ಸರ್ಕಾರ ಶಿಕ್ಷಕರ ಕೊರತೆ ನೀಗಿಸಲಿ: ಹೊರಟ್ಟಿ

| Published : Jul 19 2025, 01:00 AM IST

ಸರ್ಕಾರ ಶಿಕ್ಷಕರ ಕೊರತೆ ನೀಗಿಸಲಿ: ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಒಂದು ತರಗತಿಗೆ ಒಬ್ಬ ಶಿಕ್ಷಕರನ್ನು ನೀಡುವ ಕೆಲಸ ಮಾಡಬೇಕು. ಇದರ ಜತೆಗೆ ಪ್ರತಿ ಶಾಲೆಗೂ ಡಿ ಗ್ರೂಪ್ ನೌಕರರನ್ನು ನೇಮಿಸುವ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ಚನ್ನಪಟ್ಟಣ: ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನು ನೀಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಒಂದು ತರಗತಿಗೆ ಒಬ್ಬ ಶಿಕ್ಷಕರನ್ನು ನೀಡುವ ಕೆಲಸ ಮಾಡಬೇಕು. ಇದರ ಜತೆಗೆ ಪ್ರತಿ ಶಾಲೆಗೂ ಡಿ ಗ್ರೂಪ್ ನೌಕರರನ್ನು ನೇಮಿಸುವ ಕೆಲಸ ಮಾಡಬೇಕು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ನೀಡಿದರು.

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಎಚ್.ಎಂ.ವೆಂಕಟಪ್ಪ ಸುಮಾರು ೧೪ ಕೋಟಿ ವೆಚ್ಚದಲ್ಲಿ ಕಣ್ವ ಫೌಂಡೇಷನ್‌ನಿಂದ ನಿರ್ಮಿಸಿರುವ ಶ್ರೀಮತಿ ಚನ್ನಮ್ಮ ಮಂಚೇಗೌಡ ಕರ್ನಾಟಕ ಪಬ್ಲಿಕ್ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಒಂದರಿಂದ ೧೦ನೇ ತರಗತಿ ವರೆಗೆ ಒಂದೇ ಕಾಂಪೌಂಡ್ ನಲ್ಲಿ ಶಾಲೆ ಇದ್ದರೆ ಅದು ಪಬ್ಲಿಕ್ ಶಾಲೆ. ಇದನ್ನ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಶಿಕ್ಷಕರ ಹೊರೆ ಕಡಿಮೆ ಮಾಡಿ ಪಾಠ ಮಾಡಲು ಅವಕಾಶ ಕೊಡಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಶಿಕ್ಷಣ ಸಚಿವರು ಇದರ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಡಾ.ವೆಂಕಟಪ್ಪ ತಾವು ಕಲಿತ ಶಾಲೆಗೆ ಕೊಡುಗೆ ನೀಡಬೇಕು ಎಂದು ೧೪ ಕೋಟಿ ಖರ್ಚು ಮಾಡಿ ಶಾಲೆ ಕಟ್ಟಿಸಿಕೊಟ್ಟಿದ್ದಾರೆ. ಅವರ ಈ ಕಾರ್ಯ ಎಲ್ಲರಿಗೂ ಮಾದರಿ. ಸರ್ಕಾರಿ ಶಾಲೆಗಳಲ್ಲಿ ಓದಿ ದೊಡ್ಡದೊಡ್ಡ ಹುದ್ದೆಯಲ್ಲಿರುವವರು ಓದಿದ ಶಾಲೆಗಳ ಬಗ್ಗೆ ಗಮನಕೊಡಬೇಕು. ಪ್ರತಿ ತಾಲೂಕಿಗೂ ಇಂಥ ಒಂದು ಮಾದರಿ ಶಾಲೆ ಸಿಕ್ಕರೆ ವಿದ್ಯಾರ್ಥಿಗಳಿಗೆ ಅನುಕೂಲ ಎಂದರು.

ನಮ್ಮ ತಾಲೂಕಿನಲ್ಲೂ ಸರ್ಕಾರಿ ಶಾಲೆಗೆ ನಾನು ಏಳು ಎಕರೆ ನೀಡಿದ್ದು, ಸುಮಾರು ೩ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಿಸಲಾಗಿದೆ. ಇಂದು ಆ ಶಾಲೆಯಲ್ಲಿ ಸುಮಾರು ೧೬೦೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರಿ ಶಾಲೆಗಳನ್ನು ಉತ್ತಮ ಪಡಿಸಲು ನಾವೆಲ್ಲ ಸಹಕಾರ ನೀಡಬೇಕು. ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಆಗ ವೆಂಕಟಪ್ಪನವರು ೧೪ ಕೋಟಿ ಹಣ ನೀಡಿದ್ದು ಸಾರ್ಥಕವಾಗುತ್ತದೆ ಎಂದರು.