ಮುನ್ನ 1 ರಿಂದ 7ನೇ ತರಗತಿ ವರೆಗೆ ಇದ್ದ ಈ ಶಾಲೆಯಲ್ಲಿ 135 ರಿಂದ 150 ಮಕ್ಕಳು ಓದುತ್ತಿದ್ದರು. 6 ಜನ ಶಿಕ್ಷಕರು ಇದ್ದರು. ಕೊರೋನಾ ಬಳಿಕ ಮಕ್ಕಳ ಸಂಖ್ಯೆ ಕಡಿಮೆಯಾಯಿತು. ಇಬ್ಬರು ಶಿಕ್ಷಕರು ಸೇವಾ ನಿವೃತ್ತಿಯಾದರು. ಯರವಲು ಬಂದಿದ್ದ ಒಬ್ಬ ಶಿಕ್ಷಕಿ ಮೂಲ ಶಾಲೆಗೆ ಹೋದರು.

ಈಗ ಈ ಶಾಲೆಯಲ್ಲಿ 8ನೇ ತರಗತಿಯೂ ಆರಂಭವಾಗಿದೆ. 1 ರಿಂದ 8ನೇ ತರಗತಿ ವರೆಗೆ ಒಟ್ಟು 100 ವಿದ್ಯಾರ್ಥಿಗಳು ಇದ್ದಾರೆ. ಇನ್ನೂ ಪ್ರವೇಶ ಪ್ರಕ್ರೀಯೆ ಮುಂದುವರೆದಿದೆ. ಆದರೆ, ಪ್ರಧಾನ ಶಿಕ್ಷಕಿ ಸೇರಿದಂತೆ 4 ಜನ ಶಿಕ್ಷಕರು ಮಾತ್ರ ಇದ್ದಾರೆ. ಇವರಲ್ಲಿ ಯಾರಿಗೂ 5,6,7,8 ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾಗಿ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳನ್ನು ಬೋಧಿಸಲು ಬರುವುದಿಲ್ಲ.

ಪರಿಸ್ಥಿತಿ ಹೀಗಿದ್ದಾಗ್ಯೂ ಬಿಇಒ ಅವರು ಮಕ್ಕಳ ಸಂಖ್ಯೆ ಕೊರತೆಯ ನೆಪ ಹೇಳಿ ಅತಿಥಿ ಶಿಕ್ಷಕರನ್ನೂ ನೀಡಲು ನಿರಾಕರಿಸಿರುವುದು ಈ ಬಡವರ ಮಕ್ಕಳ ಶಾಲೆಗೆ ಬೀಗ ಬೀಳುವುದು ಗ್ಯಾರಂಟಿ ಅನಿಸುತ್ತಿದೆ.

ಈ ಪರಿಸ್ಥಿತಿಯನ್ನು ಕಂಡೂ ಸಹ ಯಾವ ಪಾಲಕರು ತಮ್ಮ ಮಕ್ಕಳಿಗೆ ವಿದ್ಯೆಯಿಂದ ವಂಚಿಸಲು ಮುಂದಾಗುತ್ತಾರೆ?

ಈ ಶಾಲೆಗೆ ನಿವೇಶನ, ಕಟ್ಟಡ, ಕಂಪೌಂಡ್‌, ಶೌಚಾಲಯ, ಟೇಬಲ್- ಕುರ್ಚಿ ಇತರ ಸಾಮಗ್ರಗಳು ಸೇರಿದಂತೆ ಎಲ್ಲವನ್ನೂ ದಾನಿಗಳ ಮೂಲಕ ಕೊಡಿಸಿದ್ದೇವೆ. ಇಷ್ಟಿದ್ದಾಗ್ಯೂ ಸರ್ಕಾರ ಶಿಕ್ಷಕರನ್ನು ಕೊಡಲು ಹಿಂದೇಟು ಹಾಕುವುದು ಸರಿಯಲ್ಲ ಎಂದು ಅಧ್ಯಕ್ಷರು, ವ್ಯಾಪಾರಸ್ಥರ ಸಂಘ-ಎಪಿಎಂಸಿ, ಹುಬ್ಬಳ್ಳಿ ಚನ್ನಬಸಪ್ಪ ಪಾಟೀಲ ತಿಳಿಸಿದ್ದಾರೆ.

ನಮ್ಮಂತೆ ನಮ್ಮ ಮಕ್ಕಳೂ ಹಮಾಲಿಗಳು ಆಗಬಾರದೆಂದು ಶಾಲೆಗೆ ಕಳಿಸುತ್ತಿದ್ದೇವೆ. ಈ ಶಾಲೆಯಲ್ಲಿ ಇಂಗ್ಲಿಷ್, ವಿಜ್ಞಾನ, ಗಣಿತ ಕಲಿಸುವ ಶಿಕ್ಷಕರೇ ಇಲ್ಲದೇ ನಮ್ಮ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ತಕ್ಷಣ ಶಿಕ್ಷಕರನ್ನು ನೇಮಿಸಬೇಕು ಎಂದು ಹುಬ್ಬಳ್ಳಿ ಎಪಿಎಂಸಿ ಹಮಾಲಿ ಕಾರ್ಮಿಕರ ಕಾಲೋನಿ ಮುಖಂಡ ದುರಗಪ್ಪ ಚಿಕ್ಕತುಂಬಳ