ಸಾರಾಂಶ
ರಾಜ್ಯ ಸರ್ಕಾರದ ಈ ಕ್ರಮವನ್ನು ನಾನು ವಿರೋಧಿಸುತ್ತೇನೆ. ಈ ಇಬ್ಬಗೆ ನೀತಿಯನ್ನು ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ವಿಜಯಪುರ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶ ಆಗಿದ್ದರೆ ಅಂತಹ ಅನುದಾನಿತ ಶಾಲೆಗಳ ಶಿಕ್ಷಕರ ಬಡ್ತಿಯನ್ನು ಕಡಿತಗೊಳಿಸುವ ಆದೇಶ ರಾಜ್ಯ ಸರ್ಕಾರ ಮಾಡಿದೆ. ರಾಜ್ಯ ಸರ್ಕಾರದ ಈ ಕ್ರಮವನ್ನು ನಾನು ವಿರೋಧಿಸುತ್ತೇನೆ. ಈ ಇಬ್ಬಗೆ ನೀತಿಯನ್ನು ಖಂಡಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 1ನೇ ತರಗತಿಯಿಂದ ಯಾವುದೇ ಪರೀಕ್ಷೆಗಳನ್ನು ನಡೆಸದೆ ನೇರವಾಗಿ 10ನೇ ತರಗತಿಗೆ ಪರೀಕ್ಷೆಯ ವ್ಯವಸ್ಥೆ ಮಾಡಿ, ಈಗ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎನ್ನುವುದು ಎಷ್ಟು ಸರಿ?. ಎಸ್ಎಸ್ಎಲ್ಸಿ ಪರೀಕ್ಷೆ ಹಂತ ಒಂದು, ಎರಡು ಹಾಗೂ ಮೂರು ಎಂದು ಮಾಡಲಾಗಿದೆ.
ಇನ್ನೂ 3ನೇ ಹಂತದ ಎಸ್ಎಸ್ಎಲ್ಸಿ ಪರೀಕ್ಷೆಯೇ ಮುಗಿದಿಲ್ಲ. ಸರ್ಕಾರದ ಈ ಆದೇಶ ಸರ್ಕಾರಿ ಶಾಲೆಗಳಿಗೆ, ಅಲ್ಲಿನ ಶಿಕ್ಷಕರಿಗೆ ಅನ್ವಯವಾಗದೆ ಕೇವಲ ಅನುದಾನಿತ ಶಾಲೆಯವರಿಗೆ ಮಾತ್ರ ಅನ್ವಯವಾಗುತ್ತದೆ. ಹಾಗಾದರೇ ರಾಜ್ಯ ಸರ್ಕಾರ ಅನುದಾನಿತ ವ್ಯವಸ್ಥೆಯನ್ನು ಟಾರ್ಗೆಟ್ ಮಾಡಿದಂತಿದ್ದು, ಹೀಗೆ ಮಾಡಬಾರದು. ಸರ್ಕಾರ ಅನುದಾನಿತ ಶಾಲೆಗಳಲ್ಲಿ ವ್ಯವಸ್ಥೆ ಹೇಗೆ ನೋಡಿಕೊಳ್ಳುತ್ತಿದ್ದೇವೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ. ಯಾಕೆಂದರೆ ಕಳೆದ 10 ವರ್ಷಗಳಿಂದ ಇಲ್ಲಿನ ಖಾಲಿ ಹುದ್ದೆಗಳನ್ನೇ ಭರ್ತಿ ಮಾಡಿಲ್ಲ. ಹೀಗಿದ್ದು ಕೇವಲ ಫಲಿತಾಂಶ ಮಾತ್ರ ನೋಡದೆ, ಪ್ರಗತಿ ಹೇಗೆ ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದರು.
ಇನ್ನು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ತತ್ತಿ ವಿತರಣೆ, ಬಾಳೆಹಣ್ಣು ವಿತರಣೆ, ಕೊಠಡಿಗಳ ಸ್ವಚ್ಚ ಮಾಡುವ ಕೆಲಸವನ್ನು ಶಿಕ್ಷಕರೇ ಮಾಡಬೇಕು. ಅಲ್ಲದೆ ಜನಗಣತಿ, ಜಾತಿ ಗಣತಿ, ಒಳ ಮೀಸಲಾತಿ ಗಣತಿ, ಬಿಎಲ್ಒ ಕೆಲಸ, ಎಲ್ಲ ರೀತಿಯ ಚುನಾವಣೆಗಳ ಕೆಲಸವನ್ನು ಶಿಕ್ಷಕರೇ ಮಾಡಬೇಕಿದೆ. ನಿಜವಾಗಿಯೂ ಶಿಕ್ಷಕರ ನೇಮಕ ಯಾವುದಕ್ಕೇ ನೇಮಕ ಮಾಡಿಕೊಳ್ಳಲಾಗಿದೆ ಎಂಬ ಪ್ರಜ್ಞೆಯೇ ಈ ಸರ್ಕಾರಕ್ಕಿಲ್ಲ.
ಸರ್ಕಾರಿ ಶಿಕ್ಷಕರ ನೇಮಕಾತಿಯಲ್ಲಿಯೂ ಸಹ ಶೇ.30 ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಆರೋಪಿಸಿದರು.ಅನುದಾನಿತ ಶಾಲೆಗಳ ಸಂಘದ ಅಧ್ಯಕ್ಷ ಎಲ್.ಬಿ.ಪಾಟೀಲ ಮಾತನಾಡಿ, ಖಾಸಗಿ ಅನುದಾನಿತ ಶಾಲೆಗಳಿಗೆ ಸಾಕಷ್ಟು ಕಠಿಣ ನಿಯಮಗಳನ್ನು ಹಾಕಿದ್ದಾರೆ. ಅವುಗಳ ಪಾಲನೆಗೆ ಸಾಕಷ್ಟು ಸಮಯಾವಕಾಶವನ್ನೂ ಕೊಡಬೇಕು. ಸರ್ಕಾರದ ಈ ಕಠಿಣ ನಿಯಮಗಳಿಂದಾಗಿ ಅನುದಾನಿತ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ.
2015ರಿಂದ ಇಲ್ಲಿಯವರೆಗೂ ಖಾಲಿ ಹುದ್ದೆಗಳ ಭರ್ತಿಯಾಗಿಲ್ಲ. ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇಲ್ಲದ ನಿಯಮವನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಆದೇಶ ಮಾಡಿದ್ದಾರೆ. 10 ವರ್ಷಗಳಿಂದ ಶಿಕ್ಷಕರೇ ಇಲ್ಲದೆ ಕೆಲವು ಶಾಲೆಗಳನ್ನು ಅರೆಕಾಲಿಕ ಶಿಕ್ಷಕರ ಮೇಲೆ ನಡೆಸಲಾಗುತ್ತಿದೆ. ಅನಗತ್ಯವಾಗಿ ಶಿಕ್ಷಕರ ಮೇಲೆ ಹೊರೆ ಹಾಕಿದರೆ ಅಸಹಕಾರ ಚಳುವಳಿ ಮಾಡುವ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚಂದ್ರಶೇಖರ ಕವಟಗಿ, ವಿಜಯ ಜೋಶಿ ಉಪಸ್ಥಿತರಿದ್ದರು.