ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಒಗ್ಗೂಡಿ ಸಾಗಿದರೆ ಮಾತ್ರ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಬಹುದು ಎಂದು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್. ಅಭಿಪ್ರಾಯಪಟ್ಟರು.

ಸಾಗರ: ಪತ್ರಕರ್ತರು ಮತ್ತು ಪತ್ರಿಕಾ ವಿತರಕರು ಒಗ್ಗೂಡಿ ಸಾಗಿದರೆ ಮಾತ್ರ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಬಹುದು ಎಂದು ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್ ಎನ್. ಅಭಿಪ್ರಾಯಪಟ್ಟರು. ಪತ್ರಿಕಾ ವಿತರಕರ ಸಂಘದ ವತಿಯಿಂದ ತಾ. ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾಗಿರುವ ಮಹೇಶ್ ಹೆಗಡೆ ಅವರನ್ನು ಸನ್ಮಾನಿಸಿ ಮಾತನಾಡಿ, ಪತ್ರಕರ್ತರು ವರದಿ ಮಾಡಿದರೆ, ಪತ್ರಿಕಾ ವಿತರಕರು ಮನೆಮನೆಗೆ ಪತ್ರಿಕೆ ಹಂಚುವ ಮೂಲಕ ಸುದ್ದಿಯನ್ನು ತಲುಪಿಸುವ ಕೆಲಸ ಮಾಡುತ್ತಾರೆ ಎಂದರು.

ಸರ್ಕಾರ ಪತ್ರಕರ್ತರಿಗೆ ಎಲ್ಲ ಸೌಲಭ್ಯ ನೀಡಿದಂತೆ ಪತ್ರಿಕಾ ವಿತರಕರಿಗೂ ಎಲ್ಲ ಸೌಲಭ್ಯ ನೀಡಬೇಕು. ಉಚಿತ ವಿಮಾ ಯೋಜನೆ, ಬಸ್ ಯೋಜನೆ ಸಹ ವಿತರಕರಿಗೆ ಸಿಗಬೇಕು. ಸರ್ಕಾರ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ್ ಹೆಗಡೆ, ವಿತರಕರ ಸಮಸ್ಯೆಗಳಿಗೆ ಪತ್ರಕರ್ತರ ಸಂಘ ಸದಾ ಸ್ಪಂದಿಸುತ್ತಾ ಬರುತ್ತಿದೆ. ಪತ್ರಕರ್ತರು ಮತ್ತು ವಿತರಕರು ಒಂದೆ ನಾಣ್ಯದ ಎರಡು ಮುಖವಿದ್ದಂತೆ. ಸರ್ಕಾರ ಇಬ್ಬರಿಗೂ ಸಮಾನ ಸೌಲಭ್ಯ ನೀಡಬೇಕು. ಹಿಂದೆ ಪತ್ರಕರ್ತರ ಸಂಘ ಸಹ ವಿತರಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಒತ್ತಾಯ ಮಾಡಿದೆ. ಹಿಂದಿನಿಂದಲೂ ತಾಲೂಕು ಪತ್ರಕರ್ತರ ಸಂಘ ವಿತರಕರ ಹಿತಕಾಯುವ ನಿಟ್ಟಿನಲ್ಲಿ ಶ್ರಮಿಸುತ್ತದೆ ಎಂದು ಹೇಳಿದರು. ಮಂಜುನಾಥ್, ಎನ್.ರಾಘವೇಂದ್ರ, ಬಶೀರ್, ಅಭಿ, ವಿರೇಶ್, ಅರವಿಂದ, ಗಜೇಂದ್ರ, ಕಿರಣ್,, ಸುಹಾಸ್ ಇನ್ನಿತರರು ಹಾಜರಿದ್ದರು.